UN NETWORKS
ಕೊಣಾಜೆ: ಅತ್ಯಂತ ಅಕರ್ಷಕವಾಗಿರುವ ತಲಪಾಡಿ ಬೀಚ್ನ್ನು ಸುಸಜ್ಜಿತ ಬೀಚ್ ಆಗಿ ಪರಿವರ್ತಿಸುವ ಯೋಜನೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಮುಂದಿದ್ದು, ಆ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ತಲಪಾಡಿಯ ಬೀಚ್ ಚಿತ್ರಣ ಬದಲಾಗಲಿದೆ ಎಂದು ಮಂಗಳೂರಿನ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಉದಯ ಶೆಟ್ಟಿ ಹೇಳಿದರು.
ಮಂಗಳೂರು ವಿವಿಯ ಎಂಬಿಎ ಸಭಾಭವನದಲ್ಲಿ ವಿವಿಯ ಟೂರಿಸಂ ಆ್ಯಂಡ್ ಟ್ರಾವೆಲ್ ಮೆನೇಜ್ಮೆಂಟ್ ವಿಭಾಗ ಹಾಗೂ ಪ್ರವಾಸೋದ್ಯಮ ಇಲಾಖೆ ಮಂಗಳೂರು ಜಂಟಿ ಆಶ್ರಯದಲ್ಲಿಗುರುವಾರ ಆಚರಿಸಲಾದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿಅವರು ಮಾತನಾಡಿದರು.
ಸ್ವದೇಶ ದರ್ಶನ್ ಕೋಸ್ಟಲ್ ಸರ್ಕಿಟ್ ಕಾರ್ಯಕ್ರಮದಲ್ಲಿತಲಪಾಡಿ ಬೀಚ್ ನನ್ನು ಆಯ್ಕೆ ಮಾಡಲಾಗಿದ್ದು ಹಂತಹಂತವಾಗಿ ಮೂಲ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದ್ದು ಮುಂದಿನ ಐದು ವರ್ಷಗಳಲ್ಲಿಪ್ರವಾಸಿಗರನ್ನು ಸೆಳೆಯುವ ಬೀಚ್ ಆಗಿ ಬದಲಾಗಲಿದೆ. ಈಗಾಗಲೇ ತಲಪಾಡಿ ಬೀಚ್ ಅಭಿವೃದ್ಧಿ ಕಾಮಗಾರಿ ಬಗ್ಗೆ ಖಾಸಗಿ ಸಂಸ್ಥೆಗೆ ಟೆಂಡರ್ ಕೊಡಲಾಗಿದೆ. ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಜಲಸಾಹಸ ಕ್ರೀಡೆಗಳನ್ನು ತಲಪಾಡಿ ಕಡಲ ಕಿನಾರೆಯನ್ನು ಆಯೋಜಿಸುವ ಚಿಂತನೆ ಇಲಾಖೆ ಮುಂದೆ ಇದೆ ಎಂದರು.
ಸಸಿಹಿತ್ಲು ಬೀಚ್ನಲ್ಲಿಕಳೆದ ಏಳು ವರ್ಷಗಳಿಂದ ಖಾಸಗಿ ಸಂಸ್ಥೆಗಳ ಜೊತೆಗೂಡಿ ಮೇ ತಿಂಗಳ ಕೊನೆಯ ಮೂರು ದಿನ ಸರ್ಫಿಂಗ್ ಉತ್ಸವ ಆಯೋಜಿಸುತ್ತಾ ಬರಲಾಗಿದ್ದು ಮುಂದಿನ ಯೋಜನೆಯ ಸಸಿಹಿತ್ಲು ಬೀಚ್ನ್ನು ಅಂತಾರಾಷ್ಟ್ರೀಯ ಸರ್ಪೀಂಗ್ ತಾಣವನ್ನಾಗಿ ರೂಪಿಸಲು 160ಕೋಟಿ. ರೂ. ಅನುದಾನ ಮಂಜೂರು ಮಾಡುವಂತೆ ಇಲಾಖೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಆ ಮೂಲಕ ನಿತ್ಯವೂ ಸರ್ಫಿಂಗ್ ನಡೆಸುವ ಯೋಜನೆ ಇದೆ ಎಂದರು.
