UN NETWORKS
ಉಳ್ಳಾಲ: ವೀರರಾಣಿ ಅಬ್ಬಕ್ಕಳ ಉತ್ಸವ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದ್ದು ಆ ಮೂಲಕ ನೆಲದ ಇತಿಹಾಸ ಚರಿತ್ರೆಯನ್ನು ಅಬ್ಬಕ್ಕಳ ಬದುಕು ಸಾಹಸ ಆಚಾರ ವಿಚಾರ ಯುವಜನತೆಗೆ ತಿಳಿಸುವ ಪ್ರಯತ್ನ ಹಾಗೂ ಯುವಜನತೆಗೆ ಪ್ರೇರಣೆ ಆಗಲಿದೆ. ಉಳ್ಳಾಲದ ಜನತೆ ಅಬ್ಬಕ್ಕ ಉತ್ಸವ ಬೀಚ್ ನಲ್ಲಿ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದು ಅದರಂತೆ ಉಳ್ಳಾಲ ಮೊಗವೀರಪಟ್ಣದ ಸಮುದ್ರ ಕಿನಾರೆಯಲ್ಲಿ ನಡೆಯುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಜಿಲ್ಲಾಡಳಿತ, ದಕ್ಷಿಣ ಕನ್ನಡ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ವೀರ ರಾಣಿ ಅಬ್ಬಕ್ಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಇತಿಹಾಸ ಓದಿದರೆ ಸಾಲದು ಅದನ್ನು ಅರ್ಥೈಸಿಕೊಳ್ಳಬೇಕು. ಅಬ್ಬಕ್ಕಳಂತೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಅಬ್ಬಕ್ಕಳಂತೆ ಧೈರ್ಯವಂತ ಮಕ್ಕಳು ಉಳ್ಳಾಲದಲ್ಲಿ ಹುಟ್ಟಿ ಬರಬೇಕು. ಭಾರತೀಯ ಸಂಸ್ಕೃತಿ ಯಂತೆ ಒಂದೆ ತಾಯಿ ಮಕ್ಕಳಂತೆ ನಾವು ಬದುಕಬೇಕಿದೆ. ವೀರರಾಣಿಯ ನಾಯಕತ್ವ, ಸೌಹಾರ್ದತೆ ನಮಗೆ ಮಾದರಿಯಾಗಲಿ. ಅಬ್ಬಕ್ಕ ಉತ್ಸವ ವೇದಿಕೆ ಎಲ್ಲರನ್ನು ಒಂದೇ ಮನಸ್ಸಿನಿಂದ ಕೊಂಡೊಯ್ಯಲು ಸಾಧ್ಯವಾಗಿದೆ.ಉಳ್ಳಾಲ ಸಮಗ್ರ ಅಭಿವೃದ್ಧಿ ಕಾಣುತ್ತಿದ್ದು ಅದಕ್ಕೆ ಪೂರಕವಾಗಿ ಉಳ್ಳಾಲ ತಾಲೂಕು ಕೂಡಾ ಘೋಷಣೆ ಆಗಿದೆ. ಉಳ್ಳಾಲದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಉಳ್ಳಾಲ ರಾಣಿ ಅಬ್ಬಕ್ಕ ಭವನಕ್ಕೆ ಎರಡು ಕೋಟಿ ಅನುದಾನವನ್ನು ಎಂಟು ಕೋಟಿ ರೂ. ಗೆ ಏರಿಸಲಾಗಿದ್ದು ಅನುದಾನ ಮಂಜೂರು ಮಾಡಲಾಗಿದೆ. ಉಳ್ಳಾಲ ಪುರಸಭೆ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣವಾಗಲಿದೆ ಎಂದು ನುಡಿದರು. ನೂತನ ತಾಲೂಕು ಘೋಷಣೆ ಆದ ಬಳಿಕ ಎಲ್ಲ ಸರಕಾರಿ ಕಚೇರಿಗಳು ಇಲ್ಲಿ ಆರಮಬವಾಗಲಿದೆ. ಹಾಗೆಯೇ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸೇರಿದಂತೆ ಎಲ್ಲ ವಿಶೇಷ ದಿನಗಳ ಆಚರಣೆ ನಡೆಯಲಿದೆ. ಉಳ್ಳಾಲಕ್ಕೆ ಅರ್ಹವಾಗಿಯೇ ಅನುದಾನ ಹರಿದುಬರಲಿದೆ. ಹಾಗೆಯೇ ಕೋಟೆಪುರದಿಂದ ತಲಪಾಡಿ ತನಕ ಕಡಲ್ಕೊರೆತ ಶಾಶ್ವತ ತಡೆಗೋಡೆ ಕಾಮಗಾರಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಡಲ ಕಿನಾರೆಯ ಸ್ಮರಣಿಕೆಯನ್ನು ಯು.ಟಿ. ಖಾದರ್ ಅವರಿಗೆ ಉತ್ಸವದ ಪರವಾಗಿ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾರಾನಾಥ ಶೆಟ್ಟಿ ವಿಜೇತರ ಹೆಸರು ವಾಚಿಸಿದರು. ತ್ಯಾಗಂ ಹರೇಕಳ ಸಹಕರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಆರ್. ಸೆಲ್ವಮಣಿ, ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಮುಡಾ ಕಮಿಷನರ್ ಶ್ರೀಕಾಂತ್ ಹಾಗೂ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಉಪಸ್ಥಿತರಿದ್ದರು. ಮಂಗಳೂರು ಉಪ ವಿಭಾಗ ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಸ್ವಾಗತಿಸಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ರಾಜೇಶ್ ವಂದಿಸಿದರು.


