UN NETWORKS
ತೊಕ್ಕೊಟ್ಟು: ರಾಜ್ಯದಲ್ಲಿ ಶೇಖರಣೆಯಾದ ಸಂಪತ್ತನ್ನು ಕೆಲವರು ಮಾತ್ರ ಬಳಸಿಕೊಳ್ಳುವುದು ಬೇಡ, ಅದು ಎಲ್ಲ ವರ್ಗದ ಎಲ್ಲರಿಗೂ ಸಂದಬೇಕು ಎಂಬ ನೆಲೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯಸರಕಾರ ಮೊತ್ತ ಮೊದಲ ಬಾರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಹಸಿವು ಮುಕ್ತ ಕರ್ನಾಟಕವೇ ನಮ್ಮ ಗುರಿ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.


ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಹೋಬಳಿ ಮಟ್ಟದಲ್ಲಿ ರಾಜ್ಯದ ಪ್ರಥಮ, ಉಳ್ಳಾಲ ಪುರಸಭೆ ವ್ಯಾಪ್ತಿಯ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ‘ಇಂದಿರಾ ಕ್ಯಾಂಟಿನ್’ ನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಡಿಮೆ ವೇತನಕ್ಕೆ ದುಡಿಯುವವರ ಹೊಟ್ಟೆ ತುಂಬಬೇಕು. ಗುಣಮಟ್ಟದ ಕಟ್ಟಡ ಹಾಗೂ ಆಹಾರದಲ್ಲಿ ಗುಣಮಟ್ಟ ಕಾಪಾಡಲಾಗಿದೆ. ಈ ಭಾಗದಲ್ಲಿ ಕುಚ್ಚಲ ಅಕ್ಕಿ, ಪಲ್ಯ, ಉಪ್ಪಿನ ಕಾಯಿ ಜೊತೆ ಅನ್ನಸಾಂಬಾರು ಒದಗಿಸಲಿದ್ದಾರೆ. ಇಮೋಫೇಲಿಯಾಕ್ಕೆ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಉಚಿತ ಹಾಗೂ ಎಪಿಎಲ್ ನವರಿಗೆ ಎಪ್ಪತ್ತು ಶೇ. ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಅಪಘಾತಕ್ಕೀಡಾದವರಿಗೆ ಹರೀಶ್ ಸಾಂತ್ವನ ಯೋಜನೆಯಡಿಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಎರಡು ದಿನಗಳ ಚಿಕಿತ್ಸೆಗಾಗಿ ಇಪ್ಪತ್ತೈದು ಸಾವಿರ ರೂ. ತಕ್ಷಣ ಪರಿಹಾರ ರೂಪದಲ್ಲಿ ಕೊಡುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ನುಡಿದರು.
ಐನೂರು ರೂ. ವಿದ್ಯುತ್ ಬಿಲ್ ಗೆ ಎಪಿಎಲ್ ಪಡಿತರ ಚೀಟಿ ಅನ್ವಯ ಎಂಬ ಕಾನೂನನ್ನು ನಿಲ್ಲಿಸಲಾಗಿದೆ. ಒಂದು ಲಕ್ಷ ಇಪ್ಪತ್ತು ಸಾವಿರ ರೂ. ಆಧಾರದಲ್ಲಿ ಪಡಿತರ ಚೀಟಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ದಾಖಲಾತಿಗಿಂತ ಆಧಾರ್ ಕಾರ್ಡ್ ಹೊಂದಿದ್ದರಿಗೆ ರಸ್ತೆ ಬದಿಯಲ್ಲಿದ್ದರೂ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಕ್ಪ್ ಜಿಲ್ಲಾಧ್ಯಕ್ಷ ಯು.