ಪ್ರವಾಸೋದ್ಯಮ ನೀತಿಯಡಿ ಪ್ರವಾಸಿಗರಿಗೆ ಅನುಕೂಲವಾಗುವ ಸುಮಾರು 20ಯೋಜನೆಗಳಲ್ಲಿ ಬಂಡವಾಳ ಹೂಡುವವರಿಗೆ ಇಲಾಖೆ ವತಿಯಿಂದ 20ಶೇ. ಸಿಗಲಿದೆ. ಈಗಾಗಲೇ ಗುರುತಿಸಲ್ಪಟ್ಟಿರುವ ಪ್ರವಾಸಿ ಕೇಂದ್ರವಾಗಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಧರ್ಮಸ್ಥಳ ಪಂಚಾಯಿತಿ ವ್ಯಾಪ್ತಿಯಲ್ಲಿ ಹೋಟೆಲ್, ಹೋಂ ಸ್ಟೇ, ರೆಸಾರ್ಟ್ ತೆರೆಯಲು ಅವಕಾಶವಿದ್ದು 40ಶೇ. ಸಬ್ಸಿಡಿಯಲ್ಲಿ ದೊರಕಲಿದೆ. ಎರಡು ಕೇಂದ್ರಗಳಲ್ಲಿಈಗಾಗಲೇ ಅಧಿಕೃತ ಹದಿನೈದು ಹೋಂ ಸ್ಟೇ ಕೆಲಸ ಮಾಡುತ್ತಿದೆ. ಆ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜೆಟ್ ಏರ್ವೇಸ್ ಬೆಂಗಳೂರು ವಿಭಾಗ ಮಾರಾಟ ವಿಭಾಗ ಮುಖ್ಯ ವ್ಯವಸ್ಥಾಪಕ ಹರೀಶ್ ಕೆ. ಶೆಣೈ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಟಿಕೆಟ್ ಕಾಯ್ದಿರಿಸುವ ವಿಧಾನಗಳಲ್ಲಿತಂತ್ರಜ್ಞಾನ ಸದ್ಬಳಕೆಯಾಗುತ್ತಿದ್ದುಆ ಕಾರಣದಿಂದ ಕ್ಷಿಪ್ರಗತಿಯಲ್ಲಿ ಪ್ರಯಾಣಿಕರು ಟಿಕೆಟ್ ಪಡೆಯುವ ಖಾತ್ರಿ ಸಿಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿಮಾನದಲ್ಲಿ ಪ್ರಯಾಣಿಸಲು ಬಯಸುತ್ತಾರೆ. ದೇಶದ ಪ್ರಮುಖ ವಿಮಾನ ನಿಲ್ದಾಣಗಳಾದ ದೆಹಲಿ, ಮುಂಬಯಿ, ಹೈದರಾಬಾದ್, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಉತ್ತಮ ಸೇವೆಯು ಪ್ರಯಾಣಿಕರಿಗೆ ಲಭ್ಯವಾಗುವುದರಿಂದ ಅಂತಾರಷ್ಟ್ರೀಯ ಮಟ್ಟದಲ್ಲಿಪ್ರಸಿದ್ಧಿ ಪಡೆಯಲು ಸಾಧ್ಯವಾಗಿದೆ ಎಂದರು.
ಭಾರತಕ್ಕೆ ಬರುವ ಪ್ರವಾಸಿಗರಲ್ಲಿ80ಶೇ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಉದ್ದೇಶದಿಂದ ಬಂದರೆ ಇನ್ನುಳಿದ ಪ್ರಯಾಣಿಕರು ಬೀಚ್ಗಾಗಿ ಬರುತ್ತಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿಅಭಿವೃದ್ಧಿಯ ಕಾರಣದಿಂದ ಹಿನ್ನಡೆ ಆಗಿತ್ತಾದರೂ ಇತ್ತೀಚೆಗೆ ಹಂತಹಂತವಾಗಿ ಅಭಿವೃದ್ಧಿ ಕಾಣುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲು ಹೆಚ್ಚಳವಾಗಿದೆ. ಅದಕ್ಕೆ ಅನುಗುಣವಾಗಿ ವಾಯಯಾನ ಇಲಾಖೆ ಕಾರ್ಯಾಚರಿಸುತ್ತಿದೆ ಎಂದು ನುಡಿದರು.
