ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೊಣಾಜೆ : ಗರ್ಭಿಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಪತಿಯ ವಿರುದ್ಧ ಆಕೆ ಹೆತ್ತವರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎ.೯ ರಂದು ಅಂಬ್ಲಮೊಗರು ಗ್ರಾಮದ ಬಾರೆದಡ್ಕದ ಬಾಡಿಗೆ ಮನೆಯಲ್ಲಿ ತಮಿಳುನಾಡು ಮೂಲದ ಪ್ರಿಯಾ (೨೧) ಒಂಭತ್ತು ತಿಂಗಳ ಗರ್ಭಿಣಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈಕೆ ಆತ್ಮಹತ್ಯೆಮಾಡಿಕೊಂಡಿರುವ ಸಮೀಪದಲ್ಲೇ ಇನ್ನೊಂದು ನೇಣಿಗೆ ಯತ್ನಿಸಿದ ಹಗ್ಗವೊಂದು ಕಂಡುಬಂದಿತ್ತು. ಅದರಲ್ಲಿ ಪ್ರಿಯಾ ಪತಿ ವಿಘ್ನೇಶ್(೨೫) ಎಂಬಾತ ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿ ಬಳಿಕ ಮನೆಬಿಟ್ಟು ಪರಾರಿಯಾಗಿದ್ದನೆಂದು ಸಂಶಯಿಸಲಾಗಿತ್ತು.
ತಮಿಳುನಾಡು ಪೆರಿಯಲೂರಿನ ಅರಂದಾಗಿ ತಾಲೂಕಿನ ಪುದುಕೋಟೆ ನಿವಾಸಿಯಾಗಿರುವ ದಂಪತಿ ಪ್ರೀತಿಸಿ ವಿವಾಹವಾಗಿದ್ದರು. ಎರಡು ತಿಂಗಳ ಹಿಂದೆ ಮಂಗಳೂರಿಗೆ ಬಂದಿದ್ದರು. ಸೆಲೂನ್ ಸಿಬ್ಬಂದಿ ಗುರುತಿನ ಮೇರೆಗೆ ಬಾರೆದಡ್ಕ ನಿವಾಸಿ ಬಾಡಿಗೆ ಮನೆಯನ್ನು ದಂಪತಿಗೆ ನೀಡಿದ್ದರು. ಕೂಲಿ ಕೆಲಸ ನಡೆಸಿ ವಿಘ್ನೇಶ್ ಕುಟುಂಬ ನಿರ್ವಹಿಸುತ್ತಿದ್ದ. ಮಗಳ ಸಾವಿನ ಸುದ್ಧಿ ತಿಳಿದು ತಂದೆ ಮಡ ಅಳಗನ್ ಕೊಣಾಜೆಗೆ ಬಂದಿದ್ದು, ಪತಿ ವಿಘ್ನೇಶ್ ವಿರುದ್ದ ಸಂಶಯ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ. ವಿಘ್ನೇಶ್ ನನ್ನು ಕೂಡಲೇ ಪತ್ತೆ ಹಚ್ಚಬೇಕೆಂದು ಒತ್ತಾಯಿಸಿ ಡಿವೈಎಫ್ ಐ ಅಂಬ್ಲಮೊಗರು ಘಟಕ ಒತ್ತಾಯ ಮಾಡಿದೆ.





