UN NETWORKS
ಉಳ್ಳಾಲ: ವೈದ್ಯಕೀಯ ಶಿಕ್ಷಣದ ವೇಳೆ ನೈತಿಕವಾಗಿ ಅಭ್ಯಾಸ ನಡೆಸಿದಾಗ ವೃತ್ತಿಯಲ್ಲಿ ಸಮರ್ಥನೀಯತೆಯನ್ನು ಗಳಿಸಬಹುದು. ಈ ಮೂಲಕ ನ್ಯಾಯಬದ್ಧವಾಗಿ ಕರ್ತವ್ಯ ನಿರ್ವಹಿಸುವುದರಿಂದ ಜನಮಾನಸದಲ್ಲಿ ಶಾಶ್ವತವಾದ ಗೌರವ ಪಡೆಯಲು ಸಾಧ್ಯ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.
ವೈದ್ಯರ ದಿನಾಚರಣೆ ಪ್ರಯುಕ್ತ ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಧೀನದ ಕ್ಷೇಮ ಚಿಂತನಾ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದ ಅಧ್ಯಕಕ್ಷತೆ ವಹಿಸಿ ಅವರು ಮಾತನಾಡಿದರು.

ವೈದ್ಯರೆಂದರೆ ನಾಯಕರು, ಜೀವಮಾನ ಕಲಿಯುವವರು, ಸಂವಹನವುಳ್ಳವರು ಹಾಗೂ ವೃತ್ತಿಪರರಾಗಿರುತ್ತಾರೆ. ಇದೆಲ್ಲರ ಜೊತೆಗೆ ವೃತ್ತಿಯಲ್ಲಿ ಸಮಗ್ರತೆ ಮತ್ತು ಬದ್ಧತೆಯನ್ನು ಕಾಪಾಡುವುದರ ಮೂಲಕ ಯಶಸ್ವಿ ವೈದ್ಯನಾಗಬಹುದು. ಇಂತಹ ಬದ್ಧತೆಯನ್ನು ಇಟ್ಟುಕೊಂಡು ದೂರದ ಪಯ್ಯನ್ನೂರಿನಲ್ಲಿ ಕೋಪಿಷ್ಠ ರೋಗಿಗಳ ನಡುವೆ ಯಶಸ್ವಿಯಾಗಿ ಡಾ|.ಎ.ಹೆಚ್ ಶೆಣೈ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಹಳ ಕಷ್ಟದಿಂದ ಸೇವೆ ನಡೆಸಿ ಜನಮಾನಸದಲ್ಲಿ ಇಂದಿಗೂ ಶಿರಸಿಯ ಡಾ| ಅರುಣ್ ಪ್ರಭು ದಂಪತಿಗಳಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಿಟ್ಟೆ ಕಾರ್ಕಳ ನಿಟ್ಟೆಯ ಗಜಾರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಯರಾಮ ರೈ, ಪಯ್ಯನ್ನೂರಿನ ಜನರಲ್ ಸರ್ಜನ್ ಡಾ. ಎಚ್. ಎ. ಶೆಣೈ. ಪುತ್ತೂರಿನ ಖ್ಯಾತ ವೈದ್ಯ ಡಾ. ಭಾಸ್ಕರ್, ಶಿರಸಿಯ ಜನರಲ್ ಸರ್ಜನ್ ಡಾ. ಅರುಣ್ ಪ್ರಭು ಹಾಗೂ ಶಿರಸಿಯ ಅನಸ್ತೇಶಿಯಾ ತಜ್ಞೆ ಡಾ. ಆಶಾ ಪ್ರಭು ಅವರನ್ನು ಸನ್ಮಾನಿಸಲಾಯಿತು.