UN NETWORKS
ದೇರಳಕಟ್ಟೆ: ಆಹಾರ ಪದ್ಧತಿಯನ್ನು ಸರಿಯಾಗಿ ಪಾಲಿಸಿದರೆ ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳಿಂದ ಪಾರಾಗಲು ಸಾಧ್ಯ ಎಂದು ಎಂದು ಚೆನ್ನೈಯ ಮದ್ರಾಸ್ ಮೆಡಿಕಲ್ ಮಿಷನ್ನ ಇನ್ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸ್ ಯೂರಾಲಾಜಿ ಎಂಡ್ ಆರ್ಗನ್ ಟ್ರಾನ್ಸ್ಪ್ಲಾಂಟೇಶನ್ನ ಮುಖ್ಯಸ್ಥ ಪ್ರೊ| ಜಾರ್ಜಿ ಅಬ್ರಾಹಂ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಎಂಡ್ ರಿಸರ್ಚ್ ಮತ್ತು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಆಶ್ರಯದಲ್ಲಿ ಗುರುವಾರ ಕೆ.ಎಸ್. ಹೆಗ್ಡೆ ಮೆಡಿಕಲ್ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ -2019ರಲ್ಲಿ ವಿಶೇಷ ಉಪಾನ್ಯಾಸ ನೀಡಿದರು.ಮೂತ್ರಪಿಂಡ ವೈಫಲ್ಯವಾದರೆ ದೇಹದ ಬೇರೆ ಬೇರೆ ಅವಯವಗಳಿಗೆ ತೊಂದರೆ ಅಧಿಕವಿದ್ದು ಈ ನಿಟ್ಟಿನಲ್ಲಿ ಆಹಾರ ಕ್ರಮಕ್ಕೆ ಒತ್ತು ನೀಡಿದರೆ ಮೂತ್ರಪಿಂಡದಂತಹ ವೈಫಲ್ಯವನ್ನು ತಡೆಯಬಹುದು. ಮುಖ್ಯವಾಗಿ ಉಪ್ಪಿನಂಶ ಕಡಿಮೆ ಮಾಡುವುದರಿಂದ ಮತ್ತು ಅಧಿಕ ನೀರು ಸೇವನೆಯಿಂದ ಆರೋಗ್ಯವನ್ನು ಕಾಪಾಡಬಹುದು ಎಂದ ಅವರು ಮೂತ್ರಪಿಂಡ ವೈಫಲ್ಯದಂತಹ ವಿಷಯದ ಕುರಿತು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಕಾರ್ಯ ಮಾಡಬೇಕು ಎಂದರು.
ಈ ಸಂದರ್ಭ ನಿಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧ ಆಯೋಜನೆ ಮಾಡಿದ್ದು ವಿಜೇತರಿಗೆ ಪುರಸ್ಕಾರವನ್ನು ನೀಡಲಾಯಿತು.ಉಪಕುಲಪತಿ ಡಾ| ಸತೀಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇಮ ಡೀನ್ ಡಾ| ಪಿ.ಎಸ್. ಪ್ರಕಾಶ್, ನಿಟ್ಟೆ ವಿ.ವಿ. ಅಂತಾರಾಷ್ಟ್ರೀಯ ಸಂಬಂಧಗಳ ಹಿರಿಯ ನಿರ್ದೇಶಕ ಪ್ರೊ| ಇಡ್ಯಾ ಕರುಣಾ ಸಾಗರ್ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ನಿಟ್ಟೆ ವಿವಿ ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ ಪೋಸ್ಟರ್ ಅವಾರ್ಡ್ ಮಾಹಿತಿ ನೀಡಿದರು. ಡಾ| ಶೋಭನಾ ನಾಯಕ್ ಮಾಹಿತಿ ನೀಡಿದರು.ಡಾ| ಇಂದ್ರಾಣಿ ಕರುಣಾ ಸಾಗರ್ ಸ್ವಾಗತಿಸಿದರು. ಡಾ| ಜ್ಯೂಲಿಯೆಟ್ ಮೋಹನ್ ರಾಜ್ ಕಾರ್ಯಕ್ರಮ ನಿರ್ವಹಿಸಿದರು. ಅನಿರ್ಬನ್ ಚಕ್ರವರ್ತಿ ವಂದಿಸಿದರು.


