UN NETWORKS
ಮುಡಿಪು : 24 ಗಂಟೆಗಳೊಳಗೆ ಸಂಸದರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯದೇ ಇದ್ದಲ್ಲಿ, ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಕುರ್ನಾಡು ತಾಲೂಕು ಪಂಚಾಯತ್ ಸದಸ್ಯ ಹಾಗೂ ಕುರ್ನಾಡು ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಪಾದಲ್ಪಾಡಿ ಎಚ್ಚರಿಸಿದ್ದಾರೆ.
ಅವರು ಬೈಕ್ ರ್ಯಾಲಿ ವೇಳೆ ಪೊಲೀಸರು ಕಾರ್ಯಕರ್ತರನ್ನು ಕೂಡಿಹಾಕಿರುವುದನ್ನು ಪ್ರಶ್ನಿಸಿದ ಸಂಸದ ನಳಿನ್ ಕಟೀಲ್ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಬಿಜೆಪಿ ಕುರ್ನಾಡು ಶಕ್ತಿ ಕೇಂದ್ರದ ವತಿಯಿಂದ ಮುಡಿಪು ಜಂಕ್ಷನ್ನಿನಲ್ಲಿ ಶುಕ್ರವಾರ ತಡರಾತ್ರಿ ವೇಳೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ತುರ್ತು ಪರಿಸ್ಥಿತಿಯ ಕಾಲಕ್ಕಿಂತಲೂ ಕಡೆಯದಾಗಿ ರಾಜ್ಯದಲ್ಲಿ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಜನತೆಗೆ ನಿದ್ರೆಯಿಲ್ಲದ ರಾತ್ರಿಗಳು ನಿರ್ಮಾಣವಾಗುತ್ತಿದೆ. ಬಿಹಾರದಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದ್ದು, ಅಲ್ಲಲ್ಲಿ ನಿರಂತರ ಹತ್ಯೆಗಳು ನಡೆಯುತ್ತಲೇ ಇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಬಿಡದ ರಾಜ್ಯ ಸರಕಾರದ ಧೋರಣೆಯೇ ಜನವಿರೋಧಿಯಾಗಿದೆ. ಕಾರ್ಯಕರ್ತರ ಪರ ಮಾತನಾಡಿದ ಸಂಸದರ ವಿರುದ್ಧವೇ ಪ್ರಕರಣ ದಾಖಲಿಸಿರುವ ರಾಜ್ಯ ಸರಕಾರದ ಉಸ್ತುವಾರಿ ಸಚಿವರು ಹಾಗೂ ಆಹಾರ ಸಚಿವರು ಕೂಡಲೇ ರಾಜೀನಾಮೆ ನೀಡಬೇಕಿದೆ. ಪ್ರಕರಣ ಹಿಂಪಡೆಯದೇ ಇದ್ದಲ್ಲಿ ನಾಳೆ ಸಂಜೆಯೊಳಗೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಕುರ್ನಾಡು ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಹಿತ್ ವಿ ಗಟ್ಟಿ ಮಾತನಾಡಿ ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಬೈಕ್ ರ್ಯಾಲಿಯನ್ನು ತಡೆದು ಅಶಾಂತಿಯನ್ನು ರಾಜ್ಯ ಸರಕಾರವೇ ನಿರ್ಮಿಸಿದೆ. ರಾಜ್ಯದ ಮಹಿಳಾ ಕಾರ್ಯಕರ್ತರು, ಮಕ್ಕಳು ಊಟ ಮಾಡುವ ಸಂದರ್ಭದಲ್ಲಿ ಸಭಾಂಗಣದ ಬಾಗಿಲು ಹಾಕಿ ಅಕ್ರಮವಾಗಿ, ಹಿಂಸಾತ್ಮಕವಾಗಿ ಕೂಡಿ ಹಾಕಿದ ಕದ್ರಿ ಠಾಣೆಯ ಠಾಣಾಧಿಕಾರಿ ಮಾರುತಿ ನಾಯಕ್ ಅವರನ್ನು ಪ್ರಶ್ನಿಸಿದ ಸಂಸದರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಸರಕಾರದ ನೀತಿಯನ್ನು ತೋರಿಸುತ್ತಿದೆ. ಅಂಗಾಂಗ ದಾನ ಮಾಡಲು ಹೊರಟಿದ್ದ ಶರತ್ ಮಡಿವಾಳ ಸಾವನ್ನೇ ಗುಪ್ತವಾಗಿಟ್ಟ ಸರಕಾರ , ಅವರಿಗಿದ್ದ ಆಸೆಯನ್ನೇ ನಿರ್ಲಕ್ಷಿಸಿ ಲಜ್ಜೆಗೆಟ್ಟ ಸರಕಾರ ಅನಿಸಿಕೊಂಡಿದೆ ಎಂದರು.