ವೈಸ್ ಡೀನ್ ಡಾ. ಅಮೃತ್ ಎಂ. ಮಿರಾಜ್ಕರ್, ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ, ಡಾ. ಮಂಜುನಾಥ್ ಆರ್. ಕಾಮತ್, ಡಾ. ರಾಜೀವ್ ಟಿ.ಪಿ ಹಾಗೂ ಡಾ. ದಿಲೀಪ್ ಕೆ.ಎಸ್ ಸನ್ಮಾನಿತರನ್ನು ಪರಿಚಯಿಸಿದರು.ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹೀರೇಮಠ ವಂದಿಸಿದರು. ಕ್ಷೇಮ ಡೀನ್ ಡಾ. ಪಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಆರ್ಥೊಪೆಡಿಕ್ಸ್ ಪ್ರೊಫೆಸರ್ ಡಾ. ಸಿದ್ದಾರ್ಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕೇರಳೀಯರಿಗೆ ಕ್ಷೇಮದ ಕೊಡುಗೆ ಅಪಾರ
ಕೇರಳ ಭಾಗದವರಿಗೆ ಕ್ಷೇಮ ಆಸ್ಪತ್ರೆ ಬಹಳಷ್ಟು ಕೊಡುಗೆಯನ್ನು ನೀಡುತ್ತಿದೆ. ಪಯ್ಯನ್ನೂರಿನಲ್ಲಿ ಕರ್ತವ್ಯ ನಿರ್ವಹಿಸಿದರೂ, ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯನ್ನು ಅರಸಿಕೊಂಡು ಬರುವ ಅಲ್ಲಿನ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದು ವಾಪಸ್ಸಾಗುವವರಿದ್ದಾರೆ. ಇಂತಹ ಸೇವೆ ಅಲ್ಲಿನ ಗ್ರಾಮೀಣ ಪ್ರದೇಶದ ಮಂದಿಗೆ ಬಹಳಷ್ಟು ಸಹಕಾರಿಯಾಗಿದೆ
ಡಾ| ಎಚ್.ಎ.ಶೆಣೈ
ಜನರಲ್ ಸರ್ಜನ್
ಪಯ್ಯನ್ನೂರು
ವೈದ್ಯರು ತಮ್ಮನ್ನು ತಾವು ವೃದ್ಧಿಪಡಿಸಿಕೊಂಡು ಮುಂದುವರಿಯಬೇಕಿದೆ. ವೈದ್ಯ ವೃತ್ತಿಯಲ್ಲಿ ನಿವೃತ್ತಿಯಿಲ್ಲ. ವೈದ್ಯಕೀಯ ಅಭ್ಯಾಸದ ಸಂದರ್ಭ ನೈತಿಕತೆ ಮತ್ತು ನೈತಿಕತೆಯಿಲ್ಲದ ಶಿಕ್ಷಣವನ್ನು ಪಡೆಯಬಹುದು. ನೈತಿಕತೆಯ ಶಿಕ್ಷಣ ಗಳಿಸಿ ಉತ್ತಮ ಸೇವೆಯನ್ನು ಜನರಿಗೆ ಒದಗಿಸಬೇಕಿದೆ. ಪ್ರಸ್ತುತ ಬರುವ ರೋಗಿಗಳು ಬುದ್ಧಿವಂತರು ಹಾಗೂ ದಯವಂತರೂ ಇರುತ್ತಾರೆ. ಅದನ್ನೆಲ್ಲಾ ಮನಗಂಡು ಅನುಭೂತಿಯಿಂದ ವರ್ತಿಸಿದಲ್ಲಿ ವೈದ್ಯರ ಮೇಲಿನ ಹಿಂಸೆಯಿಂದ ದೂರವಿರಬಹುದು.
