UN NETWORKS
ಕೈರಂಗಳ: ಮದುವೆಗೆ ಹೆಣ್ಣು ಸಿಗುವುದಿಲ್ಲ ಎಂಬ ಸಮಸ್ಯೆ ಹಾಗೂ ಪ್ರತಿಷ್ಠೆಯ ವಿಚಾರಕ್ಕಾಗಿ ಯುವಕರು ಕೃಷಿ ಚಟುವಟಿಕೆಗಳಿಂದ ದೂರ ಉಳಿದು ನಗರ ಪ್ರದೇಶಗಳಲ್ಲಿ ಕೆಲಸ ಮಾಡುವಂತಹ ಸ್ಥಿತಿಯಿದೆ ಎಂದು ಪೆರ್ಲ ನಳಂದ ವಿದ್ಯಾಲಯದ ಪ್ರಾಂಶುಪಾಲ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕೃಷಿ ತಜ್ಞ ವಿಘ್ನೇಶ್ವರ ವರ್ಮುಡಿ ಅಭಿಪ್ರಾಯಪಟ್ಟರು.
ಕೈರಂಗಳ ಪುಣ್ಯಕೋಟಿನಗರದ ಶಾರದಾಗಣಪತಿ ವಿದ್ಯಾಕೇಂದ್ರದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಡಿಪು ವಲಯದ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕೃಷಿ ಉತ್ಸವ ಹಾಗೂ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿ ಯಾವುದೇ ಮೂಲ ಶಿಕ್ಷಣದ ಮಾನದಂಡ. ಮೀಸಲಾತಿಯ ಪ್ರಬೇಧವೂ ಇಲ್ಲದೆ ಹೆಚ್ಚಿನ ಆದಾಯ ತಂದುಕೊಡುವ ಏಕೈಕ ಕ್ಷೇತ್ರವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಉತ್ಸವವನ್ನು ಯಶಸ್ವಿಯಾಗಿ ನಡೆಸುವುದು ಸುಲಭದ ಮಾತಲ್ಲ. ಆದರೆ ಕೈರಂಗಳದಲ್ಲಿ ಸಂಘಟಕರ ಕಾರ್ಯ ಶ್ಲಾಘನೀಯ. ಕೃಷಿಯಿಂದಾಗಿ ಈಗಲೂ ಸಂಸ್ಕಾರ ಉಳಿದಿವೆ. ವಿಶ್ವವೇ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದರೂ ಸದ್ಯದ ಸ್ಥಿತಿ ಮಾತ್ರ ಶೋಚನೀಯವಾಗಿದೆ ಎಂದರು.
ದೇಶದಲ್ಲಿ 53ಶೇ. ಮಂದಿ ಕೃಷಿಯನ್ನೇ ಉದ್ಯೋಗವನ್ನಾಗಿಸಿಕೊಂಡು ಬದುಕುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮೂಲಶಿಕ್ಷಣ, ಮೀಸಲಾತಿಗಳಿಲ್ಲ. ಸುಲಭವಾಗಿ ಉದ್ಯೋಗ ಸಿಗುವಂತಹ ಕ್ಷೇತ್ರವಾಗಿದೆ. ಯುವಕರು ನಗರ ಪ್ರದೇಶದತ್ತ ವಲಸೆ ಹೋಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. 5ಶೇ. ರಷ್ಟು ಮಾತ್ರ ಊರಿನಲ್ಲಿ ಉಳಿದು ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಂತಹ ಕೃಷಿ ಉತ್ಸವಗಳ ಮೂಲಕ ಯುವಕರನ್ನು ಮತ್ತೆ ಕೃಷಿ ಕ್ಷೇತ್ರದತ್ತ ಒಲವು ಮೂಡಿಸುವುದರ ಜೊತೆಗೆ ನಗರ ಪ್ರದೇಶಕ್ಕೆ ವಲಸೆ ಹೋಗುವವರ ಸಂಖ್ಯೆಯನ್ನು ಕಡಿಮೆಗೊಳಿಸಬೇಕಿದೆ ಎಂದರು.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ ಆಚಾರ್ ಮಾತನಾಡಿ ಕೃಷಿ ಕ್ಷೇತ್ರದ ಬಗೆಗಿನ ಚಿಂತನ ಬಳಗದ ಸೃಷ್ಟಿಯಾಗಬೇಕಿದೆ. ವಿವಿಧ ಸಮಯದಲ್ಲಿ ಅಡಿಕೆಗೆ ಬೆಂಬಲ ಬೆಲೆ ಜೊತೆಗೆ ಆಧುನಿಕವಾಗಿರುವಂತಹ ಆನ್ಲೈನ್ ಮಾರುಕಟ್ಟೆ ಸ್ಥಾಪನೆಯ ಚಿಂತನೆಗಳು ಬರಬೇಕಿದೆ ಎಂದರು. ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪ್ರಥಮವಾಗಿ ಕೃಷಿ ಉತ್ಸವವನ್ನು ಆರಂಭಿಸಲಾಗಿದೆ. ನಿರೀಕ್ಷೆಗಿಂತ ಹೆಚ್ಚಿನ ಯಶಸ್ವಿ ಕಾರ್ಯಕ್ರಮದಿಂದ ಆಗಿದೆ. ಮುಂದೆ ಪ್ರತಿವರ್ಷವೂ ದಶಂಬರ ತಿಂಗಳ ಕೊನೆಯಲ್ಲಿ ಕೃಷಿ ಉತ್ಸವವನ್ನು ನಡೆಸುವುದನ್ನು ತೀರ್ಮಾನಿಸಲಾಗಿದೆ ಎಂದರು.ದ.ಕ. ಜಿಲ್ಲಾ ಸಹಕಾರಿ ಒಕ್ಕೂಟಗಳ ಅಧ್ಯಕ್ಷ ಹರೀಶ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಕ ಪಡಿಕಲ್ಲು ಶಂಕರ ಭಟ್, ಲಯನ್ಸ್ ಜಿಲ್ಲಾ ರಾಜ್ಯಪಾಲ ದೇವದಾಸ್ ಭಂಡಾರಿ ಕುರ್ನಾಡು ಹಾಗೂ ಬಂಟ್ವಾಳ ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ ಉಪಸ್ಥಿತರಿದ್ದರು. ಕೈರಂಗಳ ಕೃಷಿ ಉತ್ಸವದ ಸಂಚಾಲಕ ಟಿ.ಜಿ. ರಾಜಾರಾಂ ಭಟ್ ಸ್ವಾಗತಿಸಿದರು. ಉತ್ಸವ ಸಮಿತಿ ಕಾರ್ಯದರ್ಶಿ ಶ್ರೀ ಹರಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ದಿವ್ಯದೀಪ ವಂದಿಸಿದರು.
*ತೆಂಗು ಕೃಷಿ ಹಾಗೂ ಮೌಲ್ಯ ವರ್ಧನೆ, ಗೇರು ಹಾಗೂ ಕರಿಮೆಣಸು, ಕೊಕ್ಕೋ ಬೆಳೆ ಸಂರಕ್ಷಣೆ ಮತ್ತು ಸಂವರ್ಧನೆ, ಕೃಷಿ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪ್ರಭಾವ, ಅಡಿಕೆ ಬೆಳೆ ನಿರ್ವಹಣೆ, ಆದರ್ಶ ಕೃಷಿಕರ ಸಮಾವೇಶ ವಿಚಾರಗಳ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣ ನಡೆಯಿತು.
* ಕೃಷಿಕರು ಬೆಳೆಸಿದ ಕೃಷಿ ಉತ್ಪನ್ನಗಳ ಸ್ಪರ್ಧೆ, ಕೃಷಿಕರು ತಾವೇ ಬೆಳೆಸಿದ ಉತ್ಪನ್ನಗಳ ಪ್ರದರ್ಶನ ನಡೆಯಿತು.
* ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿ ಯಂತ್ರೋಪಕರಣಗಳು, ವಿವಿಧ ಗೊಬ್ಬರಗಳು, ಸಿರಿ ಉತ್ಪನ್ನ ಮಳಿಗೆ, ನವೋದಯ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳ ಮಾರಾಟ, ತರಕಾರಿ ಬೀಜಗಳು, ಕೋಳಿಗಳ ಪ್ರದರ್ಶನ, ಜೇನು ಸಾಕಣೆ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ ಮಾಹಿತಿ ಮಳಿಗೆಗಳು, ಬೊನ್ಸಾಯ್ (ಕುಬ್ಜ) ಗಿಡಗಳ ಮಳಿಗೆ, ಅಲಂಕಾರಿಕ ಮೀನು ಹಾಗೂ ಪಕ್ಷಿಗಳು, ಕುಂಬಾರಿಕೆ ಪ್ರದರ್ಶನ, ಸಾವಯವ ತರಕಾರಿ ಬೀಜಗಳ ಮಾರಾಟ, ಸೋಲಾರ್ ಉಪಕರಣಗಳ ಪ್ರದರ್ಶನ ನಡೆಯಿತು.


