UN NETWORKS
ಉಳ್ಳಾಲ : ಕಳೆದ ಮೂರು ದಿನಗಳಿಂದ ನಾಪತ್ತೆಯಾದ ವ್ಯಕ್ತಿ ಮೃತದೇಹ ಕೋಟೆಪುರ ಸಮುದ್ರ ತೀರದಲ್ಲಿ ಭಾನುವಾರ ಸಂಜೆ ಪತ್ತೆಯಾಗಿದೆ.
ಉಳ್ಳಾಲ ಅರಸುಹಿತ್ಲು ನಿವಾಸಿ ದಿನೇಶ್ ( 45) ಎಂಬವರ ಮೃತದೇಹ ಪತ್ತೆಯಾಗಿದೆ. ಜ.11 ರಂದು ಮುಡಿಪುವಿನಿಂದ ನಾಪತ್ತೆಯಾಗಿದ್ದರು. ಈ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂಕ್ರಾಂತಿ ದಿನವಾಗಿದ್ದ ಶುಕ್ರವಾರ ಉಳ್ಳಾಲದ ಅಯ್ಯಪ್ಪ ಮಂದಿರಕ್ಕೆ ಸಿಯಾಳ ನೀಡಿ ಕೆಲಸಕ್ಕೆ ತೆರಳಿದ್ದರು. ಮುಡಿಪು ಇನ್ಫೋಸಿಸ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಗಾರ್ಡನ್ ಕೆಲಸ ನಿರ್ವಹಿಸುತ್ತಿದ್ದರು. ಕೆಲಸದಿಂದ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದರು. ಹಲವು ಕಾಲದಿಂದ ಅನಾರೋಗ್ಯದಿಂದ ಇರುವ ಇವರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೈದಿರುವ ಶಂಕೆ ಇದೆ.
ಭಾನುವಾರ ಸಂಜೆ ಕೋಟೆಪುರ ಸಮುದ್ರ ತೀರದ ಫಿಶ್ ಮಿಲ್ ಸಮೀಪ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಟುಂಬಸ್ಥರು ಚಪ್ಪಲಿ, ಅಂಗಿ ಹಾಗೂ ಕೈಯಲ್ಲಿ ಇದ್ದಂತಹ ದಾರವನ್ನು ಗಮನಿಸಿ ಮೃತದೇಹದ ಗುರುತು ಪತ್ತೆಹಚ್ಚಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಇವರು ಅನಾರೋಗ್ಯದಲ್ಲಿರುವ ತಾಯಿ ಹಾಗೂ ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


