UN NETWORKS
ಕೊಂಡಾಣ: ಅದು ದೈವತ್ವ ತುಂಬಿದ ತುಳುನಾಡ ಮಣ್ಣಿನ ಕಡೆಯ ಜಾತ್ರಾ ಮಹೋತ್ಸವ. ಇಲ್ಲಿನ ಕಾರ್ಣಿಕದ ದೈವಗಳ ಜಾತ್ರೆ ಮುಗಿದ ಬಳಿಕ ತುಳುನಾಡಿನ ಮತ್ತೆಲ್ಲೂ ಜಾತ್ರಾ ಮಹೋತ್ಸವ ನಡೆಯುವುದೇ ಇಲ್ಲ. ಹೀಗಾಗಿಯೇ ಇತಿಹಾಸ ಪ್ರಸಿದ್ದ ದೈವಿಕ ಪುಣ್ಯ ಕ್ಷೇತ್ರವಾದ ಆ ಮಣ್ಣಿನಲ್ಲಿ ಸದ್ಯ ಜಾತ್ರಾಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಅದುವೇ ತುಳುನಾಡಿನ ಅತ್ಯಂತ ಕಾರ್ಣಿಕ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಕೊಂಡಾಣ ಶ್ರೀಪಿಲಿಚಾಮುಂಡಿ,ಬಂಟ, ಮುಂಡತ್ತಾಯ (ವೈದ್ಯನಾಥ)ದೈವಸ್ಥಾನ ಕ್ಷೇತ್ರ.
ಶ್ರೀಕ್ಷೇತ್ರ ಕೊಂಡಾಣದಲ್ಲಿ ಮೇ.22 ಮತ್ತು 23ರಂದು ವಾರ್ಷಿಕ ಜಾತ್ರೋತ್ಸವ ಅತ್ಯಂತ ಸಂಭ್ರಮ ಸಡಗರದಿಂದ ನಡೆಯುತ್ತದೆ. ಕ್ಷೇತ್ರದ ಕಾರ್ಣಿಕ ದೈವಗಳಾದ ಪಿಲಿಚಾಮುಂಡಿ, ಬಂಟ ಮತ್ತು ವೈದ್ಯನಾಥನಿಗೆ ನೇಮೋತ್ಸವಗಳು ನಡೆದು ಜಾತ್ರೋತ್ಸವಕ್ಕೆ ಅಧಿಕೃತ ತೆರೆ ಬೀಳುತ್ತದೆ. ಇದಾದ ಬಳಿಕ ತುಳುನಾಡು ಎಂದು ಕರೆಸಿಕೊಳ್ಳುವ ಉಡುಪಿ-ದ.ಕ ಜಿಲ್ಲೆಯ ಯಾವುದೇ ಭಾಗದಲ್ಲಿ ದೈವಸ್ಥಾನಗಳು ಜಾತ್ರೋತ್ಸವಗಳು ನಡೆಯುವುದಿಲ್ಲ ಎನ್ನುವುದು ವಾಡಿಕೆ. ಹೀಗಾಗಿ ತುಳುನಾಡಿನ ಮಟ್ಟಿಗೆ ಶ್ರೀಕ್ಷೇತ್ರ ಕೊಂಡಾಣದ ಬಂಡಿ ಉತ್ಸವ ಕಡೆಯ ಜಾತ್ರಾ ಸಂಭ್ರಮ ಎನ್ನುವುದು ಉಲ್ಲೇಖನಿಯ. ಈ ಮಧ್ಯೆ ತುಳುನಾಡಿನ ಕೊನೆಯ ಜಾತ್ರೋತ್ಸವವಾದ ಕಾರಣ ಈ ಕಾರ್ಣಿಕ ಕ್ಷೇತ್ರಕ್ಕೆ ಜಿಲ್ಲೆಯಷ್ಟೇ ಅಲ್ಲದೇ ಹೊರಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ದೈವದ ನೇಮೋತ್ಸವವನ್ನು ಕಣ್ತುಂಬಿಕೊಂಡು ಗಂಧ ಪ್ರಸಾದ ಸ್ವೀಕರಿಸಿ ಪುನೀತರಾಗುತ್ತಾರೆ. ತುಳು ಸಂಸ್ಕøತಿ ಮತ್ತು ಪರಂಪರೆಯ ಪ್ರಕಾರ ಜಾತ್ರೋತ್ಸವಗಳು ಸಂಪನ್ನವಾದ ಮರುದಿನವೇ ಪತ್ತನಾಜೆ ಎನ್ನುವ ಆಚರಣೆ ನಡೆಯುತ್ತದೆ. ಅದರಂತೆ ಕೊಂಡಾಣ ಜಾತ್ರೋತ್ಸವವೇ ಕಡೆಯ ಸಂಭ್ರಮವಾಗಿದ್ದು, ಆ ಬಳಿಕ ಯಾವ ದೈವಸ್ಥಾನದಲ್ಲೂ ಧ್ವಜಾರೋಹಣವಾಗಿ ಜಾತ್ರೋತ್ಸವಗಳು ನಡೆಯುವ ಪದ್ದತಿಯಿಲ್ಲ ಎನ್ನುವುದು ಉಲ್ಲೇಖನಿಯ.
