UN NETWORKS
ಕೊಣಾಜೆ: ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಕ್ಷೇತ್ರದ ಸಂಶೋಧನೆ ಮಹತ್ವದ್ದಾಗಿದ್ದು ಭಾರತೀಯ ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ತಮ್ಮಲ್ಲಿರುವ ಜ್ಞಾನವನ್ನು ಅಲ್ಲಿ ಹಂಚುವುದರಿಂದ ತಮ್ಮ ಸಂಶೋಧನೆ ನಡೆಸುವ ಸಂಸ್ಥೆ ಪೇಟೆಂಟ್ ಪಡೆಯುವ ಮೂಲಕ ಅದರ ಪೂರ್ಣ ಪ್ರಮಾಣದ ಲಾಭ ಪಡೆಯುತ್ತದೆ. ಹಾಗಾಗಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಮಾತೃಭೂಮಿಯಲ್ಲಿಯೇ ಸಂಶೋಧನೆಗೆ ಬಳಸುವ ಮೂಲಕ ಭಾರತಕ್ಕೆ ಪೂರ್ಣ ಪ್ರಮಾಣದ ಲಾಭವನ್ನು ದೊರಕುವಂತೆ ಮಾಡಬೇಕು. ಅಂತಹ ಕಾರ್ಯದಿಂದ ವಿದೇಶಿಯರ ಮುಂದೆ ನಾವು ಸದಾ ಕೈಚಾಚುವ ಅನಿವಾರ್ಯತೆಯನ್ನು ತಪ್ಪಿಸಬಹುದು ಎಂದು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಅವರು ಶನಿವಾರ ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ವಿವಿ ಕುಲಪತಿ ಪ್ರೊ.ಕೆ. ಭೈರಪ್ಪ ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಾಹಿತಿಗಳು ಹಾಗೂ ವಿಜ್ಞಾನಿಗಳು ಉತ್ತಮ ಆಡಳಿತಗಾರರಾಗಲು ಸಾಧ್ಯವಿಲ್ಲ ಎಂಬ ಮಾತು ಇದೆಯಾದರೂ ಅದನ್ನು ತಪ್ಪು ಎಂದು ತೋರಿಸಿಕೊಟ್ಟವರಲ್ಲಿ ಕುವೆಂಪು ಸಾಲಿಗೆ ಮಂಗಳೂರು ವಿವಿಯಲ್ಲಿ ಕಾರ್ಯ ನಿರ್ವಹಿಸಿದ ಪ್ರೊ.ಕೆ. ಭೈರಪ್ಪ ಅವರು ಉದಾಹರಣೆ. ಕುವೆಂಪು ಅವರು ಶ್ರೇಷ್ಠ ಸಾಹಿತಿಯಾಗಿ ಹೆಸರು ಪಡೆದಷ್ಟೆ ಮೈಸೂರು ವಿವಿಯಲ್ಲಿ ಕುಲಪತಿಗಳಾಗಿ ದಕ್ಷ ಆಡಳಿತಗಾರರಾಗಿ ಹೆಸರು ಪಡೆದಿದ್ದು, ವಿಜ್ಞಾನಿಯಾಗಿ ಹೆಸರು ಪಡೆದ ಪ್ರೊ. ಕೆ. ಭೈರಪ್ಪ ಅವರು ಮಂಗಳೂರು ವಿವಿಯ ಕುಲಪತಿಗಳಾಗಿ ಆಡಳಿತ ಹಾಗೂ ಶೈಕ್ಷಣಿಕ ಪ್ರಗತಿ ದಾಖಲಿಸಿರುವುದು ನಿಜಕ್ಕೂ ಅಭಿನಂದನೀಯ. ಅಷ್ಟಕ್ಕೂ ಅವರೊಳಗೆ ಇರುವ ಆಧ್ಯಾತ್ಮಿಕ ಚಿಂತನೆ ನಿಜಕ್ಕೂ ಅವರಿಗೆ ಉತ್ತಮ ಕೆಲಸ ಮಾಡಲು ಪ್ರೇರೇಪಿಸಿದೆ ಎಂದು ಹೇಳಿದರು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ ಕ್ರೀಡೆ ಹಾಗೂ ಸಾಂಸ್ಕøತಿಕ ರಂಗದಲ್ಲಿ ಮಂಗಳೂರು ವಿವಿಯನ್ನು ದೇಶದ ಇತರ ಪ್ರಸಿದ್ಧ ವಿವಿಗಳ ಸಾಲಿಗೆ ಕೊಂಡೊಯ್ಯುವಲ್ಲಿ ಕುಲಪತಿ ಪ್ರೊ. ಕೆ. ಭೈರಪ್ಪನವರ ಪಾತ್ರ ಮಹತ್ದಾಗಿದ್ದು ಕ್ರೀಡೆ ಹಾಗೂ ಸಾಂಸ್ಕøತಿಕ ರಂಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಪಾಲಿಗೆ ನಿಜಕ್ಕೂ ಅವರು ಅವಿಸ್ಮರಣೀಯ ಕುಲಪತಿ ಯಾಗಿದ್ದು ಇತರ ಎಲ್ಲ ಕುಲಪತಿಗಳಿಗಿಂತ ಭಿನ್ನ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.
ಮಂಗಳೂರು ವಿವಿಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಒಲಿಂಲಿಕ್ನಲ್ಲಿ ಭಾಗವಹಿಸಲು ಸ್ಥಾನ ಪಡೆಯುವಂತಹ ಅರ್ಹತೆ ಗಿಟ್ಟಿಸಿಕೊಳ್ಳುವ ಅದ್ಭುತವಾದ ಪ್ರದರ್ಶನ ತೋರಿ ನಾಡುಮೆಚ್ಚುವಂತಹ ದಾಖಲಾರ್ಹ ಸಾಧನೆಗೈದರೂ ಅವರಿಗೆ ಮುಂದಿನ ಭವಿಷ್ಯಕ್ಕೆ ಕಾಯಕಲ್ಪ ನೀಡುವಂತಹ ಕ್ರೀಡಾ ನೀತಿ ಇರಲಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಅವಕಾಶವಾಗಲು ವಿವಿಯಲ್ಲಿ ಗ್ರೇಸ್ ಮಾರ್ಕ್ ಸೇರಿದಂತೆ ನವೀನ, ಸ್ಪಷ್ಟ ಮತ್ತು ಸಮಗ್ರ ಕ್ರೀಡಾ ನೀತಿ ಜಾರಿಗೆ ತರುವ ಮೂಲಕ ಮಂಗಳೂರು ವಿವಿಯನ್ನು ಪಾಟಿಯಾಲ, ಕೇರಳದ ಪ್ರಸಿದ್ಧ ವಿವಿಗಳ ಸಾಲಿಗೆ ಸೇರಿಸಿದ ಕೀರ್ತಿ ಪ್ರೊ. ಭೈರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂಬ ವಿಶೇಷಣವೇ ನಮ್ಮ ಪಾಲಿಗೆ ತೊಡಕಾಗುತ್ತಿದೆ. ಜಿಲೆಯ ಬಹಳಷ್ಟು ಖಾಸಗಿ ಕಾಲೇಜುಗಳು ಮಂಗಳೂರು ವಿವಿಯಡಿಯಲ್ಲಿ ಬರುತ್ತಿದ್ದು ಸ್ವಾಯತ್ತ, ಡೀಮ್ಡ್ ವಿವಿಗಳು ಮೆರೆಯುತ್ತಿರುವ ಈ ದಿನಗಳಲ್ಲಿ ಮುಂದಿನ ದಿನಗಳಲ್ಲಿ ವಿವಿಗೆ ನೂತನ ಕುಲಪತಿಗಳಾಗಿ ಬರುವವರು ಭೈರಪ್ಪನವರಂತೆಯೇ ಅಭೀವೃದ್ಧಿ ಹಾಗೂ ಅರ್ಥೈಸಿಕೊಂಡು ಮುಂದೆ ಹೋಗುವ ಗುಣ ಹೊಂದಿರಲಿ, ಅಂತಹ ವ್ಯಕ್ತಿಗಳನ್ನೇ ಮಂಗಳೂರು ವಿವಿಗೆ ಕುಲಪತಿಗಳನ್ನಾಗಿ ಆರಿಸಿ ಕಳುಹಿಸುವ ಬುದ್ಧಿ ನೂತನ ರಾಜ್ಯ ಸರಕಾರಕ್ಕೆ ಕೊಡಲಿ ಎಂದು ಆಶಿಸಿದರು.
ಉದ್ಘಾಟನಾ ಭಾಷಣಗೈದ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಎನ್. ಆರ್. ಶೆಟ್ಟಿ ಮಾತನಾಡಿ ವಿವಿಯಲ್ಲಿ ಮುಂದಿನ ಹದಿನೈದ ವರ್ಷಗಳ ದೃಷ್ಟಿಯಲ್ಲಿಟ್ಟುಕೊಂಡು ಪ್ರೊ. ಭೈರಪ್ಪ ಅವರ ದಕ್ಷ ನಾಯಕತ್ವ ಹಾಗೂ ದೂರದೃಷ್ಟಿಯ ಫಲದಿಂದ ಮಂಗಳೂರು ವಿವಿಯಲ್ಲಿ ಧ್ಯೇಯೋದ್ದೇಶ 2030 ದಾಖಲುಗೊಳಿಸುವ ಮೂಲಕ ಮಂಗಳೂರು ವಿವಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ವಿವಿಯಲ್ಲಿ ಶಿಕ್ಷಣದ ಬಗೆಗಿನ ಅವರ ಕಾರ್ಯನಿಷ್ಠೆ, ಸಮರ್ಪಣಾಭಾವ ಹಾಗೂ ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಅನುಗುಣವಾಗಿ ತಂದ ಯೋಜನೆಗಳು ಯಶಸ್ವಿಯಾಗಿದೆ ಎಂದು ಹೇಳಿದರು.
ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ನ ಪ್ರೊ. ಕಟ್ಟೇರ ಸುರೇಶ್ ಅಭಿನಂದನಾ ಭಾಷಣಗೈದರು.
ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ಇದರ ಪ್ರೊ. ಕಟ್ಟೇರ ಸುರೇಶ್, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮೋಹನ್, ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಎನ್.ಆರ್ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು.ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದರು
ಮಂಗಳೂರು ವಿವಿಯ ಕುಲಪತಿ ಪ್ರೊ.ಬೈರಪ್ಪ ಹಾಗೂ ಅವರ ಧರ್ಮಪತ್ನಿ ಪ್ರೊ.ಕೆ.ಟಿ.ಸುನೀತ ಅವರಿಗೆ ಈ ಸಂದರ್ಭದಲ್ಲಿ ಮಂಗಳೂರು ವಿವಿ ವತಿಯಿಂದ ಸನ್ಮಾನಿಸಲಾಯಿತು.
ಮಂಗಳೂರು ವಿವಿಯ ಕುಲಸಚಿವ ಪ್ರೊಫೆಸರ್ ಬಿ.ಎಸ್ ನಾಗೇಂದ್ರ ಪ್ರಕಾಶ್ ಸ್ವಾಗತಿಸಿದರು. ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವ ಎಎಂ ಖಾನ್ ವಂದಿಸಿದರು.


