ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಒಂಬತ್ತು ತಿಂಗಳ ಗರ್ಭಿಣಿ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಬಾರೆದಡ್ಕ ಎಂಬಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ತಮಿಳುನಾಡು ಮೂಲದ ಪ್ರಿಯಾ ಆತ್ಮಹತ್ಯೆಗೈದ ನತದೃಷ್ಟೆ. ಅಂಬ್ಲಮೊಗರು ಗ್ರಾಮದ ಬಾರೆದಡ್ಕ ಬಳಿ ಕಳೆದ ಎರಡು ತಿಂಗಳಿನಿಂದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ಕೂಲಿ ಕಾರ್ಮಿಕ ವಿಘ್ನೇಶ್ ಎಂಬಾತನ ಪತ್ನಿ ಪ್ರಿಯಾ ಆತ್ಮಹತ್ಯೆಗೈದಿದ್ದು ತುಂಬು ಗರ್ಭಿಣಿಯಾಗಿರುವ ಆಕೆ ಇನ್ನು ಕೇವಲ 10ದಿವಸದಲ್ಲಿ ಹೆರುವ ಸಿದ್ಧತೆಯಲ್ಲಿದ್ದಳು.
ಮಂಗಳವಾರ ರಾತ್ರಿ ಪ್ರಿಯಾ ತಾನಿರುವ ಬಾಡಿಗೆ ಮನೆಯಲ್ಲಿ ಪಕ್ಕಾಸಿಗೆ ಸೀರೆಯನ್ನು ಬಳಿಸಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದು , ಘಟನೆ ನಡೆದ ಸಂಧರ್ಭ ಗಂಡ ವಿಘ್ನೇಶನೂ ಮನೆಯಲ್ಲಿದ್ದು ಪತ್ನಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದನೇ ಎಂದು ಶಂಕಿಸಲಾಗಿದೆ.
ಪ್ರಿಯಾ ಮತ್ತು ವಿಘ್ನೇಶ್ ತಮಿಳುನಾಡಿನ ಪೆರಿಯಲೂರಿನ ಅರಂದಾಗಿ ತಾಲೂಕು ಪುದುಕೋಟೆ ಎಂಬಲ್ಲಿನ ನಿವಾಸಿಗಳು. ಪ್ರೇಮ ವಿವಾಹವಾಗಿದ್ದ ಅವರು 2ತಿಂಗಳ ಹಿಂದೆಯಷ್ಟೆ ಮಂಗಳೂರಿಗೆ ಬಂದಿದ್ದು ಅಂಬ್ಲಮೊಗರುವಿನ ಸೆಲೂನ್ ಮಾಲಕನೊಬ್ಬನ ಶಿಫಾರಸ್ಸಿನ ಮೇರೆಗೆ ಬಾರೆದಡ್ಕದ ಪಂಚಾಯಿತಿಯ ಮಾಜಿ ಸದಸ್ಯ ಕರುಣಾಕರ ಪೂಜಾರಿ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಬಾಡಿಗೆ ಮನೆಯಲ್ಲಿ ನೆಲೆಸಿ ಎರಡು ತಿಂಗಳಾದರೂ ವಿಘ್ನೇಶ್ ಮನೆ ಬಾಡಿಗೆಯನ್ನು ಪಾವತಿಸರಿರಲಿಲ್ಲ. ಪ್ರಿಯಾ ಆತ್ಮಹತ್ಯೆಗೈದ ಕೊಠಡಿಯ ಇನ್ನೊಂದು ಪಾಶ್ರ್ವದಲ್ಲಿ ಸೀರೆಯೊಂದು ನೇತಾಡುತ್ತಿದ್ದು ವಿಘ್ನೇಶ್ ಜೊತೆಯಲ್ಲೇ ಸಾಯೋಣವೆಂದು ನಾಟಕವಾಡಿ ಪ್ರಿಯಾಳನ್ನು ಏಮಾರಿಸಿರಬೇಕು ಎಂಬ ಸಂಶಯ ಸ್ಥಳೀಯರದ್ದು.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ವಿಘ್ನೇಶ್ ಊರು ಬಿಟ್ಟು ಪಲಾಯನಗೈದಿದ್ದಾನೆ. ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.