ಮಲ್ಲಿಗೆಯೇ ಈ ಜಾತ್ರೆಯ ವಿಶೇಷ ಹರಕೆ!
ಶ್ರೀಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ಬಂಡಿ ಉತ್ಸವದಲ್ಲಿ ಮಲ್ಲಿಗೆ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಭಕ್ತರು ತಮ್ಮ ಸಂಕಷ್ಟದ ಸಂದರ್ಭದಲ್ಲಿ ಅಥವಾ ಇಷ್ಟಾರ್ಥ ಸಿದ್ದಿಗಾಗಿ ಮಲ್ಲಿಗೆ ಹೂವನ್ನು ದೈವಗಳಿಗೆ ಹರಕೆ ರೂಪದಲ್ಲಿ ನೀಡುವುದು ತಲಾ ತಲಾಂತರಗಳಿಂದ ನಡೆದು ಕೊಂಡು ಬಂದ ಸಂಪ್ರದಾಯ. ಅಲ್ಲದೇ ಜಾತ್ರಾ ಸಂಭ್ರಮದ ಎರಡನೇ ದಿನ ರಾಜನ್ ದೈವವಾಗಿರುವ ಬಂಟ ದೈವದ ನೇಮವು ನಡೆಯುತ್ತದೆ. ಈ ನೇಮೋತ್ಸವದ ದಿನದಂದು ರಸ್ತೆಯುದ್ದಕ್ಕೂ ರಾಶಿ ರಾಶಿ ಮಲ್ಲ್ಲಿಗೆಯನ್ನು ಮಾರಾಟ ಮಾಡಲಾಗುತ್ತದೆ. ದೈವಕ್ಕೆ ಹರಕೆಯ ರೂಪದಲ್ಲಿ ಮಲ್ಲಿಗೆಯ ಮಹಾಪೂರವೇ ಹರಿದು ಬರುತ್ತದೆ. ಚಿನ್ನ, ಬೆಳ್ಳಿ, ಕೋಳಿ ಹರಕೆಯ ರೂಪದಲ್ಲಿ ಬರುವುದರ ಜೊತೆಗೆ ರಾಶಿ ರಾಶಿ ಮಲ್ಲಿಗೆಯೂ ದೈವಕ್ಕೆ ಸಲ್ಲಿಕೆಯಾಗುವುದು ಇಲ್ಲಿನ ಮತ್ತೊಂದು ಅಚ್ಚರಿ.
ದೈವಕ್ಕೆ ಮಲ್ಲಿಗೆ ಕೊರತೆ ಆಗಲೇ ಬಾರದು!
ಈ ನಡುವೆ ಈ ಕಾರ್ಣಿಕ ಕ್ಷೇತ್ರ ಹಲವು ಅಚ್ಚರಿಗಳ ತಾಣವೂ ಹೌದು. ಅದರಲ್ಲೂ ಕಡೆಯ ದಿನ ನಡೆಯುವ ಬಂಟ ನೇಮೋತ್ಸವದ ವೇಳೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಲ್ಲದೇ ಯಾವುದೇ ದೈವ ಸಾನಿಧ್ಯದಲ್ಲಿ ಕಾಣಸಿಗದ ಶಿವಲಿಂಗ ಕೊಂಡಾಣದಲ್ಲಿ ನೋಡಬಹುದಾಗಿದ್ದು, ನೇಮದ ಸಂದರ್ಭ ದೈವವು ಶಿವಲಿಂಗದ ಪಾಣಿಪೀಠದಲ್ಲಿ ಕುಳಿತುಕೊಳ್ಳುವ ಪದ್ದತಿ ಇದೆ. ಈ ಸಂದರ್ಭ ಶಿವಲಿಂಗಕ್ಕೆ ಮಲ್ಲಿಗೆ ಹೂವಿನ ಅಭಿಷೇಕ ಅಂದರೆ ಮಲ್ಲಿಗೆ ಹೂವಿನಿಂದ ಶಿವಲಿಂಗವನ್ನು ಅಲಂಕರಿಸುತ್ತಾರೆ. ಈ ವೇಳೆ ಮಲ್ಲಿಗೆ ಸ್ವಲ್ಪ ಕಡಿಮೆಯಾದರೂ ದೈವಕ್ಕೆ ಮನವರಿಕೆಯಾಗುತ್ತದೆ ಎನ್ನುವುದು ನಂಬಿಕೆ. ಅದರಂತೆ ವರ್ಷದ ಹಿಂದೆ ನಡೆದ ಜಾತ್ರೋತ್ಸವದ ಸಂದರ್ಭದಲ್ಲಿ ಹೂ ಕಡಿಮೆಯಾದ ಕಾರಣ ದೈವ ಕಲ್ಲಿನಿಂದ ಕೆಳಗೆ ಇಳಿಯಲಿಲ್ಲ, ಬಳಿಕ ಹೂ ಹಾಕಿದ ನಂತರವೇ ಪಾಣಿ ಪೀಠದಲ್ಲಿ ದೈವವನ್ನ ಮೇಲೆತ್ತಲು ಸಾಧ್ಯವಾಯಿತು ಎನ್ನುವ ಇತಿಹಾಸವಿದೆ.
ಎಲ್ಲೂ ಆಗದ ಕೆಲಸ ಇಲ್ಲಿ ನೆರವೇರಿದ ಉದಾಹರಣಿಗಳಿವೆ!
ಈ ನಡುವೆ ಎಲ್ಲಿಯೂ ಆಗದ ಕೆಲಸ ಕೊನೆಗೆ ಇಲ್ಲಿ ಹರಕೆ ಕಟ್ಟಿಕೊಂಡರೆ ನಡೆಯುತ್ತದೆ ಎನ್ನುವ ನಂಬಿಕೆ ಇದೆ. ಮಾತು ಬಾರದ ಅದೆಷ್ಟೋ ಮಕ್ಕಳಿಗೆ ಇಲ್ಲಿಗೆ ಹರಕೆ ಹೇಳಿದ ನಂತರ ಮಾತು ಬಂದ ಘಟನೆಯೂ ನಡೆದಿದೆ. ನಂಬಲು ಅಸಾಧ್ಯವಾದ ಕೆಲಸ ಕಾರ್ಯಗಳು ಇಲ್ಲಿನ ದೈವದ ಕೈಯಿಂದ ಕೆಲವೇ ದಿನದಲ್ಲಿ ನೆರವೇರುತ್ತದೆ. ಇಲ್ಲಿನ ಮತ್ತೊಂದು ವಿಶೇಷ ಏನೆಂದರೆ ಕ್ಷೇತ್ರದ ಒಳಗೆ ಯಾವುದೇ ರೀತಿಯ ವೀಡಿಯೋ ಚಿತ್ರೀಕರಣ, ಫೋಟೋ ಚಿತ್ರೀಕರಣ ಕಡ್ದಾಯವಾಗಿ ಮಾಡುವ ಹಾಗೆ ಇಲ್ಲ. ಜಾತ್ರೆಯ ಮೊದಲ ದಿನ ದೈವದ ಭಂಡಾರ ನೇಮದ ಕೊಟ್ಯಕ್ಕೆ ಬಂದು ಮೊದಲ ದಿನದ ನೇಮ ಇದರೊಳಗೆ ನಡೆಯುತ್ತದೆ. ಹರಕೆಯ ರೂಪದಲ್ಲಿ ಚಿನ್ನದ ನಾಣ್ಯ, ಚಿನ್ನದ ವಿಮಾನ, ಚಿನ್ನದ ನಾಲಗೆ, ಚಿನ್ನದ ಅಡಿಕೆ, ಬೆಳ್ಳಿಯ ಕೋಳಿ, ಬೆಳ್ಳಿಯ ನಾಲಗೆಯನ್ನು ನೀಡಲಾಗುತ್ತದೆ. 2ನೇ ದಿನ ದೈವವು ಈ ಶಾಲೆಯಲ್ಲಿ (ನೇಮದ ಕೊಟ್ಯ ) ಸ್ವಲ್ಪ ಹೊತ್ತು ಕುಣಿದು ನಂತರ ದೈವಸ್ಥಾನದ ಅಂಗಣಕ್ಕೆ ಬಂದು ಕುಣಿಯುವ ಪದ್ದತಿ ಇದ್ದು, ಹರಕೆಯ ರೂಪದಲ್ಲಿ ಕಂಚಿಲ ಸೇವೆಯು ಪ್ರಾತಃಕಾಲದಲ್ಲಿ ನಡೆಯುತ್ತದೆ. ಎರಡನೇಯ ದಿನದಂದ ರಾತ್ರಿ ಪಿಲಿಚಾಮುಂಡಿ ದೈವದ ಬಂಡಿ ಉತ್ಸವವು ಕ್ಷೇತ್ರದಲ್ಲಿ ನಡೆಯುತ್ತದೆ.
