UN NETWORKS
ಉಳ್ಳಾಲ : `ದರ್ಗಾಕ್ಕೆ ಟೆಂಪೋ, ಲಾರಿಯಲ್ಲಿ ಜನ ಬರುವುದನ್ನು ತಪ್ಪಿಸಲು ಉಳ್ಳಾಲ, ಧರ್ಮಸ್ಥಳ ಮೂಲಕ ಜಾವಗಲ್ ತಲುಪುವ ಸೌಹಾರ್ದ ಸರ್ಕಾರಿ ಬಸ್ ವ್ಯವಸ್ಥೆ ಆರಂಭಿಸುವ ಯೋಜನೆ ರೂಪಿಸಲಾಗಿದ್ದು ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಬಳಿ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರೀ ನಿವಾಸಕ್ಕೆ ಭಾನುವಾರ ಶಂಕುಸ್ಥಾಪನೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಳ್ಳಾಲಕ್ಕೆ ಬರುವ ಹೊರ ಊರಿನವರಿಗೆ ಯಾತ್ರಿಕರಿಗೆ ಸಮಸ್ಯೆಯಾಗುವುದನ್ನು ತಡೆಯುವ ಉದ್ದೇಶದಿಂದ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯಾತ್ರಿ ನಿವಾಸಕ್ಕೆ 75 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು ಅಗತ್ಯವಿದ್ದರೆ ಮುಂದೆ ಮತ್ತೆ 75 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗುವುದು .ಉಳ್ಳಾಲದಲ್ಲೂ ಮಂಗಳೂರಿನಂತೆ ದೊಡ್ಡ ಕಟ್ಟಡಗಳು ಬರಬೇಕಿದ್ದರೆ ಒಳಚರಂಡಿ, ಕುಡಿಯುವ ನೀರಿನ ಸಮಸ್ಯೆ ಇರಬಾರದು ಎನ್ನುವ ಕಾರಣಕ್ಕೆ ಶಾಶ್ವತ ಪರಿಹಾರಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ರಾಜಮಾರ್ಗ ನಿರ್ಮಾಣವಾಗಿದ್ದು ಮತ್ತೆ 12 ಕೋಟಿ ರೂಪಾಯಿ ರಸ್ತೆ ಅಭಿವೃದ್ಧಿಗೆ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಉಳ್ಳಾಲದ ರಸ್ತೆಗಳು ಜಿಲ್ಲೆಯಲ್ಲೇ ಮಾದರಿ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಉಳ್ಳಾಲದ ಇತಿಹಾಸ ಮತ್ತೆ ಮರುಕಳಿಸಬೇಕು ಎನ್ನುವ ನೆಲೆಯಲ್ಲಿ ತಾಲೂಕು ಘೋಷಣೆ ಮಾಡಲಾಗಿದೆ ಎಂದರು.
ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿ, ಗಂಜಿ ಕೇಂದ್ರಕ್ಕೆ 25 ಲಕ್ಷ, ಸಭಾಂಗಣ ಚಪ್ಪರಕ್ಕೆ 10 ಲಕ್ಷ ಅನುದಾನ ಅಗತ್ಯವಿದೆ. ಯಾತ್ರೀ ನಿವಾಸಕ್ಕೆ ಹೆಚ್ಚಿನ ಅನುದಾನ ಅಗತ್ಯವಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದರ್ಗಾಕ್ಕೆ ಬರುವುದರಿಂದ ಹನ್ನೊಂದು ಕೋಣೆಗಳು ಯಾತ್ರೀ ನಿವಾಸಕ್ಕೆ ಸಾಕಾಗದು. ಮುಂದಿನ ವರ್ಷ ಉರೂಸ್ ನಡೆಯುವುದರಿಂದ ಹೆಚ್ಚಿನ ಕೆಲಸ ನಡೆಯಬೇಕಾಗಿದೆ ಎಂದರು. ಉಳ್ಳಾಲ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಬಾಖವಿ, ಅರಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನುಲ್ ಫೈಝಿ ತೋಡಾರ್, ಕ್ರೀಡಾ ಸಚಿವ ರಹೀಂಖಾನ್, ದರ್ಗಾ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ನೌಷಾದ್ ಅಲಿ, ಅಝಾದ್ ಇಸ್ಮಾಯಿಲ್, ಸದಸ್ಯರಾದ ಫಾರೂಕ್ ಉಳ್ಳಾಲ್, ಅಯೂಬ್ ಮಂಚಿಲ, ಅರೆಬಿಕ್ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಯು.ಕೆ.ಇಬ್ರಾಹಿಂ, ಸೈಯ್ಯಿದ್ ಮದನಿ ಅರೆಬಿಕ್ ಟ್ರಸ್ಟ್ ಮಾಜಿ ಉಪಾಧ್ಯಕ್ಷ ಅಹಮ್ಮದ್ ಬಾವಾ ಕೊಟ್ಟಾರ ಉಪಸ್ಥಿತರಿದ್ದರು. ಯು.ಕೆ.ಮುಹಮ್ಮದ್ ಮುಸ್ತಫಾ ಮಂಚಿಲ ಕಾರ್ಯಕ್ರಮ ನಿರೂಪಿಸಿದರು.
`ಹಿಂದೆಯೇ ಸರ್ಕಾರ ಯೋಜನೆ ನೀಡಿದ್ದರೂ ಅಂದಿನ ಆಡಳಿತ ಕಾರಣಾಂತರಗಳಿಂದ ಹಿಂದಕ್ಕೆ ಬಿಟ್ಟಿತ್ತು, ದರ್ಗಾ ಸಮಿತಿ ಮತ್ತು ಸಚಿವರ ಸತತ ಪ್ರಯತ್ನ ಬಳಿಕ ಅನುದಾನ ದೊರಕಿದ್ದು, ನಕ್ಷೆಯಲ್ಲಿ ವ್ಯತ್ಯಾಸದಿಂದ ಒಂದು ವರ್ಷ ಬಳಿಕ ಶಂಕುಸ್ಥಾಪನೆ ನಡೆಯುತ್ತಿದೆ. ಇದಕ್ಕಾಗಿ ಬಾಡಿಗೆ ಅಂಗಡಿ ಕಟ್ಟಡ ಕೆಡವಲಾಗಿದೆ’
ಅಬ್ದುಲ್ ರಶೀದ್, ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ


