UN NETWORKS
ಹರೇಕಳ : ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸಮುದಾಯ ಆರೋಗ್ಯ ವಿಭಾಗದ ವತಿಯಿಂದ ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಚಂದನಾ ಅವರು ಋತುಚಕ್ರವೆಂಬುದು ಒಂದು ನೈಸರ್ಗಿಕ ಪ್ರಕ್ರಿಯೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಮಾನಸಿಕ ಮತ್ತು ಶಾರೀರಿಕ ಬದಲಾವಣೆಯ ಅರಿವನ್ನು ತಿಳಿದುಕೊಳ್ಳುವುದರೊಂದಿಗೆ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸ್ವಚ್ಛತೆಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ಯವರು ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಹೆಣ್ಣು ಮಕ್ಕಳು ದೇಹದಲ್ಲಿ ನಡೆಯುವ ನೈಸರ್ಗಿಕ ಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಲು ಹಿಂಜರಿಯುತ್ತಾರೆ. ಅದರಿಂದಾಗಿಯೇ ದೈಹಿಕ ಸಮಸ್ಯೆಗಳು ಉಂಟಾಗಬಹುದು. ಈ ರೀತಿಯ ಕಾರ್ಯಗಾರ ಇದಕ್ಕೊಂದು ಅನುಕೂಲತೆ ಒದಗಿಸುತ್ತದೆ ಎಂದರು. ಸಮುದಾಯ ಆರೋಗ್ಯ ವಿಭಾಗದ ಉಪನ್ಯಾಸಕರಾದ ನಾಗರಾಜ್ ಪಿ. ಮುನಿರಾ ಮತ್ತು ನಾಗರಾಜ್ ಅವರು ಮಾಹಿತಿಯನ್ನು ನೀಡಿದರು. ಅಧ್ಯಾಪಕ ವೃಂದದವರಾದ ಉಷಾಲತ, ಮೋಹಿನಿ, ರವಿಶಂಕರ್, ಕುಮುದ, ಕೃಷ್ಣಶಾಸ್ತ್ರಿ, ನೂತನ, ಸ್ಮಿತಾ ಉಪಸ್ಥಿತರಿದ್ದರು. ಕೌಶಿಕ್ ಪ್ರಾರ್ಥನೆಗೈದರು,ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ನಿರೂಪಿಸಿದರು. ಹಿಂದಿ ಅಧ್ಯಾಪಕರಾದ ಶಿವಕುಮಾರ್ ವಂದಿಸಿದರು.


