UN NETWORKS
ದೇರಳಕಟ್ಟೆ: ಪ್ರಪಂಚದಾದ್ಯಂತ ಬಹಳಷ್ಟು ಸಂಖ್ಯೆಯಲ್ಲಿ ಕಲಾ ಮಾಧ್ಯಮಗಳಿದ್ದರೂ ಪ್ರಖರ ಮಾಧ್ಯಮವಾಗಿರುವ ಸಾಹಿತ್ಯಕ್ಕೆ ಕೊಡುವ ಗೌರವ ಎಲ್ಲಕ್ಕಿಂತ ಮಿಗಿಲಾಗಿದೆ ಎಂದು ಖ್ಯಾತ ಕಾದಂಬರಿಕಾರ, 80ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ನಾ. ಡಿಸೋಜ ಹೇಳಿದರು.
ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ಹಾಗೂ ದೇರಳಕಟ್ಟೆಯ ರತ್ನ ಎಜ್ಯುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಗ್ರೀನ್ ಗ್ರೌಂಡ್ ನಲ್ಲಿ ನಡೆದ ನಾಡು ನುಡಿ ವೈಭವದ ರತ್ನೋತ್ಸವ- 2018 ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.ಸಾಹಿತಿ ನೆಲೆಯಲ್ಲಿ ನನಗೆ ಸಿಕ್ಕಿರುವ ಗೌರವ ಸನ್ಮಾನ ಎಲ್ಲವೂ ಕನ್ನಡ ಭುವನೇಶ್ವರಿಗೆ ಸಂದ ಗೌರವ. ಸಾಹಿತ್ಯದ ವಿಶೇಷತೆ ಭಾಷೆಯನ್ನು ಬಳಸಿಕೊಳ್ಳುವುದರಲ್ಲಿ ಅಡಗಿದೆ. ಲೇಖಕನಾದವ ಸಮಾಜದ ಒಳಿತಿಗಾಗಿ ದುಡಿಯಬೇಕು ಎಂದರು.
ಸಾಹಿತ್ಯ ಮನುಷ್ಯನ ಬದುಕು ಕಾಪಾಡುವ ಪ್ರಯತ್ನ ಮಾಡುತ್ತದೆ. ನಾವು ಬಳಸುವ ಶಬ್ಧದ ಬಳಕೆಯಿಂದ ಒಬ್ಬ ವ್ಯಕ್ತಿ, ಸಮಾಜದ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಬಹುದು, ಬೀರಿಸಬಹುದು. ಭಾಷೆ ಬಿಟ್ಟರೆ ಬದುಕಿಗೆ ಅರ್ಥವಿಲ್ಲ, ಅದಕ್ಕಾಗಿ ಭಾಷೆಯನ್ನು ಪ್ರೀತಿಸಬೇಕು, ಗೌರವಿಸಬೇಕು ಎಂದರು.ಯಾವ ಕನ್ನಡ ಸಾಹಿತಿಯೂ ಇಂಗ್ಲಿಷ್ ಭಾಷೆ ವಿರೋಧಿಗಳಲ್ಲ. ಆದರೆ ಕನ್ನಡಕ್ಕೆ ಅದರಿಂದ ಏಟಾಗಬಾರದು. ಹಾಗಿದ್ದರೂ ನಾವು ಇಂಗ್ಲಿಷ್ ನಿಂದ ಹೊರಬರುತ್ತಿಲ್ಲ. ಇಂಗ್ಲಿಷ್ ಕನ್ನಡದಿಂದ ಶ್ರೇಷ್ಠ ಭಾಷೆ ಅಲ್ಲವೇ ಅಲ್ಲ. ಕನ್ನಡ ಭಾಷೆಯಾಗಿದ್ದು ಕಡೆಗಣನೆ ಯಾವತ್ತೂ ಸಲ್ಲದು ಎಂದರು.ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಇಂಡಿಯಾ ಬಳಗದ ಡಿಜಿಎಂ, ಖ್ಯಾತ ಕಲಾವಿದ ಕದ್ರಿ ನವನೀತ ಶೆಟ್ಟಿ ಅವರಿಗೆ ವಿದ್ಯಾರತ್ನ ಪ್ರಶಸ್ತಿ -2018 ಪ್ರದಾನ ಮಾಡಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ದೇರಳಕಟ್ಟೆಯ ರತ್ನ ಎಜ್ಯುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ನಯೀಮ್ ಹಮೀದ್ , ಬೆಂಗಳೂರಿನ ಹಿಂದೂಸ್ತಾನ್ ಸ್ಕೌಟ್ಸ್ ಹಾಗೂ ಗೈಡ್ಸ್ ರಾಜ್ಯ ಉಪಾಧ್ಯಕ್ಷ ಸೂಡಿ ಸುರೇಶ್, ಕಿನ್ಯ ಬೆಳರಿಂಗೆ ಶ್ರೀ ಮಲರಾಯ ಬಂಟ ಧೂಮಾವತೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಬಾಬು ಶ್ರೀ ಶಾಸ್ತ ಕಿನ್ಯ, ಟ್ರಸ್ಟ್ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್, ರತ್ನಾವತಿ ಶೆಟ್ಟಿ, ದಿವಾಕರ್ ಕನ್ ಸ್ಟ್ರಕ್ಷನ್ ಮಾಲೀಕ ದಿವಾಕರ್, ಖ್ಯಾತ ನಾಟಿ ವೈದ್ಯ ಡಾ. ಎಂ. ಮುರಳಿ ಕುಮಾರ್ ಚಿಲಿಂಬಿ ಹಾಗೂ ವಿದ್ಯಾರತ್ನ ಶಾಲಾ ವಿದ್ಯಾರ್ಥಿ ನಾಯಕ ಇಬ್ರಾಹಿಂ ಖಲೀಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ನಾ. ಡಿಸೋಜ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರತ್ನ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಟ್ರಸ್ಟ್ ಗೌರವ ಸಲಹೆಗಾರ ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ನವೀನ್ ಹಾಗೂ ರಮೇಶ್ ಪೆರಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಾಕೇಶ್ ಹಾಗೂ ಶಿಕ್ಷಕಿ ಪ್ರೀತಿಕಾ ಸನ್ಮಾನಿತರ ಪರಿಚಯಿಸಿದರು. ರವಿಕುಮಾರ್ ಕೋಡಿ ಪ್ರಶಸ್ತಿ ವಿಜೇತರ ಹೆಸರು ವಾಚಿಸಿದರು. ಟ್ರಸ್ಟ್ ಕಾರ್ಯದರ್ಶಿ ಸೌಮ್ಯಾ ಆರ್. ಶೆಟ್ಟಿ ವಂದಿಸಿದರು.


