UN NETWORKS
ಉಳ್ಳಾಲ : ಇಂದು ಕೆಲವೊಂದು ವಿಷಯದಲ್ಲಿ ಪ್ಲಾಸ್ಟಿಕ್ ಬಳಕೆ ಅನಿವಾರ್ಯವಾಗಿದೆ, ಆದರೂ ಎಲ್ಲೆಂದರಲ್ಲಿ ಎಸೆಯದೆ ಜವಾಬ್ದಾರಿಯಿಂದ ಬಳಸುವುದು ಮುಖ್ಯ ಎಂದು ರೋಶನಿ ನಿಲಯದ ನಿರ್ದೇಶಕ ಕಿಶೋರ್ ಅತ್ತಾವರ ಅಭಿಪ್ರಾಯಪಟ್ಟರು.
ಉಳ್ಳಾಲ ನಗರಸಭೆ ವತಿಯಿಂದ ಶಿಕ್ಷಣ ಇಲಾಖೆ, ರೋಶನಿ ನಿಲಯ ಹಾಗೂ ಜನಶಿಕ್ಷಣ ಟ್ರಸ್ಟ್ ಸಹಭಾಗಿತ್ವದಲ್ಲಿ ಗುರುವಾರ ನಗರಸಭೆಯ ಸಭಾಂಗಣದಲ್ಲಿ ನಡೆದ `ಶೂನ್ಯ ತ್ಯಾಜ್ಯ ನಿರ್ವಹಣಾ ಆಂದೋಲನ-2018-19′ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದ್ದು ದಂಡ ಹಾಕಲಾಗುತ್ತದೆ, ಆದರೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ಕಸ ಸೃಷ್ಟಿಸುವ ಜನರೇ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಅಧಿಕಾರಿಗಳು, ಸ್ಥಳೀಯಾಡಳಿತ ಮಾಡುವ ಪ್ರಯತ್ನಗಳು ಫಲ ನೀಡದು ಎಂದು ಹೇಳಿದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ರೋಶನಿ ನಿಲಯದ ಪ್ರಾಂಶುಪಾಲೆ ಪ್ರೊ.ಎವ್ಲಿನ್ ಬೆನ್ನೆಸ್, ನಿವೃತ್ತ ಶಿಕ್ಷಕ ವಾಸುದೇವ ರಾವ್, ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ಸಂಘಟನಾ ಕಾರ್ಯದರ್ಶಿ ಎಂ.ಎಚ್.ಮಲಾರ್, ನಗರಸಭಾ ಅಯೂಬ್ ಮಂಚಿಲ, ವಿವಿಧ ಶಾಲೆಗಳ ಶಿಕ್ಷಕರು, ರೋಶನಿ ನಿಲಯ ವಿದ್ಯಾರ್ಥಿಗಳು, ನಗರಸಭಾ ಸದಸ್ಯರು ಸಂವಾದಲ್ಲಿ ಭಾಗವಹಿಸಿದ್ದರು.
`ಸ್ವಚ್ಛತೆ ಕಾಪಾಡಲು ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ, ಜನರ ಸಹಕಾರವೂ ಅಗತ್ಯ ಎನ್ನುವ ಸತ್ಯ ಅರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಈ ಬಗ್ಗೆ ಶಾಲಾ ಮಕ್ಕಳ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಸಹಕಾರ ಪಡೆಯಲಾಗಿದೆ’
ವಾಣಿ ವಿ.ಆಳ್ವ, ನಗರಸಭಾ ಪೌರಾಯುಕ್ತೆ


