UN NETWORKS
ಅಂಬ್ಲಮೊಗರು: ಅಂಬ್ಲಮೊಗರು ಗ್ರಾಮದ ತಿಲಕನಗರದಲ್ಲಿ ನಗರಪ್ರದೇಶದ ರೀತಿಯಲ್ಲಿ ಸರಕಾರದ ವಸತಿ ಸಂಕೀರ್ಣ ರಚಿಸಲು ಉದ್ದೇಶಿಸಲಾಗಿದ್ದು, ಇದು ರಾಜ್ಯದಲ್ಲೇ ಪ್ರಥಮ ಯೋಜನೆಯಾಗಿದೆ ಎಂದು ಅಂಬ್ಲಮೊಗರು ಗ್ರಾಮ ಪಂಚಾಯಿತಿನ ಅಧ್ಯಕ್ಷ ಎಸ್.ಎಂ ರಫೀಕ್ ಹೇಳಿದರು.ಅವರು ಅಂಬ್ಲಮೊಗರು ಗ್ರಾಮ ಪಂಚಾಯಿತಿನ 2018-19 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಿಲಕನಗರದಲ್ಲಿ ವಸತಿ ಸಂಕೀರ್ಣ : ಅಂಬ್ಲಮೊಗರು ಗ್ರಾಮದ ತಿಲಕನಗರದಲ್ಲಿ ಸರಕಾರದ ವಸತಿ ಸಂಕೀರ್ಣ ರಚಿಸುವ ಉದ್ದೇಶವನ್ನು ಸಚಿವರು ಇಟ್ಟುಕೊಂಡಿದ್ದಾರೆ. ಜಾಗವನ್ನು ಸ್ಲಂ ಬೋರ್ಡಿಗೆ ಸೇರಿಸುವ ಮೂಲಕ ನಗರ ವ್ಯಾಪ್ತಿಗಳಲ್ಲಿ ಬರುವಂತಹ ವಸತಿ ಸಂಕೀರ್ಣ ನಿರ್ಮಿಸಲಾಗುವುದು. ಪ್ರತಿಯೊಂದು ಮನೆಯಲ್ಲಿ ಎರಡು ಬೆಡ್ ರೂಂ , ಹಾಲ್ ಮತ್ತು ಅಡುಗೆ ಕೋಣೆಯಿರುತ್ತದೆ. ಕರ್ನಾಟಕದಲ್ಲೇ ಇದು ಮೊದಲ ಯೋಜನೆಯಾಗಿದೆ. ಗ್ರಾಮಸ್ಥರಿಗೆ ಇದೊಂದು ಒಳ್ಳೆಯ ಅವಕಾಶ ಎಂದಿದ್ದಾರೆ.
ಬೀದಿ ದೀಪ ಸಮಸ್ಯೆ : ಗ್ರಾಮದಲ್ಲಿ ಬೀದಿ ದೀಪಗಳ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಸಂಜೆ ನಂತರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಅನ್ನುವ ಮಹಿಳೆಯ ಪ್ರಶ್ನೆಗೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ಸಾಧ್ಯವಾದಷ್ಟು ಬೀದಿ ದೀಪಗಳು ದುರಸ್ತಿಯಲ್ಲಿರುವಂತೆ ನೋಡಲಾಗುತ್ತಿದೆ. ಮಳೆಗಾಲವಾಗಿರುವುದರಿಂದ ಹೆಚ್ಚಾಗಿ ಹಾಳಾಗುತ್ತಿದೆ. ಕೂಡಲೇ ದುರಸ್ತಿಪಡಿಸಲು ಸಾಧ್ಯವಾಗುತ್ತಿಲ್ಲ ಅಂದರು.
