ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ತ್ಯಾಜ್ಯ ನೀರು ರಸ್ತೆಗೆ ಬಿಡುವುದರ ವಿರುದ್ಧ ದಾಳಿ ನಡೆಸಿದ ಉಳ್ಳಾಲ ನಗರಸಭೆ ಅಧಿಕಾರಿಗಳು ಕಾರು ಮಾರಾಟ ಮಳಿಗೆ ಹಾಗೂ ಬಾರ್ ಮಾಲೀಕರಿಗೆ ನೋಟೀಸು ಮಾಡಿದ ಘಟನೆ ತೊಕ್ಕೊಟ್ಟು ಕಾಪಿಕಾಡು ಬಳಿ ನಡೆದಿದೆ.
ತೊಕ್ಕೊಟ್ಟು ಕಾಪಿಕಾಡು ಬಳಿ ಇರುವ ವಾಹನ ಮಾರಾಟ ಮಳಿಗೆ ಹಾಗೂ ಬಾರ್ ಆಂಡ್ ರೆಸ್ಟೋರೆಂಟೊಂದಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾರಿನಿಂದ ಬರುವ ತ್ಯಾಜ್ಯಯುಕ್ತ ನೀರನ್ನು ರಸ್ತೆ ಸಮೀಪವೇ ಹರಿಯಲು ಬಿಡುತ್ತಿದ್ದಾರೆ. ಇದರಿಂದ ಸ್ಥಳದಲ್ಲಿ ವಾಸನೆಯುಕ್ತ ವಾತಾವರಣ ನಿರ್ಮಾಣ ಆಗಿದೆ.
ಈ ಭಾಗದಲ್ಲಿ ದೇವಸ್ಥಾನ , ೧೦೦ ರಷ್ಟು ಮನೆಗಳಿದ್ದು, ಹಲವು ಬಾರಿ ಬಾರ್ ಮಾಲೀಕರಿಗೆ ಮತ್ತು ಷೋರೂಂ ಪ್ರಬಂಧಕರಿಗೆ ಹೇಳಿದ್ದರೂ, ಪ್ರಯೋಜನವಾಗಿಲ್ಲ ಅನ್ನುವ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಅದರಂತೆ ನಗರಸಭೆ ಅಧಿಕಾರಿಗಳಿಗೆ ದೂರು ಬಂದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ರೂಪಾ.ಟಿ.ಶೆಟ್ಟಿ, ನಗರಸಭೆ ಅಧ್ಯಕ್ಷೆ ಗಿರಿಜಾ ಬಾ ಹಾಗೂ ನಗರಸಭೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಸಂಬಂಧಪಟ್ಟವರಿಗೆ ನೋಟೀಸು ನೀಡಿ ಎಚ್ಚರಿಕೆ ನೀಡಿದರು. ಅಲ್ಲದೆ ವಾರದ ಒಳಗೆ ಬದಲಿ ಪಿಟ್ ನಿರ್ಮಿಸದೆ ಇದ್ದಲ್ಲಿ, ಅನುಮತಿ ರದ್ದುಗೊಳಿಸುವುದಾಗಿ ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರೂಪಾ.ಟಿ.ಶೆಟ್ಟಿ ಎಚ್ಚರಿಸಿದ್ದಾರೆ. ತನ್ನ ವಾರ್ಡಿನಲ್ಲೇ ಇಂತಹ ಅವ್ಯವಸ್ಥೆ ಇರುವುದರ ಬಗ್ಗೆ ಕೆರಳಿದ ನಗರಸಭೆ ಅಧ್ಯಕ್ಷೆ ಗಿರಿಜಾ ಬಾ ಆರೋಗ್ಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಸಿ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.




