UN NETWORKS
ಉಳ್ಳಾಲ: ಕನ್ನಡ ರಾಜ್ಯ ಉದಯವಾಗಬೇಕಾದರೆ ಹಲವು ಸಾಹಿತಿಗಳು, ಕವಿಗಳು, ಕನ್ನಡ ಪ್ರೇಮಿಗಳು, ಮಹನೀಯರು ಹೋರಾಡಿದ್ದು ಅದನ್ನು ನೆನಪಿಸುವ ಹಾಗೂ ಸ್ಮರಿಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ ಅಭಿಪ್ರಾಯಪಟ್ಟರು.
ಉಳ್ಳಾಲ ನಗರಸಭಾ ವತಿಯಿಂದ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಐಕ್ಯತಾ ದಿನ ಕಾರ್ಯಕ್ರಮದ ಧ್ವಜರೋಹಣಗೈದು ಅವರು ಮಾತನಾಡಿದರು.ಕನ್ನಡ ಸುಂದರ ಭಾಷೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಬ್ದಾರಿ ನಮ್ಮದು. ಕೇವಲ ಒಂದು ದಿನ ರಾಜ್ಯೋತ್ಸವ ಆಚರಿಸಿದ ಮಾತ್ರಕ್ಕೆ ಭಾಷಾ ಉಳಿವು ಅಸಾಧ್ಯ. ಭಾಷೆಯ ಉಳಿವಿಗಾಗಿ ಪ್ರತಿಯೊಬ್ಬರೂ ಪಣ ತೊಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಯುಕ್ತ ರೋಶನಿ ನಿಲಯದ ವಿದ್ಯಾರ್ಥಿಗಳಿಂದ ಸ್ವಚ್ಛತಾ ಬೀದಿ ನಾಟಕ ನಡೆಯಿತು. ನಗರಸಭೆಯ ಪೌರಕಾರ್ಮಿಕರಾದ ನಳಿನಿ ಹಾಗೂ ಕೆಂಚಪ್ಪ ಅವರ ವೈದ್ಯಕೀಯ ವೆಚ್ಚವಾಗಿ ತಲಾ 10 ಸಾವಿರ ರೂಪಾಯಿಯ ಚೆಕ್ ವಿತರಿಸಲಾಯಿತು.
ಅಧಿಕಾರಿಗಳಾದ ರಾಜೇಶ್, ರೇಣುಕಾ, ಕೌನ್ಸಿಲರುಗಳಾದ ಮುಹಮ್ಮದ್ ಮುಕಚ್ಚೇರಿ, ರವಿಚಂದ್ರ, ಗೀತಾ ಬಾಯಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