ಡಾ| ಭಾಸ್ಕರ್
ಖ್ಯಾತ ವೈದ್ಯರು
ಪುತ್ತೂರು
ವೈದ್ಯಕೀಯ ಲೋಕ ಬಹಳಷ್ಟು ಬದಲಾಗಿದೆ. ಸತತ 30 ವರ್ಷಗಳ ತರಬೇತಿಯಿಂದಾಗಿ ಹಿಂದೆ ವೈದ್ಯರಿಗೆ ಮದುವೆಯಾಗಲು ಹುಡುಗಿ ಕೊಡುತ್ತಿರಲಿಲ್ಲ. ತನ್ನ ಸೇವಾ ಅವಧಿಯಲ್ಲಿ ಭಾರತೀಯ ಸೇನೆಯ ಜೊತೆಗೆ ಕರ್ತವ್ಯ ನಿರ್ವಹಿಸಿರುವುದು ಅವಿಸ್ಮರಣೀಯ. ಇಂಡೋ- ಪಾಕ್ ಯುದ್ಧದ ಸಮಯದಲ್ಲಿ ಕಾಡಿನೊಳಗೆ ಕಳೆದಿರುವ ದಿನಗಳು ಈಗಲೂ ಕಣ್ಣ ಮುಂದೆ ಬರುತ್ತಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚಾಗಿ ಅಧ್ಯಯನ ನಡೆಸುವುದರ ಮೂಲಕ ವೃತ್ತಿಯಲ್ಲಿ ಯಶಸ್ವಿಯನ್ನು ಕಂಡಿದ್ದೇನೆ. ವೃತ್ತಿ ಜೊತೆಗೆ ಆರೋಗ್ಯವನ್ನು ಕಾಪಾಡಿರುವುದರಿಂದ 72 ರ ಹರೆಯದಲ್ಲೂ ಆರೋಗ್ಯವಂತನಾಗಿರುವೆ.
ಡಾ| ಅರುಣ್ ಪ್ರಭು
ಜನರಲ್ ಸರ್ಜನ್
ಶಿರಸಿ
ಸರಕಾರಿ ಆಸ್ಪತ್ರೆಯಲ್ಲೇ 22 ವರ್ಷಗಳ ಸೇವೆಯನ್ನು ಪ್ರೀತಿಯಿಂದ ಸಲ್ಲಿಸಿದ್ದೇನೆ. ಎಲ್ಲಾ ವಿಭಾಗದಲ್ಲಿಯೂ ಓರ್ವಳೇ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಬಹಳಷ್ಟು ಬೆಳೆಸಿತು. ಹಾವು ಕಚ್ಚಿ ಕೋಮಾ ಸ್ಥಿತಿಗೆ ತಲುಪಿದ ಯುವಕನ ರಕ್ಷಣೆ ಮತ್ತು ಅನಾರೋಗ್ಯದಿಂದ ಸಾವಿನ ಅಂಚಿನಲ್ಲಿದ್ದ 4ರ ಹರೆಯದ ಮಗುವನ್ನು ಇದ್ದ ಸೌಲಭ್ಯಗಳಲ್ಲೇ ರಕ್ಷಿಸಿದ ನೆನಪು ಈಗಲೂ ನೆನಪಾಗುತ್ತದೆ. ಬದುಕಿಸಿದ ಮಗು 32ರ ತರುಣನಾಗಿ ಬೆಳೆದು ಈಗಲೂ ಗೌರವಿಸಿ ನೆನಪಿಸುತ್ತಿರುವುದು ಸಂತಸ ಕೊಡುತ್ತದೆ. ಶಿರಸಿಯ ಗ್ರಾಮೀಣ ಭಾಗದ ನಾಲ್ಕು ಪ್ರದೇಶಗಳ ಕ್ಷಯರೋಗಿಗಳ ಪರೀಕ್ಷೆ ಜವಾಬ್ದಾರಿ ತನ್ನ ಮೇಲೆ ಬಿದ್ದಾಗ, ಚಾಲಕನಿಲ್ಲದ ಸಮಯದಲ್ಲಿ ಅಂಬಾಸಿಡರ್ ಕಾರನ್ನು ತಾನೇ ಚಲಾಯಿಸಿಕೊಂಡು ಶುಶ್ರೂಷಕಿಯರ ಜತೆಗೆ ಕರ್ತವ್ಯ ನಿರ್ವಹಿಸುವ ಮೂಲಕ ಹಲವರ ಜೀವ ಉಳಿಸಿರುವ ಸೇವೆಯನ್ನು ಜನ ಈಗಲೂ ಕೃತಾರ್ಥಭಾವದಲ್ಲಿ ನೋಡುತ್ತಾರೆ.
ಡಾ| ಆಶಾ ಪ್ರಭು
ಅನಸ್ತೇಷಿಯಾ ತಜ್ಞೆ


