ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ :ಸಸ್ಯರಾಶಿಯೇ ಅಭಿವೃದ್ಧಿಗೆ ಅನಿವಾರ್ಯ, ಯೋಜನೆಗಳಿಗಾಗಿ ಕಾಡುಗಳ ನಾಶ ಸಲ್ಲ:ಪಿ.ಎಸ್ ಪ್ರಕಾಶ್ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಸಮರ್ಥಭಾರತ ಕೋಟಿ ವೃಕ್ಷಾರೋಹಣ ಅಭಿಯಾನಯೋಜನೆಗಳ ಹೆಸರಲ್ಲಿ ಕಾಡನ್ನು ನಾಶಪಡಿಸುವುದರಿಂದ ಸಸ್ಯರಾಶಿಯು ನಶಿಸಿ ಹೋಗುತ್ತಿದ್ದು, ಭವಿಷ್ಯದ ಅಭಿವೃದ್ಧಿಯ ದೃಷ್ಟಿ ಇರಿಸಿ ಸಸ್ಯರಾಶಿಯನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಮುಖ್ ಪಿ.ಎಸ್ ಪ್ರಕಾಶ್ ಅವರು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿಯವರ ಅಭಿಲಾಷೆಯಂತೆ ಜೂನ್ 5ರಿಂದ-ಆಗಸ್ಟ್ 15ರ ವರೆಗೆ ದೇಶದಲ್ಲೆಡೆ ನಡೆಯಲಿರುವ ಸಮರ್ಥಭಾರತ ಕೋಟಿ ವೃಕ್ಷಾರೋಹಣ ಅಭಿಯಾನದ ಅಂಗವಾಗಿ ಆದಿತ್ಯವಾರದಂದು ಕುತ್ತಾರುವಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಇಂದು ದೇಶದಲ್ಲೆಡೆ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಜಾಗತಿಕ ತಾಪಮಾನವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮೂವತ್ತು ವರುಷಗಳ ಹಿಂದೆ ದೆಹಲಿಯಲ್ಲಿ ಬಾಟಲಿಯಲ್ಲಿ ನೀರು ಮಾರಾಟ ಮಾಡುತ್ತಿದ್ದಾರೆಂಬ ಸುದ್ದಿ ಕೇಳಿ ನಾವೆಲ್ಲರೂ ಆಶ್ಚರ್ಯ ಪಟ್ಟಿದ್ದೆವು.ಆದರೆ ಭವಿಷ್ಯದಲ್ಲಿ ಕಾಡುಗಳ ನಾಶದಿಂದಾಗಿ ಕಾಲಕ್ಕೆ ತಕ್ಕಂತೆ ಮಳೆಯಾಗದೆ ಬದುಕು ಸಾಗಿಸಲು ಅಗತ್ಯವೆನಿಸಿರುವ ಶುದ್ಧ ನೀರು ಮತ್ತು ಆಮ್ಲಜನಕವನ್ನೂ ಪ್ರತೀಯೊಬ್ಬರೂ ಬೆಲೆ ತೆತ್ತು ಖರೀದಿಸುವ ಅನಿವಾರ್ಯತೆಯೂ ಎದುರಾಗುವುದನ್ನು ಅಲ್ಲಗಲೆಯುವಂತಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿದ್ದ ಅರಣ್ಯ ಇಲಾಖಾ ಉಪವಲಯಾಧಿಕಾರಿ ರವಿಕುಮಾರ್ ಅವರು ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿ ದ,ಕ ಜಿಲ್ಲೆಯಲ್ಲಿ 2,000 ಮಿ.ಮೀಟರ್ನಷ್ಟು ಮಳೆ ಸುರಿದರೂ ಮಳೆ ನೀರು ಸಂರಕ್ಷಣೆಯಾಗದ ನಿಟ್ಟಿನಲ್ಲಿ ಇದೇ ಪ್ರಪ್ರಥಮ ಬಾರಿಗೆ ದಕ್ಷಿಣ ಕನ್ನಡವನ್ನು ಬರಪೀಡಿತ ಜಿಲ್ಲೆಯೆಂದು ಸರಕಾರವು ಘೋಷಿಸಿದ್ದು ನಿಜಕ್ಕೂ ವಿಪರ್ಯಾಸವಾಗಿದ್ದು, ಬಲು ಮುಖ್ಯವಾಗಿ ಮಳೆ ಪ್ರಮಾಣ ಅಧಿಕವಾಗಿಸಲು ವನಸಂಪತ್ತನ್ನು ಬೆಳೆಸಬೇಕೆಂದು ಕರೆ ನೀಡಿದರು.
ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರು ಬಾಲಸಂರಕ್ಷಣಾ ಕೇಂದ್ರದ ಆವರಣದೊಳಗೆ ಸಸಿಗಳನ್ನು ನೆಡುವುದರ ಮೂಲಕ ಸಮರ್ಥಭಾರತ ಕೋಟಿವೃಕ್ಷಾರೋಹಣ ಅಭಿಯಾನಕ್ಕೆ ಚಾಲನೆ ನೀಡಿದರು.
ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ಶಾಸಕ ಕೆ.ಜಯರಾಮಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಮುಖಂಡರಾದ ಕೆ.ಟಿ ಸುವರ್ಣ, ಗೋಪಾಲ್ ಕುತ್ತಾರ್, ನಾರಾಯಣ ಕುಂಪಲ, ಕೃಷ್ಣ ಶೆಟ್ಟಿ ತಾಮಾರು, ಯಶವಂತ್ ಅಮೀನ್, ದಯಾನಂದ ತೊಕ್ಕೊಟ್ಟು, ಬಾಲಸಂರಕ್ಷಣಾ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಸರು ಅವರು ಉಪಸ್ಥಿತರಿದ್ದರು.
ಸಮರ್ಥ ಭಾರತ ಕೋಟಿ ವೃಕ್ಷಾರೋಹಣ ಕಾರ್ಯಕ್ರಮದಡಿ ಅನೇಕ ಸಂಘಟನೆಯಿಂದ ಸಾವಿರಾರು ಗಿಡಗಳಿಗೆ ಬೇಡಿಕೆಯಿದ್ದು, ಗಿಡಗಳನ್ನು ನೆಡಲು ಬೇಕಾದ ಸ್ಥಳಾವಕಾಶ ಮತ್ತು ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಗಿಡಗಳನ್ನು ಪೂರೈಸಲಾಗುವುದು.
(ರವಿಕುಮಾರ್ ಅರಣ್ಯ ಇಲಾಖಾ,ಉಪವಲಯಾಧಿಕಾರಿ)