ಕೆ . ಮೋನು, ಅಲ್ಪಸಂಖ್ಯಾತ ನಿಗಮ ಜಿಲ್ಲಾಧ್ಯಕ್ಷ ಎನ್. ಎಸ್. ಕರೀಂ, ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ನಗರ ಸಭೆಯ ಅಧ್ಯಕ್ಷ ಹುಸೇನ್ ಕುಂಞ ಮೋನು, ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೇನ್ ಶಾಂತಿ ಡಿಸೋಜ, ಸದಸ್ಯರಾದ ಫಾರೂಕ್ ಉಳ್ಳಾಲ್, ಸರಿತಾ ಜೀವನ್ ತೊಕ್ಕೊಟ್ಟು, ಶಶಿಕಲಾ ಶೆಟ್ಟಿ,ಮೊಹಮ್ಮದ್ ಮುಕ್ಕಚ್ಚೇರಿ, ಬಾಜಿಲ್ ಡಿಸೋಜ, ಪೊಡಿಮೋನು, ಉಸ್ಮಾನ್ ಕಲ್ಲಾಪು, ಸುಂದರ ಉಳಿಯ, ಸುಕುಮಾರ್, ರಝಿಯಾ ಇಬ್ರಾಹಿಂ, ಭಾರತಿ, ರಾಜ್ಯ ಆಹಾರ ನಿಗಮದ ಸದಸ್ಯ ಟಿ.ಎಸ್. ಅಬ್ದುಲ್ಲಾ, ಕೆಎಸ್ಆರ್ ಟಿಸಿ ನಿಮಗದ ಸದಸ್ಯ ರಮೇಶ್ ಶೆಟ್ಟಿ ಬೋಳಿಯಾರು, ತಾಲೂಕು ಪಂಚಾಯಿತಿ ಸದಸ್ಯರಾದ ಸಿದ್ದಿಕ್ ತಲಪಾಡಿ, ಜಬ್ಬಾರ್ ಬೋಳಿಯಾರು, ವಿಲ್ಮಾ ಡಿಸೋಜ, ಪದ್ಮಾವತಿ, ರಾಜ್ಯ ಚುನಾವಣೆ ಪ್ರಚಾರ ಸಮಿತಿ ಸದಸ್ಯ ಈಶ್ವರ ಉಳ್ಳಾಲ್, ನಗರಸಭೆಯ ಪೌರಾಯುಕ್ತೆ ವಾಣಿ ವಿ. ಆಳ್ವ, ಮಾಜಿ ಅಧ್ಯಕ್ಷೆ ಗಿರಿಜಾ ಎಂ. ಬಾಯಿ, ಹಮ್ಮಬ್ಬ, ರವಿ, ಖಾದರ್, ಬಶೀರ್, ರಿಚರ್ಡ್, ಇಸ್ಮಾಯಿಲ್, ಕಿಶೋರ್ ಹಾಗೂ ಹಾಗೂ ಗುತ್ತಿಗೆದಾರ ಪ್ರಕಾಶ್ ಉಪಸ್ಥಿತರಿದ್ದರು.
ಉಳ್ಳಾಲ ನಗರಸಭೆಯ ಸದಸ್ಯ ದಿನೇಶ್ ರೈ ಉಳ್ಳಾಲಗುತ್ತು ಸ್ವಾಗತಿಸಿದರು. ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

ಹಸಿವು ಗೊತ್ತಿದ್ದವರಿಗೆ ಮಾತ್ರ ಅನ್ನದ ಬೆಲೆ ಗೊತ್ತು. ಬಹಳಷ್ಟು ಸಂಖ್ಯೆಯ ಶ್ರಮಿಕರು ಕಾರ್ಮಿಕರ ಹಸಿವು ನೀಗಿಸುವ ಪ್ರಯತ್ನವನ್ನು ಇಂದಿರಾ ಕ್ಯಾಂಟನ್ ಮೂಲಕ ನೀಗಿಸಲಾಗಿದೆ. ಈ ದೇಶದ ಬಡವರು ಈ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡುವವರಿಗೆ ಪಡಿತರ ಚೀಟಿ ವಿತರಣೆ ಇಂದಿರಾಗಾಂಧಿ ಕನಸು. ಹಾಗಾಗಿ ಅವರ ಹೆಸರಿನಲ್ಲಿ ಕ್ಯಾಂಟಿನ್ ತೆರೆಯಲಾಗಿದೆ.
ಯು.ಟಿ. ಖಾದರ್
ಆಹಾರ ಸಚಿವರು


