UN NETWORKS
ಬಾಳೆಪುಣಿ : ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಾಗಿ ಕೃಷಿಕರೊಬ್ಬರಿಗೆ ಕಂದಾಯ ಇಲಾಖೆ ನೀಡಿದ ರೂ.800 ಪರಿಹಾರ ಮೊತ್ತದ ಚೆಕ್ ಎರಡು ಬಾರಿ ಬ್ಯಾಂಕಿನಲ್ಲಿ ಬೌನ್ಸ್ ಆಗಿ ರೂ. 472 ದಂಡ ಪಾವತಿಸಿದರೂ ಉಳಿದ ರೂ.300 ಸಿಗದ ಘಟನೆ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಬಾಳೆಪುಣಿ ಗ್ರಾಮದ ಕೈರಂಗಳ ಕೊಪ್ಪಳ ನಿವಾಸಿ ಕೃಷಿಕ ಭಾಸ್ಕರ್ ಅವರು ಎರಡೆರಡು ಬಾರಿ ಕಂದಾಯ ಇಲಾಖೆಯ ಬೇಜವಾಬ್ದಾರಿಗೆ ಒಳಗಾದವರು. ವಿಪರೀತ ಗಾಳಿ ಮಳೆಗೆ ಭಾಸ್ಕರ್ ಅವರ ತೋಟದ ದಲ್ಲಿರುವ 25 ಅಡಿಕೆ ಮರಗಳು, 2 ತೆಂಗು ಮತ್ತು ಹಟ್ಟಿ ಭಾಗಶ: ಹಾನಿಯಾಗಿತ್ತು. ಈ ಕುರಿತು ಸ್ಥಳೀಯ ಪಂಚಾಯಿತಿ ಸದಸ್ಯರ ಸಲಹೆಯಂತೆ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸುವಂತೆ ಸೂಚಿಸಿದ್ದರು. ಪಂಚಾಯಿತಿ ಗ್ರಾಮಕರಣಿಕರಲ್ಲಿ ದೂರು ದಾಖಲಿಸಿದ ಕೃಷಿಕ ಭಾಸ್ಕರ್ ತಮಗಾದ ಸಾವಿರಾರು ರೂ.ಗಳ ನಷ್ಟದ ಬಗ್ಗೆ ದೂರಿದ್ದರು. ಅದಕ್ಕಾಗಿ ಫೋಟೊ ಸಹಿತ ದೂರಿನ ಪ್ರತಿಯನ್ನು ನೀಡುವಂತೆ ಸೂಚಿಸಿದಾಗ ಅದಕ್ಕಾಗಿ ರೂ. 300 ರಷ್ಟು ಖರ್ಚು ನಡೆಸಿ ದೂರು ದಾಖಲಿಸಿದ್ದರು. ತಿಂಗಳ ಹಿಂದೆ ಭಾಸ್ಕರ್ ಅವರಿಗೆ ರೂ.800 ಪರಿಹಾರ ಮೊತ್ತದ ಚೆಕ್ ಬಂದಿತ್ತು. ಬಿ.ಸಿ.ರೋಡಿನ ಅಜ್ಜಿಬೆಟ್ಟು ವಿಭಾಗದ ಹೆಚ್ಡಿಎಫ್ಸಿ ವಿಭಾಗದ ಚೆಕ್ ಆಗಿತ್ತು. ತಮ್ಮ ಖಾತೆಗೆ ನಗದು ಜಮಾ ಆಗುವಂತೆ ಚೆಕ್ ಅನ್ನು ಮೊದಲ ಬಾರಿ ಹಾಕಿದಾಗ, ತಹಶೀಲ್ದಾರ್ ಸಹಿ ಸರಿಯಾಗಿಲ್ಲ ಎಂದು ಹೇಳಿದ ಬ್ಯಾಂಕ್ ಸಿಬ್ಬಂದಿ ರೂ. 236 ದಂಡವನ್ನು ಭಾಸ್ಕರ್ ಅವರ ಖಾತೆಯಿಂದ ಪಡೆದಿತ್ತು. ಆ ಚೆಕ್ ಹಿಡಿದುಕೊಂಡು ಕೃಷಿಕ ಭಾಸ್ಕರ್ ನಗರದ ಮಿನಿವಿಧಾನಸೌಧಕ್ಕೆ ತೆರಳಿದಾಗ ಅಲ್ಲಿನ ಸಿಬ್ಬಂದಿ ತಹಶೀಲ್ದಾರರ ಬದಲಾವಣೆಯಿಂದಾಗಿ ಸಮಸ್ಯೆಯಾಗಿದೆ. ಮತ್ತೆ ಬೇರೆ ಚೆಕ್ ನೀಡಿ ಅದನ್ನು ಹಾಕುವಂತೆ ಸೂಚಿಸಿದ್ದರು. ಆದರೆ ಭಾಸ್ಕರ್ ಅವರು ಮತ್ತೆ ಚೆಕ್ ಹಾಕಿದಾಗ, ಅದರಲ್ಲಿ ನಗದು ಇಲ್ಲದೇ ಚೆಕ್ ಬೌನ್ಸ್ ಆಗಿದೆ. ಮತ್ತೆ ಭಾಸ್ಕರ್ ಅವರ ಖಾತೆಯಿಂದ ರೂ. 236 ದಂಡ ಹೋಗಿದೆ. ಪರಿಹಾರಕ್ಕಾಗಿ ಅಲೆದಾಡಿ ಅದರ ಮೊತ್ತಕ್ಕಿಂತ ಹೆಚ್ಚೇ ಖರ್ಚಾಗಿದೆ. ಆದರೂ ಉಳಿದಿರುವ ರೂ.368 ತನ್ನ ಕೈ ಸೇರಬಹುದೇ ಅನ್ನುವ ನಿರೀಕ್ಷೆಯಲ್ಲಿ ಕೃಷಿಕ ಭಾಸ್ಕರ್ ಅವರಿದ್ದಾರೆ.