ಮಂಗಳೂರು ವಿವಿಯ ಕುಲಸಚಿವ ಡಾ. ಎ.ಎಂ. ಖಾನ್ ಮಾತನಾಡಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರಗಳು ಮಾತ್ರವಲ್ಲದೆ ಅತ್ಯುತ್ತಮ ಸೇವೆ ನೀಡುವ ಪ್ರತಿಷ್ಠಿತ ಆಸ್ಪತ್ರೆಗಳಿದ್ದು ವಿದೇಶದಿಂದ ಭಾರತಕ್ಕೆ ಚಿಕಿತ್ಸೆಗೆಂದು ಬರುವವರ ಅನುಕೂಲಕ್ಕಾಗಿ ಮೆಡಿಕಲ್ ಟೂರಿಸಂ ಕ್ಷೇತ್ರಕ್ಕೂ ಪ್ರವಾಸೋದ್ಯಮ ಇಲಾಖೆ ಆದ್ಯತೆ ನೀಡಬೇಕಿದೆ. ಕಳೆದ ತಿಂಗಳು ಕೊಡಗಿನಲ್ಲಿ ನಡೆದ ಘೋರ ದುರಂತದ ಹಿಂದೆ ಮಾನವ ನಿರ್ಮಿತ ತಪ್ಪು ಕಾರಣವೂ ಇದೆ ಎಂಬ ಆರೋಪ ಇದ್ದು ಆ ದೃಷ್ಟಿಯಲ್ಲಿ ಪ್ರವಾಸಿಗರಿಂದ ಪ್ರಕೃತಿ ಸಂರಕ್ಷಣೆಯ ಕಾರ್ಯವೂ ನಡೆಯಬೇಕಿದೆ ಎಂದು ಸಲಹೆ ನೀಡಿದರು.ಜೆಟ್ ಏರ್ವೇಸ್ ಬೆಂಗಳೂರು ವಿಭಾಗ ಮಾರಾಟ ವಿಭಾಗದ ಸಹಾಯಕ ವ್ಯವಸ್ಥಾಪಕ ವಿನೀತ್ ರಾಜೇಂದ್ರನ್ ಉಪಸ್ಥಿತರಿದ್ದರು. ಯಶಸ್ವಿ ಭಟ್ ವಿವಿಧ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಎಂಬಿಎ ಉಪನ್ಯಾಸಕ ಶೇಖರ್ ನಾಯ್ಕ್ ವಂದಿಸಿದರು.
ಜನಾಕರ್ಷಣೆ ಕಳೆದುಕೊಳ್ಳಲಿದೆಯೇ ಪಣಂಬೂರು ಬೀಚ್?
ಪಣಂಬೂರು ಬೀಚ್ ಮುಂದಿನ ಕೆಲವೇ ವರ್ಷಗಳಲ್ಲಿಜನಾಕರ್ಷಣೆ ಕಳೆದುಕೊಳ್ಳಲಿದೆ ಎಂಬ ಆತಂಕ ಎದುರಾಗಿದೆ. ಅದೇ ಸಮಯದಲ್ಲಿತಲಪಾಡಿ ಹಾಗೂ ಸೋಮೇಶ್ವರ ಬೀಚ್ ಜನಾಕರ್ಷಣೆ ಪಡೆಯಲಿದೆ ಎನ್ನಲಾಗಿದೆ. ಅಷ್ಟಕ್ಕೂ ಪಣಂಬೂರು ಬೀಚ್ನಲ್ಲಿಭದ್ರತೆ ಕಾರಣದಿಂದ ಅಕ್ಕಪಕ್ಕದ ಬೃಹತ್ ಸಂಸ್ಥೆಗಳ ಹಿತದೃಷ್ಟಿಯಿಂದ ಪಣಂಬೂರು ಕರಾವಳಿ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆಗೊಳಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.