ಯುವ ಉದ್ಯಮಿ ಜಗದೀಶ್ ಆಳ್ವ ಕುವೆತ್ತಬೈಲು ಮಾತನಾಡಿ ಎಸ್ಡಿಪಿಐ ಮತ್ತು ಬಜರಂಗದಳದ ಕಾರ್ಯಕರ್ತರೇ ಹಲವರು ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿರುತ್ತಾರೆ. ಸಜಿಪ ಮೂಡದ ಜಿ.ಪಂ ಸದಸ್ಯೆ ಆಯ್ಕೆಗೊಂಡಾಗ ಬಜರಂಗದಳದ ಕಾರ್ಯಕರ್ತರೇ ಕಾಂಗ್ರೆಸ್ ಬಾವುಟ ಹಾರಿಸಿದ್ದರು. ಅಂತಹವರನ್ನೇ ಬಳಸಿಕೊಂಡಿರುವ ಕಾಂಗ್ರೆಸ್ ಸರಕಾರ ಅಮಾಯಕರನ್ನು ಹತ್ಯೆ ನಡೆಸಿ, ಹಿಂದು-ಮುಸ್ಲಿಂ ಇಬ್ಭಾಗವನ್ನು ಮಾಡುತ್ತಿದೆ. ಜಲೀಲ್ ಹತ್ಯೆಯೂ ಕಾಂಗ್ರೆಸ್ ಒಳಜಗಳದಿಂದಲೇ ಆಗಿದೆ. ಉಸ್ತುವಾರಿ ಸಚಿವರು ಎಲ್ಲಿಯೂ ಜಲೀಲ್ ಹತ್ಯೆಯನ್ನು ಪ್ರಸ್ತಾಪಿಸಿರುವುದೇ ಸಾಕ್ಷಿಯಾಗಿದೆ ಎಂದರು.
ಗೋಪಾಲ್ ಇರಾ ಮಾತನಾಡಿ ಸಂಸದರು ಕಾರ್ಯಕರ್ತರ ಪರ ಮಾತನಾಡಿ ಸರಕಾರದ ಇಬ್ಬಗೆ ನೀತಿಯನ್ನು ಪ್ರಶ್ನಿಸಿದ್ದಾರೆ. ಇದನ್ನೇ ದೊಡ್ಡ ಅಪರಾಧವೆಂದು ಬಿಂಬಿಸಿ ರಾಜ್ಯ ಸರಕಾರ ಸಂಸದರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ. ಇಂತಹ ಲಜ್ಜೆಗೆಟ್ಟ ಸರಕಾರದ ಅವಶ್ಯಕತೆಯಿಲ್ಲ, ಜಿಲ್ಲೆಯ ಉಸ್ತುವಾರಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಸ್ಗರ್ ಮುಡಿಪು, ರೈತಮೋರ್ಚಾ ಮಂಗಳೂರು ಮಂಡಲದ ಪ್ರೇಮಾನಂದ ನೆತ್ತಿಲಪದವು, ಯುವಮೋರ್ಚಾ ಉಪಾಧ್ಯಕ್ಷ ನವೀನ್ ಶೆಟ್ಟಿ ಕೊಡಕ್ಕಲ್, ಉದಯಶಂಕರ ಶೆಟ್ಟಿ, ಪಜೀರು ಗ್ರಾಮಸಮಿತಿ ಅಧ್ಯಕ್ಷ ಜಯಂತ್ ಪಾದಲ್ಪಾಡಿ, ಕುರ್ನಾಡು ಗ್ರಾಪಂ ಉಪಾಧ್ಯಕ್ಷ ನಿತಿನ್ ಗಟ್ಟಿ, ವಿಕಾಸ್ ಬೆಳ್ಮ, ರಾಮಚಂದ್ರ ಗಟ್ಟಿ, ಹರಿಪ್ರಸಾದ್, ಕೀರ್ತಿ ಗಟ್ಟಿ, ಯಶವಂತ್, ದಿವ್ಯರಾಜ್, ಸೂರಜ್, ಚಂದ್ರಶೇಖರ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ಜಯರಾಮ ಶೆಟ್ಟಿ ಕಂಬ್ಲಪದವು, ರಂಜಿತ್ ಗಟ್ಟಿ ಧರ್ಮಕ್ಕಿ, ಗೋಪಾಲ್ ಇರಾ, ರವಿ ರೈ, ಭಾಸ್ಕರ್ ಕೋಟ್ಯಾನ್, ಸಿದ್ದೀಖ್ ಕೆ.ಹೆಚ್ ಮೊದಲಾದವರು ಉಪಸ್ಥಿತರಿದ್ದರು.













