UN NETWORKS
ದೇರಳಕಟ್ಟೆ: ಪುಸ್ತಕಗಳ ಅಧ್ಯಯನದ ಜೊತೆಗೆ ಕೌಶಲ್ಯ ವೃದ್ಧಿಯನ್ನು ವೈದ್ಯರು ನಡೆಸುವುದರ ಮೂಲಕ ವೈದ್ಯ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಚೆನ್ನೈ ಶ್ರೀ ರಾಮಚಂದ್ರ ಉನ್ನತ ವ್ಯಾಸಾಂಗ ಹಾಗೂ ಸಂಶೋಧನಾ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿ ಡಾ|.ಸುಬ್ರಹ್ಮಣ್ಯ ರಂಗಸ್ವಾಮಿ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಸೋಮವಾರ ಜರಗಿದ ದಿ| ಡಾ. ಅಮರನಾಥ ಹೆಗ್ಡೆ ಸ್ಮರಣಾರ್ಥ ಕ್ಲಿನಿಕಲ್ ರೀಸನಿಂಗ್ : ಪ್ರಿನ್ಸಿಪಲ್ಸ್ ಆಂಡ್ ಪ್ರಾಕ್ಟಿಸ್’ ವಿಚಾರದ ಕುರಿತು ದತ್ತಿ ಉಪನ್ಯಾಸ ನೆರವೇರಿಸಿ ಮಾತನಾಡಿದರು. ಜ್ಞಾನ ಸಂಪಾದನೆಗೆ ಪುಸ್ತಕ ಓದುವುದು ಸರಿಯಾದ ಕ್ರಮ. ಆದರೆ ವೈದ್ಯ-ರೋಗಿಗಳ ಜೊತೆಗಿನ ಉತ್ತಮ ಬಾಂಧವ್ಯವನ್ನು ಕಾಪಾಡಲು ಕ್ಷೇತ್ರದಲ್ಲಿ ಕೌಶಲ್ಯವೃದ್ಧಿಯನ್ನು ನಡೆಸಬೇಕಿದೆ. ಔಷಧ ವಿಜ್ಞಾನವಲ್ಲ, ಅನಿಶ್ಚಿತತೆಯ ಕಲೆಯಾಗಿದೆ. ಪರಿಣತರನ್ನು ಎಲ್ಲಾ ಸಮಯದಲ್ಲೂ ಒಪ್ಪಿಕೊಳ್ಳಬೇಕೆಂದೇನಿಲ್ಲ,. ವೃತ್ತಿ ಜೀವನದ ಅನುಭವ ಪರಿಣತರನ್ನಾಗಿಸುತ್ತದೆ ಎಂದರು.
ನಿಟ್ಟೆ ವಿ.ವಿ ಸಹಕುಲಾಧಿಪತಿ ಪ್ರೊ.ಕೆ.ಶಾಂತಾರಾಮ ಶೆಟ್ಟಿ ಮಾತನಾಡಿ ಡಾ| ಅಮರನಾಥ ಹೆಗ್ಡೆ ಅಗಲುವಿಕೆ ಇಡೀ ಮಂಗಳೂರಿಗರಿಗೆ ತುಂಬಲಾರದ ನಷ್ಟವಾಗಿತ್ತು. ವೈದ್ಯ ವೃತ್ತಿಯ ಜೊತೆಗೆ ಮಾನವೀಯತೆಯ ನೀತಿ ಮತ್ತು ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಮನಗೆದ್ದವರು. ವಿದೇಶದಲ್ಲಿ ಉತ್ತಮ ಅವಕಾಶವಿದ್ದರೂ ಅದನ್ನು ತೊರೆದು ದೇಶದಲ್ಲೇ ಸೇವೆಯನ್ನು ಆರಂಭಿಸಿ ಸಾರ್ಥಕತೆಯನ್ನು ಕಂಡವರು. ಇವರನ್ನು ಸ್ಮರಿಸುವ ಕಾರ್ಯಕ್ರಮ ಶ್ಲಾಘನಾರ್ಹ ಎಂದರು.
ನಿಟ್ಟೆ ವಿ.ವಿ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ನಿಟ್ಟೆ ವಿ.ವಿ ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ , ಕ್ಷೇಮ ವೈದ್ಯಕೀಯ ಕಾಲೇಜು ಡೀನ್ ಡಾ.ಪಿ.ಯಸ್. ಪ್ರಕಾಶ್ ಉಪಸ್ಥಿತರಿದ್ದರು.