ಇಂದಿಗೂ ಈ ಕ್ಷೇತ್ರದಲ್ಲಿ ಹುಲಿ ಸಂಚರಿಸುತ್ತದಂತೆ!
ಕುಂಬಳೆಯ ಬೆಡಿ, ಪೊಳಲಿಯ ಚೆಂಡು ಹಾಗು ಕೊಂಡಾಣದ ಬಂಡಿ ಇತಿಹಾಸ ಪ್ರಸಿದ್ದವಾದ ಜಾತ್ರೆಯಾಗಿದ್ದು, ಪಿಲಿ ಚಾಮುಂಡಿ ದೈವದ ವಾಹನವಾಗಿರುವ ಹುಲಿಯ ಸಂಚಾರವಿದ್ದು, ಹುಲಿ ನೋಡಿದವರು ಈಗಲೂ ಅನೇಕರಿದ್ದಾರೆ. ಕೇವಲ ಹಿಂದೂ ಧರ್ಮದ ಜನರು ಮಾತ್ರವಲ್ಲದೇ ಮುಸ್ಲಿಂ ಸಮುದಾಯದವರೂ ಹುಲಿಯನ್ನು ನೋಡಿದ್ದಾರೆ ಎನ್ನುವ ಮಾತು ಭಕ್ತರ ಬಾಯಿಯಿಂದ ಕೇಳಿ ಬರುತ್ತಿದೆ. ಹಾಗಾಗಿ ಎಲ್ಲಾ ಧರ್ಮದವರು ಈ ಕ್ಷೇತ್ರಕ್ಕೆ ಬರುವುದು ಸಾಮಾನ್ಯವಾಗಿದೆ. ಕ್ಷೇತ್ರದ ಪಕ್ಕದಲ್ಲೇ ಸಣ್ಣ ಕೆರೆಯಿದ್ದು, ಇದು ಹುಲಿ ನೀರು ಕುಡಿಯುವ ಕೆರೆಯಾಗಿದೆ ಎನ್ನುವುದು ನಂಬಿಕೆ. ಹೀಗಾಗಿ ಈ ಕೆರೆಗೆ ಯಾರೂ ಇಳಿಯುವ ಹಾಗೆ ಇಲ್ಲ. ಶ್ರೀಕ್ಷೇತ್ರ ಕೊಂಡಾಣಕ್ಕೂ ಸೋಮೇಶ್ವರ ಸೋಮನಾಥ ದೇವರು ಹಾಗು ತಲಪಾಡಿ ಶ್ರೀದುರ್ಗಾಪರಮೇಶ್ವರೀ ದೇವರಿಗೂ ಅವಿನಾಭಾವ ನಂಟಿದೆ. ಉದ್ಯಾವರ ಮಾಡದ ಅರಸು ದೈವಗಳಿಗೂ ಈ ಕ್ಷೇತ್ರಕ್ಕೂ ಸಂಬಂಧವಿದೆ ಎನ್ನುವುದು ಇತಿಹಾಸ ಉಲ್ಲೇಖಿಸಿದ ವಿಚಾರ. ಶ್ರೀಕ್ಷೇತ್ರದ ಜಾತ್ರೆಯನ್ನು ಅಷ್ಟೊಂದು ದೊಡ್ಡ ರೀತಿಯಲ್ಲೀ ಮಾಡುವ ಪದ್ದತಿ ಇಲ್ಲ ಎಂಬುದು ಹಿರಿಯರ ನಂಬಿಕೆ. ಜನರ ಮಾತಿನ ಮೂಲಕ ಪ್ರಚಾರವಾಗಿ ಇಲ್ಲಿನ ಜಾತ್ರೆಗೆ ಬರಬೇಕು ಎಂಬುದು ನಂಬಿಕೆ.
ಶ್ರೀಕ್ಷೇತ್ರವೂ ಮಂಗಳೂರಿನಿಂದ ಸುಮಾರು 16ಕಿ.ಮೀ ದೂರದಲ್ಲಿದೆ. ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಸಾಗಿ ತೊಕ್ಕೊಟ್ಟು, ಬೀರಿ ಜಂಕ್ಷನ್ನಿಂದ ಎಡಕ್ಕೆ ತಿರುಗಿ ನಂತರ 3 ಕಿ.ಮೀ ದೂರ ಸಾಗಿದರೆ ಸಿಗುವ ಕ್ಷೇತ್ರವೇ ಶ್ರೀಕ್ಷೇತ್ರ ಕೊಂಡಾಣ.


