ಉಳ್ಳಾಲ ನ್ಯೂಸ್ ನೆಟ್ವರ್ಕ್
ಕೊಣಾಜೆ : ಎಸ್ಡಿಪಿಐ ಅಧ್ಯಕ್ಷ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ ಆರೋಪಿಯೆಂದು ಹರೇಕಳ ಮೂಲದ ಹಿಂದು ಸಂಘಟನೆ ಕಾರ್ಯಕರ್ತನ ಹೆಸರು ಹಾಗೂ ಭಾವಚಿತ್ರವನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಸುಳ್ಳು ಮಾಹಿತಿ ಹಬ್ಬಿಸಿದವರ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೇಕಳದಲ್ಲಿ ಹಿಂದು ಸಂಘಟನೆಗಳಲ್ಲಿ ಕಾಣಿಸಿಕೊಂಡಿದ್ದ ಪ್ರೇಮ್ ಎಂಬವರು ದೂರು ನೀಡಿದ್ದಾರೆ. ಪೂರ್ವದ್ವೇಷವನ್ನು ಇಟ್ಟುಕೊಂಡ ತಂಡವೊಂದು ಅಶ್ರಫ್ ಕಲಾಯಿ ಪ್ರಕರಣದಲ್ಲಿ ತಾನು ಭಾಗಿಯಾಗಿರುವುದಾಗಿ ಸುಳ್ಳು ಸುದ್ಧಿ ಹಬ್ಬಿಸಿ , ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ಯಾಪ್ ಗಳಲ್ಲಿ ಹರಿಯಬಿಟ್ಟಿದ್ದಾರೆ. ಇದು ತನ್ನ ಘನತೆಗೆ ಧಕ್ಕೆಯನ್ನು ಉಂಟುಮಾಡಿದೆ. ಅಲ್ಲದೆ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಜೀವ ಅಪಾಯದಲ್ಲಿದೆ. ಇಲಾಖೆ ಸೂಕ್ತ ಕ್ರಮಕೈಗೊಂಡು ರಕ್ಷಣೆ ನೀಡುವಂತೆಯೂ, ಸುಳ್ಳು ಸುದ್ಧಿ ಹಬ್ಬಿಸಿ ಮತ್ತೆ ಜೀವಕ್ಕೆ ಕುತ್ತು ತರುವ ಪ್ರಯತ್ನದ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ದೂರು ನೀಡಿದ್ದಾರೆ. ಅದರಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


