UN NETWORKS
ಕೋಟೆಕಾರು: ಮನೆಗಳು ಮಾತ್ರವಲ್ಲ, ದೇವ ಸಂಕಲ್ಪಗಳು, ನಾಗಚೈತನ್ಯ ವಾಸಸ್ಥಾನ, ದೈವಗಳ ತಾಣ, ದೇವತಾ ಸಂಕಲ್ಪ ಕುಣಿದಾಡುವ ತಾಣವಾದ ಕಾಯರ್ಮಜಲಿನ ಸುಮಾರು 9.98 ಎಕರೆ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಗೆ ಮುಂದಾದವರ ಮಾನಸಿಕ ಭಾವನೆಗಳ ಬಗ್ಗೆ ಸಂಶಯವಿದೆ ಎಂದು ಮರಕಡ ಶ್ರೀ ಗುರು ಪರಾಶಕ್ತಿ ಕ್ಷೇತ್ರದ ಶ್ರೀ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿ ಖೇದ ವ್ಯಕ್ತಪಡಿಸಿದ್ದಾರೆ.
ಕೋಟೆಕಾರು ಕಾಯರ್ ಮಜಲು ಎಂಬಲ್ಲಿ ಯೋಜಿತ ಘನ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಯ ದುಷ್ಪರಿಣಾಮದ ಕುರಿತು ಕೋಟೆಕಾರು ಗ್ರಾಮಸ್ಥರ ಸಮ್ಮುಖದಲ್ಲಿ , ಕಾಯರ್ಮಜಲು ದೇವರ ಅರಮನೆ ವಠಾರದಲ್ಲಿ ಭಾನುವಾರ ಜರಗಿದ ಬಹಿರಂಗ ಜಾಗೃತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಹಲವು ಮನೆಗಳು ಇರುವ ಪ್ರದೇಶದಲ್ಲೇ ಕಾನೂನು ಮೀರಿ ಘಟಕ ಸ್ಥಾಪನೆಗೆ ಮುಂದಾಗಿರುವುದು ದುರಂತ. ಪ್ರದೇಶದ ಪಾವಿತ್ರ್ಯತೆಯನ್ನು ತಿಳಿದು ಮಾಡಲು ಹೊರಟಿರುವುದರ ವಿರುದ್ಧ ಖೇದವಿದೆ. ಜಾಗದ ವೈಶಿಷ್ಟ್ಯತೆ ತಿಳಿದವರೇ ಜಾಗ ತೋರಿಸಿರುವುದು ಅಚ್ಚರಿಯ ಬೆಳವಣಿಗೆ. ಇದನ್ನು ಗ್ರಾಮದ ಜನತೆ ವಿರೋಧಿಸುವುದರ ಮೂಲಕ ಕಾರಣಿಕ ಕ್ಷೇತ್ರ ಕೊಂಡಾಣದ ಭಂಡಾರಮನೆ ಇರುವ ಮಣ್ಣಿನ ಪಾವಿತ್ರ್ಯತೆಯನ್ನು ಉಳಿಸಬೇಕಿದೆ. ಪ್ರದೇಶದಲ್ಲಿ ನಕಾರಾತ್ಮಕ ಭಾವಗಳ ಶಕ್ತಿಯಿದ್ದ ಸಂದರ್ಭ , ಜನ ಕಣ್ಣೀರಿನಲ್ಲೇ ದಿನ ದೂಡುತ್ತಿದ್ದ ಸಂದರ್ಭ ದೇವರಮನೆ ಸ್ಥಾಪಿಸುವುದರ ಮೂಲಕ ಪ್ರದೇಶದಲ್ಲಿ ಸಕಾರಾತ್ಮಕ ಬೆಳವಣಿಗೆ ನಡೆದಿದೆ. ಈ ನಡುವೆ ಕೋಟೆಕಾರು ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ ಜಾಗದ ಮೌಲ್ಯ ಗೊತ್ತಿಲ್ಲವೇ ? ಎಂದು ಪ್ರಶ್ನಿಸಿದ ಅವರು ಮನೆಯಿಲ್ಲದವರಿಗೆ ನಿವೇಶನ ನೀಡುವ ಆಸೆಯನ್ನು ತೋರಿಸಿ ಇದೀಗ ಅದೇ ಜಾಗವನ್ನು ಕಬಳಿಸುವುದರಲ್ಲಿ ನ್ಯಾಯವಿಲ್ಲ. ಎಲ್ಲಾ ಧರ್ಮದವರು ನಂಬಿಕೆಯಿಟ್ಟಂತಹ ಜಾಗವದು. ಪರಿಸರ ಇಲಾಖೆಯಿಂದ ಅನುಮತಿ ದೊರೆಯದೇ ಇದ್ದರೂ, ಆತುರಾತುರವಾಗಿ ಘಟಕ ನಿರ್ಮಿಸುವುದು ಯಾವ ಕಾರಣಕ್ಕಾಗಿ. ಎಂಟು ವಾರಗಳಿಂದ ಕಾನೂನಾತ್ಮಕ ರೀತಿಯಲ್ಲಿ ಹೋರಾಟಕ್ಕೆ ಇಳಿಯಲಾಗಿದೆ. ರಾಜ್ಯದ ಉಚ್ಛ ನ್ಯಾಯಾಲಯದಲ್ಲೂ ದಾವೆಯನ್ನು ಹೂಡಲಾಗಿದೆ. ಗ್ರಾಮಸ್ಥರ ಬೆಂಬಲ ಅಗತ್ಯ. ಮನೆಯಿರುವ ಪ್ರದೇಶದಲ್ಲಿ ಘಟಕ ನಿರ್ಮಾಣವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಜಿಲ್ಲಾಡಳಿತದಿಂದ ನಿಲ್ಲಿಸಲು ಸಾಧ್ಯ : ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ಪಾವಿತ್ರ್ಯತೆಯನ್ನು ಹೊಂದಿರುವ ಕ್ಷೇತ್ರದಲ್ಲಿ ಘಟಕ ಸ್ಥಾಪನೆಗೆ ಎಂದಿಗೂ ಬಿಡಲಾರೆವು. ಪಟ್ಟಣ ಪಂಚಾಯಿತಿಯಲ್ಲಿ ಈ ಬಗ್ಗೆ ಮಾತನಾಡಿದರೆ ಪ್ರಯೋಜನವಿಲ್ಲ. ಜಿಲ್ಲಾಡಳಿತವೇ ಹೊಣೆಯಾಗಿದ್ದು, ಅಲ್ಲೇ ಮನವಿ ಮಾಡಿ ಯೋಜನೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಬೇಕಿದೆ. ಈ ಹಿಂದೆ ಜಿ.ಪಂ ಸದಸ್ಯನಾಗಿದ್ದ ಸಂದರ್ಭ ಬಂಟ್ವಾಳದ ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಮುಂದಾದಾಗಲೂ ವಿರೋಧಿಸಿದ ಫಲವಾಗಿ. ಇದೀಗ ತಾತ್ಕಾಲಿಕವಾದ ಘಟಕ ಇದ್ದು, ಶೀಘ್ರವೇ ಅದು ಸ್ಥಳಾಂತರವಾಗಲಿದೆ. ಕಾಯರ್ ಮಜಲಿನಲ್ಲಿ ಸ್ಥಾಪನೆಗೆ ಎಂದಿಗೂ ಬಿಡುವುದಿಲ್ಲ ಎಂದರು.
