ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ನೀರಿನ ಟ್ಯಾಂಕರ್ ವಾಹನ ಮೂರು ಬೈಕುಗಳಿಗೆ ಸರಣಿಯಾಗಿ ಅಪಘಾತ ನಡೆಸಿರುವ ಘಟನೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಬಳಿ ಬುಧವಾರ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡರೆ, ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬೈಕ್ ಸವಾರ ಅನ್ಸಾರ್ ಸ್ಥಿತಿ ಚಿಂತಾಜನಕವಾಗಿದ್ದು, ಆನಂದ್ ಸ್ಥಿತಿ ಕೂಡಾ ಗಂಭೀರವಾಗಿದೆ. ಇನ್ನಿಬ್ಬರು ಹರೀಶ್ ಎಂಬವರ ಕಾಲು ಮುರಿತಕ್ಕೊಳಗಾದರೆ, ಮುಸ್ತಾಫ ಸಣ್ಣಪುಟ್ಟ ಗಾಯವಾಗಿ ಪಾರಾಗಿದ್ದಾರೆ. ಮೂರು ಬೈಕುಗಳಲ್ಲಿದ್ದ ನಾಲ್ವರು ಕೂಡಾ ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಕುತ್ತಾರಿನಿಂದ ತೊಕ್ಕೊಟ್ಟು ಕಡೆಗೆ ನೀರು ಹೇರಿಕೊಂಡು ಬರುತಿದ್ದ ಟ್ಯಾಂಕರ್ ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿದ್ದ ಮೂರು ಬೈಕುಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರೆಲ್ಲರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಿಕ್ಷಾ ಟೆಂಪೋ ಮೂಲಕ ತೊಕ್ಕೊಟ್ಟು ಆಸ್ಪತ್ರೆಗೆ ದಾಖಲಿಸಿ ಬಳಿಕ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸರು ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.




