ಉಳ್ಳಾಲ ನ್ಯೂಸ್ ನೆಟ್ವರ್ಕ್
ಇರಾ: ಬೈಕ್ ಅಪಘಾತ್ಕೀಡಾಗಿ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇರಾ ಸಮೀಪದ ಮೂಳೂರು ಎಂಬಲ್ಲಿ ಮೊನ್ನೆ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೆಲ್ಕಾರ್ ಮೊಗರ್ನಾಡು ನಿವಾಸಿ ವೆಲೇರಿಯನ್ ಡಿಸೋಜ ಎಂಬವರ ಪುತ್ರ ವಿನೋದ್ ವಿಲ್ಸನ್ ಡಿಸೋಜ (23) ಮೃತ ಯುವಕ. ಮೂಳೂರಿನಲ್ಲಿರುವ ಗೆಳೆಯ ರೆಯಾನ್ ಎಂಬಾತನ ಮನೆಗೆ ವಿನೋದ್ ಸೇರಿದಂತೆ ಏಳು ಮಂದಿ ಮೂರು ಬೈಕುಗಳಲ್ಲಿ ಬಂದಿದ್ದರು. ಅಲ್ಲಿಂದ ತಡರಾತ್ರಿ ವೇಳೆ ವಾಪಸ್ಸಾಗುವ ಸಂದರ್ಭ ವಿನೋದ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಮನೆಯೊಂದರ ಆವರಣ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿನೋದ್ ತೀವ್ರ ತರದ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಸವಾರರಾದ ಪ್ರಕಾಶ್ ಮತ್ತು ಕೀರ್ತಿ ಕಿರಣ್ ಅಲ್ಬುಕರ್ಕ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಸ್ಕತ್ ನಲ್ಲಿ ಉದ್ಯೋಗದಲ್ಲಿದ್ದ ವಿನೋ 15 ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ. ಇವರು ತಂದೆ , ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






