UN NETWORKS
ಉಳ್ಳಾಲ : ಮಾದಕ ದ್ರವ್ಯ ವ್ಯಸನದಿಂದ ಆರೋಗ್ಯದ ಜೊತೆ ವ್ಯಕ್ತಿತ್ವ, ಮನೆಮಂದಿಯ ಗೌರವವೇ ಹಾಳಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಉಳ್ಳಾಲ ಪೊಲೀಸ್ ಠಾಣಾ ಉಪನಿರೀಕ್ಷಕ ಗುರುಕಾಂತಿ ಅಭಿಪ್ರಾಯಪಟ್ಟರು.


ಉಳ್ಳಾಲ ಸದ್ಭಾವನಾ ವೇದಿಕೆ ಮತ್ತು ಪೊಸಕುರಲ್ ಬಳಗದ ವತಿಯಿಂದ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲೆಯಲ್ಲಿ ನಡೆದ ಮಾದಕ ದ್ರವ್ಯ ವ್ಯಸನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಾದಕ ವ್ಯಸನದಿಂದಾಗುವ ಅನಾಹುತಗಳನ್ನು ತಿಳಿದು ಜಾಗರೂಕರಾಗಿರುವುದು ಅಗತ್ಯ. ಇಂತಹ ಚಟುವಟಿಕೆಗಳು ಕಂಡು ಬಂದಾಗ ಶಿಕ್ಷಕರು, ಮನೆಯವರ ಗಮನಕ್ಕೆ ತರಬೇಕು. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು. ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿ, ಮಾದಕ ದ್ರವ್ಯದ ಕುರಿತು ವಿದ್ಯಾರ್ಥಿಗಳು ಸದಾ ಜಾಗೃತಿ ವಹಿಸಬೇಕು. ಅದರಂತೆ ಪ್ರಸ್ತುತ ದಿನಗಳಲ್ಲಿ ಅಗತ್ಯವಾದ ನೀರಿನ ಬಳಕೆ, ನೀರಿಂಗಿಸುವಿಕೆ ಬಗ್ಗೆಯೂ ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಆನಂದಾಶ್ರಮ ಶಾಲಾ ಮುಖ್ಯೋಪಧ್ಯಾಯ ಗುರುಮೂರ್ತಿ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ಶ್ರೀನಿವಾಸ್ ಶೆಣೈ ಸ್ವಾಗತಿಸಿದರು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದ್ಭಾವನಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅನ್ವರ್ ವಂದಿಸಿದರು. ಸದಸ್ಯ ಅಬ್ದುಲ್ ಕರೀಂ ಕಾರ್ಯಕ್ರಮ ನಿರೂಪಿಸಿದರು.