ವೀರರಾಣಿ ಅಬ್ಬಕ್ಕ ಆಟದ ಮೈದಾನಕ್ಕೆ ಕಾರ್ಯ ಸ್ಥಗಿತವಾಗಿದೆ. ಗ್ರಾ.ಪಂ ಆಡಳಿತ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಗ್ರಾಮಕ್ಕೆ ಆಟದ ಮೈದಾನ ಅಗತ್ಯವಿದೆ ಅನ್ನುವ ಗ್ರಾಮಸ್ಥ ಇಬ್ರಾಹಿಂ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು ಕಂಡಿಲ ಭಾಗದಲ್ಲಿ ಮೈದಾನಕ್ಕೆ ಜಾಗ ಮಂಜೂರಾಗಿ ಬಂದಲ್ಲಿ ಶೀಘ್ರವೇ ಪಂಚಾಯಿತಿ ಅದರ ಕಾರ್ಯವನ್ನು ಮುಂದುವರಿಸುತ್ತದೆ. ಈವರೆಗೂ ಜಾಗದ ಕಡತಗಳು ಪಂಚಾಯಿತಿಗೆ ಹಸ್ತಾಂತರವಾಗಿಲ್ಲ. ಈ ನಡುವೆ ಖಾಸಗಿಯವರು ಜಾಗದ ತಕರಾರಿನಿಂದ ಹೈಕೋರ್ಟಿನ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಈ ಕುರಿತು ಪಂಚಾಯಿತಿ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ . ಅಂಬ್ಲಮೊಗರು ಸರಕಾರಿ ಹೈಸ್ಕೂಲಿಗೆ ಜಿಲ್ಲಾಧಿಕಾರಿ ಮತ್ತು ಪಂಚಾಯಿತಿ ಗುರುತಿಸಲಾದ ಜಾಗಕ್ಕೆ ಸಂಬಂಧಪಟ್ಟು ದಾವೆ ನ್ಯಾಯಾಲಯದಲ್ಲಿದೆ. ಇದರಲ್ಲಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್, ಡಿಡಿಪಿಐ ಮತ್ತು ಬಿಇಒ ಅವರನ್ನು ಒಳಗೊಂಡಿದೆ. ಗ್ರಾಮಸಭೆಯಲ್ಲಿ ವಿಚಾರದ ಕುರಿತು ಮಾತನಾಡುವ ಬದಲು ಶಾಲಾ ಅಭಿವೃದ್ಧಿ ಸಮಿತಿಯಲ್ಲಿ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಪಂ.ಅಧ್ಯಕ್ಷರು ಸಲಹೆ ನೀಡಿದರು. ಮದಕ ಜಂಕ್ಷನ್ನಿನಲ್ಲಿ ರಿಕ್ಷಾ ನಿಲ್ದಾಣ ನಿರ್ಮಿಸಿಕೊಡಬೇಕೆಂಬ ರಿಕ್ಷಾ ಚಾಲಕರ ಮನವಿಗೆ ಸ್ಥಳೀಯ ಮನೆಯೊಂದರ ಮಾಲೀಕರ ಆಕ್ಷೇಪಣೆಯಿದೆ. ಮನೆಯಲ್ಲಿ ಹೆಣ್ಮಕ್ಕಳಿರುವ ಸಮಯದಲ್ಲಿ ಮನೆ ಎದುರುಗಡೆ ರಿಕ್ಷಾ ನಿಲ್ದಾಣ ರಚಿಸಲು ವಿರೋಧಿಸಿದ್ದಾರೆ. ಅದಕ್ಕಾಗಿ ಜಂಕ್ಷನ್ನಿನ ಮೇಲಿನ ಸ್ಥಳದಲ್ಲಿ ಎರಡು ರಿಕ್ಷಾಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲು ಪಂಚಾಯಿತಿ ಸಿದ್ಧ ಎಂದು ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.
ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು : ಗ್ರಾಮದಲ್ಲಿ ಒಂಭತ್ತು ಕೆರೆಗಳಿವೆ. ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಸಚಿವರು ಕೆರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಪೈಕಿ ಬಸ್ತಿಕಟ್ಟೆ ಕೆರೆಯ ಅಭಿವೃದ್ಧಿಗೆ ರೂ.24.97 ಲಕ್ಷ ಅನುದಾನ ಮಂಜೂರುಗೊಳಿಸಿದ್ದಾರೆ. ಶೇ.85 ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಮುಂದೆ ವಾಡಕೆರೆ ಅಭಿವೃದ್ಧಿಗೆ ಮೂಡ ಸಂಬಂಧಿಸಿದ ಅನುದಾನ ಮಂಜೂರುಗೊಳಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಗ್ರಾಮಸ್ಥರು ಸಹಕರಿಸಿದಲ್ಲಿ ನೀರಿನ ಅಭಾವದಿಂದ ಪಾರಾಗಲು ಸಾಧ್ಯ.
ಇಂಗುಗುಂಡಿಗೆ ಹೆಚ್ಚಿನ ಆದ್ಯತೆ : ಗ್ರಾಮದಲ್ಲಿ ಇಂಗುಗುಂಡಿ ರಚಿಸಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಇಂಗುಗುಂಡಿ ರಚಿಸುವ ಮನೆಮಂದಿಗೆ ಸೂಕ್ತ ದಾಖಲೆಗಳಿದ್ದಲ್ಲಿ ರೂ.14,000 ಸಹಾಯಧನ ವಿತರಿಸಲಾಗುವುದು. ಗುಂಡಿ ರಚಿಸುವ ಮುನ್ನವೇ ಅರ್ಜಿ ಸಲ್ಲಿಸಬೇಕಿದೆ. ಜಿಪಿಎಸ್ ಪ್ರಕ್ರಿಯೆ ನಂತರ ಸಹಾಯಧನ ವಿತರಿಸಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ತಿಳಿಸಿದರು.
ನೋಡೆಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ದುರ್ಗಾಲತಾ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಗ್ರಾ.ಪಂ ಅಧ್ಯಕ್ಷ ಎಸ್.ಎಂ ರಫೀಕ್, ಉಪಾಧ್ಯಕ್ಷೆ ಯಶೋಧಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.


