UN NETWORKS
ಕೊಣಾಜೆ:ಜಾತಿ ಧರ್ಮಗಳ ನಡುವೆ ಹೊಡೆದಾಟ ಕೊಲೆಯಂತಹ ಕೃತ್ಯಗಳು ಒಂದಡೆಯಾದರೆ. ಇನ್ನೊಂದೆಡೆ ಸಾಮರಸ್ಯ ಸ್ಥಾಪಿಸುವಂತಹ ಕಾರ್ಯಗಳು ನಡೆಯುತ್ತಾ ಇರುತ್ತದೆ. ಇಲ್ಲೊಂದು ಪ್ರದೇಶದಲ್ಲಿ ಶಬರಿಮಲೆ ಯಾತ್ರೆಗೆ ತೆರಳುವ ಮುನ್ನ ಮಸೀದಿಗೆ ಸೌಹಾರ್ಧಯುತ ಭೇಟಿಯನ್ನು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುವ ಕಾರ್ಯ ನಡೆಸುತ್ತಾ ಬಂದಿದೆ.
ಕೊಣಾಜೆ ಸಮೀಪದ ಶಾರದಾನಗರದ ಸಪ್ತಸ್ವರ ಕಲಾತಂಡದ ಅಯ್ಯಪ್ಪ ವೃತಧಾರಿಗಳು ಸಾಮರಸ್ಯಕ್ಕಾಗಿ ಮಸೀದಿಗೆ ಸೌಹಾರ್ದ ಭೇಟಿಯನ್ನು ನಡೆಸಿಕೊಂಡು ಬರುವ ಯಾತ್ರಾರ್ಥಿಗಳಾಗಿದ್ದು, ಕಳೆದ ಹಲವು ವರ್ಷಗಳಿಂದ ಕೋಡಿಜಾಲ್ನ ರಿಫಾಯಿಯ ಜುಮಾ ಮಸೀದಿಗೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿ ಸಿಹಿ ಹಂಚುವ ಕಾರ್ಯವನ್ನು ಮಾಡುತ್ತಿದ್ದಾರೆ.

ಈ ವರ್ಷವೂ ಮಸೀದಿಗೆ ಬುಧವಾರ ಭೇಟಿ ನೀಡಿದ ಭಕ್ತಾಧಿಗಳ ತಂಡ ಮಸೀದಿಯ ಮದರಸದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಗುರುಸ್ವಾಮಿ ರಾಮಚಂದ್ರ ಗಟ್ಟಿ ಮೇಲಿನತೋಟ, ಚಿತ್ತರಂಜನ್, ಅನೂಪ್, ಶರತ್ ನೇತೃತ್ವದ ಅಯ್ಯಪ್ಪ ಮಾಲಾಧಾರಿಗಳನ್ನು ಮಸೀದಿಯ ಖತೀಬರಾದ ಅಬೂಬಕ್ಕಾರ್ ಸಖಾಫಿ, ಪ್ರ. ಕಾರ್ಯದರ್ಶಿ ಅಬೂಬಕ್ಕಾರ್ ಕೋಡಿಜಾಲ್, ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್ ಬರಮಾಡಿಕೊಂಡರು.



