ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸಮುದ್ರ ತೀರದಲ್ಲಿದ್ದ ಅಂಗಡಿಯನ್ನು ದುಷ್ಕರ್ಮಿಗಳು ಸಂಪೂರ್ಣ ನಾಶಗೊಳಿಸಿರುವ ಘಟನೆ ಮಂಗಳವಾರ ಮೊಗವೀರಪಟ್ನದಲ್ಲಿ ಬೆಳಕಿಗೆ ಬಂದಿದೆ.
ಮೊಗವೀರಪಟ್ನ ಸಮುದ್ರ ತೀರದಲ್ಲಿರುವ ಉಳ್ಳಾಲ ಕೈಕೋ ನಿವಾಸಿ ಇಸ್ಮಾಯಿಲ್ ಎಂಬವರಿಗೆ ಸೇರಿದ ಅಂಗಡಿಯನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ.
ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ತರ್ಪಾಲಿನಲ್ಲಿ ನಿರ್ಮಿಸಿದ್ದ ಅಂಗಡಿಯ ಸಾಮಗ್ರಿಗಳನ್ನು ಹೊರ ಎಸೆದು, ಸೋಡಾ ಬಾಟಲಿಗಳನ್ನು ಪುಡಿಗೈದು, ಅಂಗಡಿಯನ್ನೇ ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡ ಕುಟುಂಬದ ಇಸ್ಮಾಯಿಲ್ ಅವರು ೧೫ ವರ್ಷಗಳಿಂದ ಉಳ್ಳಾಲ ಮೊಗವೀರಪಟ್ನದ ಸಮುದ್ರ ಕಿನಾರೆಯಲ್ಲಿ ತಂಪು ಪಾನೀಯ ಹಾಗು ಚರ್ಮುರಿ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದಲೇ ಪತ್ನಿ ಮತ್ತು ಮೂವರು ಮಕ್ಕಳಿರುವ ಕುಟುಂಬದ ನಿರ್ವಹಣೆಯನ್ನು ನಡೆಸುತ್ತಿದ್ದಾರೆ. ಘಟನೆಯಿಂದ ರೂ.೪೦,೦೦೦ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇಸ್ಮಾಯಿಲ್ ಅವರ ಅಂಗಡಿ ಸಮೀಪವೇ ಮೂರು ಹಿಂದುಗಳಿಗೆ ಸೇರಿದ ಗೂಡಂಗಡಿ ಇದ್ದು, ಅದಕ್ಕೆ ಯಾವುದೇ ಹಾನಿ ಸಂಭವಿಸದೇ ಇರುವುದರಿಂದ ಕೋಮು ಭಾವನೆ ಕೆರಳಿಸುವ ಸಲುವಾಗಿ ಅಂಗಡಿಯನ್ನು ನಾಶಗೊಳಿಸಲಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಗಲಾಟೆಯ ಪ್ರತೀಕಾರ: ಉಳ್ಳಾಲ ಮೊಗವೀರಪಟ್ನದಲ್ಲಿ ಸಮುದ್ರ ತೀರದಲ್ಲಿ ಮೇ.೧೦ ರಂದು ಸಮುದ್ರಕ್ಕೆ ಬಾಲ್ ತರಲೆಂದು ಇಳಿದಿದ್ದ ತಂಡ ಮತ್ತು ಸ್ಥಳೀಯ ಯುವಕರ ತಂಡಗಳ ಮಧ್ಯೆ ಗುಂಪು ಘರ್ಷಣೆ ನಡೆದಿತ್ತು. ಇದರಲ್ಲಿ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಗೆ ಸಂಬಂಧಿಸಿ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು. ಅಂದೇ ತಡರಾತ್ರಿ ಕೆಲಸದಿಂದ ವಾಪಸ್ಸಾಗುತ್ತಿದ್ದ ಉಳ್ಳಾಲ ನಿವಾಸಿ ಅಶೋಕ್ ಎಂಬವರಿಗೆ ತಂಡ ಹಲ್ಲೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ಗೂಡಂಗಡಿಯನ್ನು ದುಷ್ಕರ್ಮಿಗಳು ನೆಲಸಮಗೊಳಿಸಿದ್ದಾರೆ.





