UN NETWORKS
ಕೊಣಾಜೆ: ಜಿಲ್ಲೆಯ ಸಚಿವರುಗಳು ಕೆಎಫ್ಡಿ , ಪಿಎಫ್ಐ ಜತೆಗೆ ಒಳ ಒಪ್ಪಂದ ಮಾಡಿಕೊಂಡು ಹಿಂದುಗಳ ಹಾಗೂ ಪಕ್ಷದ ಕಾರ್ಯಕರ್ತರ ಹತ್ಯೆ ನಡೆಸುತ್ತಾ ಬಂದಿದ್ದು, ಇಲ್ಲವಾದಲ್ಲಿ ಅಂತಹ ಸಂಘಟನೆಗಳನ್ನು ನಿಷೇಧಿಸಬೇಕಿತ್ತು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ ಹೇಳಿದ್ದಾರೆ. .
ಅವರು ಕೊಣಾಜೆ ಗ್ರಾಮ ಪಂಚಾಯಿತಿ ಎದುರುಗಡೆ ಕೊಣಾಜೆ ವಲಯದ ಬಿಜೆಪಿ ಯುವಮೋರ್ಚಾ ವತಿಯಿಂದ ಕೆಎಫ್ ಡಿ , ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನೇ ನಿಲ್ಲಿಸಲು ರಾಜ್ಯ ಸರಕಾರ ಮುಂದಾಗಿದೆ. ಮೂರು ಹಕ್ಕೊತ್ತಾಯಗಳನ್ನು ಮುಂದಿಟ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೆಎಫ್ ಡಿ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸಬೇಕು, ಹಿಂದುಗಳ ಹತ್ಯೆ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು, ನಾಲ್ಕೂವರೆ ವರ್ಷದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡದ ಸರಕಾರ ಇಲ್ಲಿನ ಉಸ್ತುವಾರಿ ಸಚಿವರನ್ನು ರಾಜೀನಾಮೆ ಕೊಡಿಸಬೇಕಿದೆ. ಜಮ್ಮು ಕಾಶ್ಮೀರದಲ್ಲಿರುವ ಶಾಂತಿ ಜಿಲ್ಲೆಯಲ್ಲಿ ಇಲ್ಲದಂತಾಗಿದೆ. ಜೈಲಿನೊಳಗಡೆ ಪೊಲೀಸರ ಮೇಲೆ ಹಲ್ಲೆಯಾಗುತ್ತಿದೆ. ದೇರಳಕಟ್ಟೆ ಭಾಗದಲ್ಲಿರುವ ಮೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಹೊರ ನಡೆದುಕೊಂಡು ಹೋಗಲು ಭಯಭೀತ ವಾತಾವರಣ ನಿರ್ಮಾಣವಾಗಿದೆ ಎಂದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ರಾಜ್ಯದಾದ್ಯಂತ 24 ಹಿಂದುಗಳ, ಹಾಗು ಪಕ್ಷದ ಕಾರ್ಯಕರ್ತರ ಕೊಲೆ ಆಗಿದೆ. ಅದರಲ್ಲಿ ಜಿಲ್ಲೆಯಲ್ಲಿ ಅಧಿಕ ಕೊಲೆಗಳಾಗಿವೆ. ಆದರೂ ಇಲ್ಲಿನ ಉಸ್ತುವಾರಿ ಸಚಿವರನ್ನು ಗೃಹ ಮಂತ್ರಿಗಳನ್ನಾಗಿ ಮಾಡಲು ಹೊರಟಿರುವುದು ಸರಕಾರದ ಒಂದು ಸಮುದಾಯದ ತುಷ್ಟೀಕರಣ ನೀತಿಯನ್ನು ತೋರಿಸುತ್ತದೆ. ಇಂತಹ ಹಿಂದುಗಳಿಗೆ ರಕ್ಷಣೆಯಿಲ್ಲದ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುವ ಸಲುವಾಗಿ ಪ್ರಜಾತಾಂತ್ರಿಕ ವ್ಯವಸ್ಥೆಯ ಅತ್ಯಂತ ಕೆಳ ವಿಭಾಗವಾದ ಪಂಚಾಯಿತಿ ಎದುರುಗಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಆರಂಭವಾದ ಮೊದಲ ಪ್ರಕರಣವೇ ಮುಖ್ಯಮಂತ್ರಿ ವಿರುದ್ಧ ದಾಖಲಾಗಿತ್ತು. ರೂ. 60 ಲಕ್ಷ ಬೆಲೆಬಾಳುವ ವಾಚ್ ಕುರಿತ ಪ್ರಕರಣ ದಾಖಲಾದರೂ ಈವರೆಗೆ ತನಿಖೆ ನಡೆಸದ ಭ್ರಷ್ಟಾಚಾರ ನಿಗ್ರಹ ದಳ ರಾಜಕೀಯ ಪ್ರೇರಿತವಾಗಿದೆ.
