ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಪ್ರಧಾನಿ ಮೋದಿ ವಿಮಾನದಲ್ಲಿ ಹಾರಾಡಿ ಉತ್ಕøಷ್ಟ ಆಹಾರ ತಿನ್ನುವುದರಲ್ಲೇ ನಿರತರಾಗಿದ್ದಾರೆ. ಇಲ್ಲಿ ಬಡ ಜನತೆ ಊಟವಿಲ್ಲದೆ ಉಪವಾಸ ಸತ್ತರೂ, ಅವರು ಕಾರ್ಪೊರೇಟ್ ಸಂಸ್ಥೆಗಳ ಏಳಿಗೆಗಾಗಿ ಮಾತ್ರ ದುಡಿಯುತ್ತಿದ್ದಾರೆ ಎಂದು ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಹೇಳಿದ್ದಾರೆ.
ಅವರು ಕೇಂದ್ರ ಸರಕಾರದ ಜನವಿರೋಧಿ ಮತ್ತು ಬೆಲೆ ಏರಿಕೆಯ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ಮೋದಿ ಸರಕಾರ ದೇಶವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ಬಡಜನರಿಗೆ ಜೀವನ ನಡೆಸುವಂತಹ ವಾತಾವರಣ ನಿರ್ಮಿಸುತ್ತಿಲ್ಲ. ಕಾರ್ಪೊರೇಟ್ ಕುಳಗಳ ಪರವಾಗಿ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿಬೇಕಾದ ಪ್ರತಿಪಕ್ಷಗಳು ಮೌನಸಮ್ಮತಿಯನ್ನು ವಹಿಸಿರುವುದು ದುರಾದೃಷ್ಟ. ಬೀದಿಗಳಲ್ಲಿ ಪ್ರತಿಭಟಿಸಿ ಜನರನ್ನು ಮೋಸಗೊಳಿಸುವ ಬದಲು ಪಾರ್ಲಿಮೆಂಟಿನ ಒಳಗಡೆ ದನಿ ಎತ್ತಿ ಪ್ರತಿಭಟಿಸಲು ಮುಂದಾಗದೇ ಮೋದಿ ಪರವಾಗಿಯೇ ಪ್ರತಿಪಕ್ಷಗಳು ನಿಂತಿದೆ ಅನ್ನುವುದನ್ನು ಸಾಬೀತುಪಡಿಸುತ್ತದೆ. ದಿನಬಳಕೆ ವಸ್ತುಗಳ ಬೆಲೆ ದುಪ್ಪಟ್ಟಾಗುತ್ತಲೇ ಇದೆ. ರೈತರ ಸಾಲಮನ್ನ ಮಾಡಲು ಎರಡು ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣ ಆಗಿದೆ. ಎಸ್ ಡಿಪಿಐ ಚುನಾವಣೆ ಎದುರಿಸಲು ಮಾತ್ರವಿರುವ ರಾಜಕೀಯ ಪಕ್ಷವಾಗಿರದೆ, ನ್ಯಾಯಕ್ಕಾಗಿ ಹೋರಾಟ ನಡೆಸುವ ಉದ್ದೇಶದಿಂದ ಹುಟ್ಟಿಕೊಂಡಿದೆ. ಪ್ರಧಾನಿ ಮೋದಿ ವಿಮಾನದಲ್ಲಿ ಹಾರಾಡಿ ಉತ್ಕøಷ್ಟ ಆಹಾರ ತಿನ್ನುವುದರಲ್ಲೇ ನಿರತರಾಗಿದ್ದಾರೆ. ಇಲ್ಲಿ ಬಡ ಜನತೆ ಊಟವಿಲ್ಲದೆ ಉಪವಾಸ ಸಾಯುತ್ತಿದ್ದಾರೆ. ಕಪ್ಪು ಹಣ ಮಟ್ಟ ಹಾಕಿ ನಾಟಕವಾಡಿರುವ ಕೇಂದ್ರ ಸರಕಾರ ಅದನ್ನೇ ಉಪಯೋಗಿಸಿಕೊಂಡು ಉತ್ತರಪ್ರದೇಶ, ಮಣಿಪುರ, ಗೋವಾದಲ್ಲಿ ಸರಕಾರವನ್ನು ಯಶಸ್ವಿಯಾಗಿ ರಚಿಸಿಕೊಂಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾದರೂ ದೇಶದಲ್ಲಿ ಕಡಿಮೆಯಾಗಿಲ್ಲ. ಬಡಜನರನ್ನು ಮೋಸಗೊಳಿಸುವ ಮತ್ತು ಅವರನ್ನು ದೇಶದಿಂದ ಓಡಿಸುವ ಕೆಲಸ ಮೋದಿ ಸರಕಾರದಿಂದ ಆಗುತ್ತಿದೆ. ಅಂಬಾನಿ, ಅಧಾನಿ, ಬಿಜೆಪಿ ಶಾಸಕರು, ಸಚಿವರಿಗೆ ಮಾತ್ರ ಒಳ್ಳೆಯ ದಿನಗಳು ಆರಂಭವಾಗಿದೆ. ಮುಖಕ್ಕೆ ಮಸಿ ಬಳಿಯುವ ಸಿದ್ಧಾಂತ ಹೊಂದಿರುವ ಸರಕಾರಕ್ಕೆ, ಬಿಸಾಡಿದ ಮಸಿಯನ್ನು ಬಳಸಿಕೊಂಡೇ ಪ್ರತಿಭಟನೆ ನಡೆಸುವ ಶಕ್ತಿ ಎಸ್ಡಿಪಿಐ ನಲ್ಲಿದೆ ಎಂದು ತೋರಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭ ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್ಡಿಪಿಐ ಅಧ್ಯಕ್ಷ ಅಬ್ಬಾಸ್ ಕಿನ್ಯ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್ಡಿಪಿಐ ಉಪಾಧ್ಯಕ್ಷ ನೌಶಾದ್ ಕಲ್ಕಟ್ಟ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್ಡಿಪಿಐ ಕಾರ್ಯದರ್ಶಿ ಹಾರಿಸ್ ಮಲಾರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್ಡಿಪಿಐ ಜೊತೆ ಕಾರ್ಯದರ್ಶಿ ಲತೀಫ್ ಕೋಡಿಜಾಲ್, ಕೋಶಾಧಿಕಾರಿ ಎ.ಆರ್.ಅಬ್ಬಾಸ್ ಉಳ್ಳಾಲ, ಝೂಹಿದ್ ಮಲಾರ್, ಸಂಶುದ್ದೀನ್ ಮುಡಿಪು, ಹಸೈನಾರ್ ಕೊಣಾಜೆ, ಫಯಾಝ್ ಮಂಜನಾಡಿ, ಅಶ್ರಫ್ ಉಪಸ್ಥಿತರಿದ್ದರು.