ಕುದುರೆಮುಖ ಬೆಟ್ಟ ಅಗೆತದಿಂದ ಕಡಲ್ಕೊರೆತ: ಹಿರಿಯ ಭುಜಂಗ ಶೆಟ್ಟಿ ಮಾತನಾಡಿ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ವಿರೋಧಗಳು ಕೇಳಿಬರುತ್ತಿದ್ದರೂ ಪರಿಸರಕ್ಕೆ ಮಾರಕವಾದಂತಹ ಯೋಜನೆಗಳು ಜಾರಿಯಾಗುತ್ತಲೇ ಇದೆ. ಕುದುರೆಮುಖ ದಲ್ಲಿ ಗಣಿಗಾರಿಕೆ ಆರಂಭದ ಸಂದರ್ಭ ಜನರ ವಿರೋಧ ಕೇಳಿಬಂದರೂ, ಸರಕಾರ ವಿಶ್ವಾಸಗಳನ್ನು ಮುಂದಿಟ್ಟು ಒಂದು ಬೆಟ್ಟವನ್ನು ಅಗೆದು ಕಬ್ಬಿಣ ಸಂಗ್ರಹಿಸಿಯೇ ಬಿಟ್ಟಿದೆ. ಇದರ ದುಷ್ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಆಪತ್ತಿಗೆ ಸಿಲುಕಿದೆ. ಅಂದಿನಿಂದ ಗಾಳಿಯ ಪ್ರಮಾಣ ಹೆಚ್ಚಾಗಿ ಉಳ್ಳಾಲ, ಸುರತ್ಕಲ್, ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಆರಂಭವಾಗಿದೆ. ಅದೇ ರೀತಿಯಲ್ಲಿ ಮೀನು ಸಾಗಾಟದ ಲಾರಿಗಳಿಂದ ನೀರು, ಬೈಕಂಪಾಡಿ ರಸ್ತೆಯಲ್ಲಿ ರಾಸಾಯನಿಕಗಳು ಎದ್ದುಕಾಣುತ್ತಿವೆ. ವಿಶ್ವಾಸಗಳನ್ನು ಮುಂದಿಟ್ಟು ಸರಕಾರ ಯೋಜನೆಗಳನ್ನು ಮುಂದಿಟ್ಟು ಬಳಿಕ ಜನರನ್ನು ಆಪತ್ತಿನಲ್ಲಿ ಸಿಲುಕಿಸುತ್ತದೆ. 8 ಮಾರಕ ಟಾಕ್ಸಿನ್ ಗಳ ಪೈಕಿ ಏಳು ತ್ಯಾಜ್ಯದಿಂದ ಬರುತ್ತದೆ. ಅಂತಹ ಯೋಜನೆಯನ್ನು ಜನವಸತಿ ಪ್ರದೇಶದಲ್ಲಿ ನಿರ್ಮಿಸಲು ಹೊರಟಿರುವವರು ಜನರನ್ನು ಅಪಾಯದಲ್ಲಿ ಸಿಲುಕಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಹೇಳಿದ್ದು 3 ಎಕರೆ, 10 ಎಕರೆ ಒತ್ತುವರಿ : ನಿರ್ಮಿಸಲು ಉದ್ದೇಶಿಸಲಾಗಿರುವ ಯೋಜನೆಯ ವಿವರವನ್ನು ನೀಡಿದ ಅಪರ್ಣಾ ವಿ.ಭಟ್ ಮಾತನಾಡಿ ಕೇಂದ್ರದ ಸ್ವಚ್ಛ ಭಾರತ ಯೋಜನೆಯಡಿ ಪ್ರತಿಯೊಂದು ಸ್ಥಳೀಯಾಡಳಿತ ಸಂಸ್ಥೆಗಳ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಸೂಚನೆಯಿದೆ. ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಕೋಟೆಕಾರು ಪಟ್ಟಣ ಪಂಚಾಯಿತಿಯನ್ನು ಗುರುತಿಸಲಾಗಿದ್ದು, ಅಲ್ಲಿನ ಆಡಳಿತ ಸೂಚಿಸಿದ ಪ್ರದೇಶದಲ್ಲಿ ಘಟಕ ನಿರ್ಮಿಸುತ್ತಾರೆ. ಒಟ್ಟು 5.17 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಅದರಲ್ಲಿ ಶೇ.25 ಕೇಂದ್ರ ಸರಕಾರ, ಶೇ.25 ರಾಜ್ಯ ಹಾಗೂ ಶೇ.50 ಸ್ಥಳೀಯಾಡಳಿತ ಭರಿಸಿ ನಿರ್ಮಿಸುವ ಯೋಜನೆಯಾಗಿದೆ. ಅತಿ ಹೆಚ್ಚು ಮಾಲಿನ್ಯಗೊಳಿಸುವ ಯೋಜನೆಯಾಗಿರುವುದರಿಂದ ರೆಡ್ ಕ್ಯಾಟಗರಿ ಲಿಸ್ಟ್ ನಲ್ಲಿ ಹಲವು ನಿಯಮಗಳನ್ನು ಪಾಲಿಸಬೇಕಾದ ಆದೇಶವಿದೆ. 