UN NETWORKS
ತೊಕ್ಕೊಟ್ಟು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ರಂಗಚಲನ (ರಿ) ಮಂಗಳೂರು ಆಶ್ರಯದಲ್ಲಿ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ತುಳು ಭಾಷಾ ಕಮ್ಮಟವನ್ನು ಸಮಾಜ ಸೇವಕಿ ಸುಹಾಸಿನಿ ಬಬ್ಬುಕಟ್ಟೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಬೇಸಿಗೆ ರಜೆಯ ದಿನಗಳಲ್ಲಿ ಇಂತಹ ಕಮ್ಮಟಗಳು ಮಕ್ಕಳಿಗೆ ಮತ್ತಷ್ಟು ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ತುಳುವಿನಲ್ಲೇ ಮಾತು-ವ್ಯವಹಾರಗಳು ಹೆಚ್ಚಿಸಿದರೆ ಭಾಷೆ ಸಮೃದ್ಧಿಗೊಳ್ಳಲಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತುಳುವಿನ ಬೆಳವಣಿಗೆಗಾಗಿ ಶಾಲಾ ಕಾಲೇಜುಗಳಲ್ಲಿ ತುಳು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. 36 ಕಾಲೇಜುಗಳಲ್ಲಿ ತುಳು ಕಾರ್ಯಕ್ರಮ ನಡೆದಿದ್ದು, ಮುಂದೆಯೂ ಇದು ಮುಂದುವರಿಯಲಿದೆ. 2018-19ನೇ ನೇ ಸಾಲಿನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ 41 ಶಾಲೆಗಳಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸೆಸೆಲ್ಸಿ ಪರೀಕ್ಷೆ ಬರೆದ 618 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಈ ಪೈಕಿ 65 ಮಕ್ಕಳು ನೂರಕ್ಕೆ 100 ಅಂಕ ಪಡೆದು ದಾಖಲೆ ನಿರ್ಮಿಸಿದ್ದಾರೆ ಎಂದರು.
ಬಬ್ಬುಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಚಂಚಲಾಕ್ಷಿ, ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಉಪಸ್ಥಿತರಿದ್ದರು. ತುಳು ಅಕಾಡಮಿಯ ಸದಸ್ಯೆ ದುರ್ಗಾ ಮೆನನ್ ಕಾರ್ಯಕ್ರಮ ನಿರೂಪಿಸಿದರು. ರಂಗಚಲನದ ನಿರ್ದೇಶಕ ದಿನೇಶ್ ಅತ್ತಾವರ ವಂದಿಸಿದರು.