ಇದನ್ನು ಉಪಯೋಗಿಸಿಕೊಂಡು ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಚ್ಚಿ ಹೋದ ಪ್ರಕರಣಗಳಿಗೆ ಮರುಜೀವ ನಡೆಸುವ ದುರುದ್ದೇಶ ಇಟ್ಟುಕೊಂಡು ಶಿವವರಾಮ ಕಾರಂತರ ಬಡಾವಣೆ ವಿರುದ್ಧವೇ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ರಾಜ್ಯ ಸರಕಾರ ಹಿಂದುಗಳ ವಿರುದ್ಧವೇ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಭಾಗದ ಶಾಸಕ ಹಾಗೂ ಸಚಿವ ಖಾದರ್ ಅವರಿಗೆ ಸ್ಪೀಕರ್ ಅವರೇ ಛೀಮಾರಿ ಹಾಕುವ ಮೂಲಕ ಅವರ ದುರಾಡಳಿತವನ್ನು ಎತ್ತಿ ಹಿಡಿದಿದ್ದರು. ಇದು ಒಂದು ಧರ್ಮವನ್ನು ಓಲೈಸುವ ಸರಕಾರದ ವಿರುದ್ಧದ ಪ್ರತಿಭಟನೆಯಾಗಿದ್ದು, ಮತೀಯವಾದಿ ಸಂಘಟನೆಗಳಿಂದ ಅಶಾಂತಿ ನಿರ್ಮಾಣವಾಗುತ್ತಿದೆ. ಅದನ್ನು ನಿಷೇಧಿಸುವವರೆಗೆ ಶಾಂತಿಯೂ ಸಿಗುವುದಿಲ್ಲ, ಮತೀಯ ಗಲಭೆಗಳು ನಿಲ್ಲುವುದಿಲ್ಲ ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಸೀತಾರಾಮ ಶೆಟ್ಟಿ, ಕ್ಷೇತ್ರ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಸಚಿನ್ ಶೆಟ್ಟಿ, ಉಪಾಧ್ಯಕ್ಷ ಸುದರ್ಶನ್ ಶೆಟ್ಟಿ, ಬಿಜೆಪಿ ಕೊಣಾಜೆ ಗ್ರಾಮ ಸಮಿತಿ ಅಧ್ಯಕ್ಷ ಸನತ್ ರೈ ಕಕ್ಕೆಮಜಲು, ಕೊಣಾಜೆ ಗ್ರಾಮ ಯುವ ಮೋರ್ಚಾ ಅಧ್ಯಕ್ಷ ಚಂದ್ರಹಾಸ್, ಪ್ರ.ಕಾರ್ಯದರ್ಶಿ ಪ್ರವೀಣ್ ಪಟ್ಟೋರಿ, ಬಿಜೆಪಿ ಕಾರ್ಯದರ್ಶಿ ಭರತ್ ಗಟ್ಟಿ, ಮುಖಂಡರಾದ ನಾರಾಯಣ ರೈ ಕ್ಕೆ ಮಜಲು, ಸುಂದರ್ ಶೆಟ್ಟಿಗಾರ್ ದೇವಪ್ಪ ಶೆಟ್ಟಿಗಾರ್ ದಯಾನಂದ ಶೆಟ್ಟಿಗಾರ್, ವರದರಾಜ್ ಬೊಳ್ಲೆಕುಮೇರು, ಗ್ರಾಮ ಪಂಚಾಯತ್ ಸದಸ್ಯರಾದ ಹರಿಶ್ಚಂದ್ರ, ರವೀಂದ್ರ ಪಟ್ಟೋರಿ, ಪ್ರಕಾಶ್ ಕೊಣಾಜೆ, ರವೀಂದ್ರ ಪಟ್ಟೋರಿ, ಗೀತಾ ಸುಂದರ್ ಶೆಟ್ಟಿಗಾರ್,ರಾಜೀವಿ ಶೆಟ್ಟಿ ಹೊಸಮನೆ, ರಾಮಚಂದ್ರ ಗಟ್ಟಿ ಮೇಲಿನ ತೋಟ, ಗಣೇಶ್ ಅಸೈಗೋಳಿ, ಮಹಿಳಾ ಮೋರ್ಚಾ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ಗ್ರಾಮ ಸಮಿತಿ ಅಧ್ಯಕ್ಷೆ ಪುಷ್ಪಾವತಿ ಕಂಬಳಕೋಡಿ, ಹಿಂದುಳಿದ ಮೋರ್ಚಾ ಕ್ಷೇತ್ರ ಕೋಶಾಧಿಕಾರಿ ಜನಾರ್ಧನ್ , ರಾಜೇಶ್ ಕಾನ,ಶಿವಪ್ರಕಾಶ್ ಭಟ್, ಪುರುಷೋತ್ತಮ ನಡುಪದವು, ಉಪಸ್ಥಿತರಿದ್ದರು.
