3 ಎಕರೆ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಿ, 2 ಮೀ ಅಗೆದು, 5 ಮೀ ಎತ್ತರದ ಗುಡ್ಡ ನಿರ್ಮಿಸಿ ತ್ಯಾಜ್ಯವನ್ನು ಹಾಕುವ ಯೋಜನೆ. 5 ಲಾರಿಗಳನ್ನು ಪಟ್ಟಣ ಪಂಚಾಯಿತಿಗೆ ನೀಡಿ, 30 ಮಂದಿಗೆ ಉದ್ಯೋಗ ಅವಕಾಶ ಅದರಲ್ಲಿದೆ. ಆದರೆ ಕಾಯರ್ ಮಜಲಿನಲ್ಲಿ ಹೇಳಿರುವುದು 3 ಎಕರೆ ಪ್ರದೇಶ ಆದರೆ 10 ಎಕರೆ ವ್ಯಾಪ್ತಿಯಲ್ಲಿ ಯೋಜನೆ ನಡೆಸಲಾಗಿದೆ. ತ್ಯಾಜ್ಯ ನೀರು ಹರಿಯಲು ಆರಂಭವಾದರೆ ಸ್ಥಳೀಯ ನಿವಾಸಿಗಳು ಕುಡಿಯುವ ನೀರು ವಿಷ ಆಗುವುದರಲ್ಲಿ ಸಂಶಯವಿಲ್ಲ. ಮೀಥೇನ್, ಕಾರ್ಬನ್ ಡಯಾಕ್ಸೈಡಿನಂತಹ ವಿಷಾನಿಲಗಳು ತಯಾರಾಗಿ ಶ್ವಾಸಕೋಶ ಸಮಸ್ಯೆ, ಕಣ್ಣುರಿ, ಉದರದ ಸಮಸ್ಯೆಗಳು ಖಂಡಿತಾ ಬಾಧಿಸಬಹುದು. ಸದ್ಯ ಕೋಟೆಕಾರು ಪ.ಪಂ ವ್ಯಾಪ್ತಿಯ ತ್ಯಾಜ್ಯ ಮಾತ್ರ ಸಂಗ್ರಹಿಸಲಾಗುವುದು ಎಂದು ಹೇಳಲಾಗುತ್ತಿದ್ದರೂ ಮುಂದೆ ಬೇರೆ ಕಡೆಯಿಂದಲೂ ತ್ಯಾಜ್ಯ ತಂದು ಹಾಕುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು ನಿಯೋಜಿತ ಪ್ರದೇಶವನ್ನು ನಿವೇಶನಕ್ಕೆಂದು ಮೀಸಲಿಟ್ಟಿರುವ ದಾಖಲೆಯಿದೆ. 2016ರಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿರುವ ಆದೇಶದಂತೆ ಘಟಕ ನಿರ್ಮಿಸಲು ಅನುಮತಿಯೇ ಇಲ್ಲ. ಇತರೆ ಸರಕಾರಿ ಸಂಸ್ಥೆಗಳಿಂದಲೂ ಅನುಮತಿಯನ್ನು ಪಡೆಯಲಾಗಿಲ್ಲ. ಕುಮ್ಕಿ ಜಾಗವನ್ನು ಘಟಕ ಸ್ಥಾಪನೆಗೆಂದೇ ಕುಮ್ಕಿ ವಿರಹಿತ ಎಂದು ಮಾಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ 2020ರವರೆಗಿನ ಮಾಸ್ಟರ್ ಪ್ಲಾನ್ ಮಾಡುತ್ತದೆ. ಅದರಲ್ಲಿಯೂ ಉಲ್ಲೇಖವಿಲ್ಲ. 10 ಮೀ ದೂರದಲ್ಲಿ ಊರಿನ ಜನರಿಗೆ ಕುಡಿಯುವ ನೀರು ಕೊಡುವ ಬೋರ್ ವೆಲ್ ಇದೆ. ಆದರೆ ಘಟಕ ಸ್ಥಾಪನೆಯಾದಲ್ಲಿ ಜನರಿಗೆ ವಿಷ ನೀರು ಕುಡಿಸಿದಂತೆ ಆಗಬಹುದು ಎಂದು ಗ್ರಾಮಸ್ಥರೂ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿಶ್ರಾಂತ ಜಿಲ್ಲಾಧಿಕಾರಿ ಗಣಪತಿ, ಕಾಂಗ್ರೆಸ್ ಮುಖಂಡ ಈಶ್ವರ್ ಉಳ್ಳಾಲ್, ದೇವರಮನೆ ದೇವಸ್ಥಾನದ ಟ್ರಸ್ಟೀ ರವೀಂದ್ರ ಕೋಟೆಕಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


