ಉಳ್ಳಾಲ ನ್ಯೂಸ್ ನೆಟ್ವರ್ಕ್
ತೊಕ್ಕೊಟ್ಟು: ಅತ್ಯಾಧುನಿಕ ತಂತ್ರಜ್ಞಾನವಿರುವ ಇಂದಿನ ಕಾಲಘಟ್ಟದಲ್ಲಿ ಮನುಷ್ಯರ ನಡುವೆ ಪ್ರೀತಿ ವಿಶ್ವಾಸ ಕಡಿಮೆಯಾಗುತ್ತಿರುವುದು ದುರಂತ. ಸಾಮಾಜಿಕ ಜಾಲತಾಣಗಳಲ್ಲಿಬರುವ ವಿಚಾರಗಳು ಕ್ಷಣ ಮಾತ್ರದಲ್ಲೇ ವೈರಲ್ಗಳಾಗುವ ಮೂಲಕ ಅನೇಕ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪರಸ್ಪರರಲ್ಲಿ ವಿಶ್ವಾಸ ಮೂಡಿಸಬೇಕಾದ ಕೆಲಸ ನಡೆಯಬೇಕಾಗಿರುವುದು ಅಗತ್ಯವಾಗಿದೆ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಸಚಿವರಾದ ಯು.ಟಿ ಖಾದರ್ ಅಭಿಪ್ರಾಯಪಟ್ಟರು.
ಅವರು ಇಂದು ತೊಕ್ಕೊಟ್ಟು ಒಳಪೇಟೆಯಲ್ಲಿರುವ ಅಂಬೇಡ್ಕರ್ ಮೈದಾನದಲ್ಲಿ ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್ ಮೂರು ದಿನಗಳ ಕಾಲ ಆಯೋಜಿಸಿರುವ ಸಾರ್ವಜನಿಕ ಕುರಾನ್ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಾರ್ವಜನಿಕವಾಗಿ ಧರ್ಮಗ್ರಂಥಗಳ ನೈಜ ವಿಚಾರಗಳನ್ನು ತಿಳಿಸಲು ಪ್ರಯತ್ನಿಸಿರುವುದು ನಿಜಕ್ಕೂ ಉತ್ತಮ ಕಾರ್ಯ ಜಮಾಅತೆ ಇಸ್ಲಾಮಿ ಹಿಂದ್ ಈ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮವು ಶ್ಲಾಘನೀಯ ಎಂದರು.
“ಮಾನವ ಜೀವನದ ವಾಸ್ತವಿಕತೆ”ಎಂಬ ವಿಷಯದಲ್ಲಿ ಕುರಾನ್ ಪ್ರವಚನ ನೀಡಿದ ತೊಕ್ಕೊಟ್ಟು ಮಸ್ಜಿದುಲ್ ಹುದಾದ ಖತೀಬರಾದ ಮಹಮ್ಮದ್ ಕುಂಞ ಮಾನವರ ಬದುಕಿಗೆ ಕೊನೆ ಇದೆ ಎಂಬುದು ವಾಸ್ತವವಾದ ವಿಚಾರ. ಧರ್ಮಗ್ರಂಥಗಳ ಅಧ್ಯಯನ ಮತ್ತು ಪ್ರಗತಿಗೆ ಆಗಮಿಸಿರುವ ಸಕಲ ಪ್ರವಾದಿಗಳ ಮಾರ್ಗದರ್ಶನವನ್ನು ಜೀವನದಲ್ಲಿ ಅನುಷ್ಟಾನಿಸಿದಾರೆ ಮಾತ್ರ ಮಾನವ ಉತ್ತಮ ಮನುಷ್ಯನಾಗಿ ಈ ಜಗತ್ತಿನಿಂದ ನಿರ್ಗಮಿಸಬಹುದು. ನಾವು ಮಾಡಿದ ಉತ್ತಮ ಕರ್ಮಗಳು ಮಾತ್ರ ಇಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.
ತೊಕ್ಕೊಟ್ಟು ಸೈಂಟ್ ಸೆಬೆಸ್ಟಿಯನ್ ಚರ್ಚ್ನ ಧರ್ಮಗುರು ರೆ.ಫಾ.ಡಾ.ಜಾನ್ ಬ್ಯಾಪ್ಟಿಸ್ ಸಲ್ಡಾನ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು.
ತೊಕ್ಕೊಟ್ಟು ನಾಗಕನ್ನಿಕ ರಕ್ತೇಶ್ವರಿ ಕ್ಷೇತ್ರದ ಅಧ್ಯಕ್ಷ ಚಂದ್ರಕಾಂತ್ ಸದ್ಬಾವನ, ವೇದಿಕೆ ಉಳ್ಳಾಲದ ಕೋಶಾಧಿಕಾರಿ ಮೆಲ್ವಿನ್ ಡಿ’ಸೋಜ, ಜಮಾಅತ್ ಇಸ್ಲಾಮಿ ಹಿಂದ್ ಉಳ್ಳಾಲ ಅಧ್ಯಕ್ಷ ಎ.ಎಚ್.ಮಹಮ್ಮದ್ ಉಪಸ್ಥಿತರಿದ್ದರು.
ಅತಿಥಿಗಳಿಗೆ ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಕಾರ್ಯದರ್ಶಿ ಅಬ್ದುಲ್ ಕಲೀಂ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಮೂರು ದಿನಗಳಿಂದ ನಡೆದ ಕಾರ್ಯಕ್ರಮದಲ್ಲಿ ಕೆಡುಕು ಮುಕ್ತ ಸಮಾಜ ಎಂಬ ವಿಷಯದಲ್ಲಿ ಮಹಮ್ಮದ್ ಕುಂಞ ಮಹಿಳೆಯರ ಹಕ್ಕು ಮತ್ತು ಸ್ಥಾನಮಾನ ಎಂಬ ವಿಷಯದಲ್ಲಿ ಅಕ್ಬರ್ ಅಲಿ ಉಡುಪಿ ಪ್ರವಚನ ನೀಡಿದರು.
ಮಹಮ್ಮದ್ ಮುಬೀನ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಝಮ್ಮಿಲ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.







