ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ತುಳುನಾಡ ರಕ್ಷಣಾ ವೇದಿಕೆ ಇದರ ಮಂಗಳೂರು ವಿಧಾನಸಭಾ ಕ್ಷೇತ್ರದ ಕಚೇರಿ ಉದ್ಘಾಟನಾ ಸಮಾರಂಭ ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅಸಂಘಟಿತ ಕಾರ್ಮಿಕರಿಗೆ ವಿಮಾ ಕಾರ್ಡು ವಿತರಣಾ ಕಾರ್ಯಕ್ರಮ ಹಾಗೂ ಅಪಘಾತ ಜೀವರಕ್ಷಕ ಯೋಜನೆಯ ಮಾಹಿತಿ ಶಿಬಿರ ಮಾ.17ರ ಸಂಜೆ 4.00ಕ್ಕೆ ದೇರಳಕಟ್ಟೆಯಲ್ಲಿ ನಡೆಯಲಿದೆ ಎಂದು ತು.ರ.ವೇ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದ್ದಾರೆ.
ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು.
ಸಾರ್ವಜನಿಕ ಜೀವನದಲ್ಲಿ ಬೇಧ ಭಾವ ರಹಿತರಾಗಿ ಸಮಾಜದಲ್ಲಿ ಸಾಮರಸ್ಯ ತರಲು ತು.ರ.ವೇ ಶ್ರಮಿಸುತ್ತಾ ಬಂದಿದೆ. ಪತ್ರಕರ್ತರ ಹಲ್ಲೆ ಖಂಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಹೋರಾಟ, ಮೆಡಿಕ್ಲೈಮ್ ಕಂಪೆನಿಗೆ ಮುತ್ತಿಗೆ, ಮುಡಿಪು ಇನ್ಫೋಸಿಸ್ ವಠಾರದಲ್ಲಿ ಕೊಳವೆ ಬಾವಿ ವಿರೋಧಿಸಿ ಹೋರಾಟ, ಕಲ್ಲಾಪುವಿನಿಂದ ತಲಪಾಡಿವರೆಗೆ ಹೆದ್ದಾರಿ ಪ್ರಾಧಿಕಾರ 60 ಮೀ. ಹೆಚ್ಚುವರಿ ಅಗಲೀಕರಣದ ವಿರುದ್ಧ ಹೋರಾಟ, ಹೆದ್ದಾರಿ ವಶಪಡಿಸಿಕೊಂಡ ಜಾಗದ ಮಾರುಕಟ್ಟೆ ದರ ಹೆಚ್ಚಳ, ಜೆಪ್ಪು ಮಹಾಕಾಳಿ ಪಡ್ಪು ಹದಗೆಟ್ಟ ರಸ್ತೆ ವಿರುದ್ಧ ಹೋರಾಟ, ಜೆಪ್ಪು ಮೇಲ್ಸೇತುವೆ ನಿರ್ಮಾಣ ಹೀಗೆ ವಿವಿಧ ರೀತಿಯ ಜನಪರ ಹೋರಾಟಗಳನ್ನು ನಡೆಸಿದ ತು.ರ.ವೇ ಜನರ ಕಷ್ಟಗಳಿಗೆ ಸ್ಪಂಧಿಸಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಜನಪರ ಸೇವೆಗಳನ್ನು ನಡೆಸುವ ಉದ್ದೇಶ ಹೊಂದಿರುವ ಸಂಘದ ಕಾರ್ಯಕರ್ತರು ಜಿಲ್ಲೆ, ಉಡುಪಿ, ಕಾಸರಗೋಡು ಭಾಗದ ತುಳುನಾಡಿನ ಜನತೆಯ ನೋವು ನಲಿವಿಗೆ ಸ್ಪಂಧಿಸುವ ಉದ್ದೇಶದಿಂದ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಚೇರಿಯನ್ನು ತೆರೆಯುತ್ತಿದೆ ಎಂದರು.
ಕಚೇರಿಯನ್ನು ರವಿಶಂಕರ್ ಶೆಟ್ಟಿ ಬೆಂಗಳೂರು ಉದ್ಘಾಟಿಸಲಿದ್ದಾರೆ. ಯೋಗೀಶ್ ಶೆಟ್ಟಿ ಜೆಪ್ಪು ಅಧ್ಯಕ್ಷತೆ ಹಾಗೂ ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜು ವಿಮಾ ಕಾರ್ಡುಗಳನ್ನು ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಳು ಹೋರಾಟಗಾರ ಹರಿಕೃಷ್ಣ ಪುನರೂರು, ಕಣಚೂರು ಸಮೂಹ ಸಂಸ್ಥೆ ನಿರ್ದೇಶಕ ಕಣಚೂರು ಮೋನು, ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿ.ಪಂ ಮಾಜಿ ಸದಸ್ಯ ಎ.ಸಿ.ಭಂಡಾರಿ, ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ತುಳು ಚಿತ್ರನಟಿ ಪೂಜಾ ಶೆಟ್ಟಿ, ರತ್ನ ಎಜ್ಯುಕೇಷನಲ್ ಟ್ರಸ್ಟಿನ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಖಿಲ ಭಾರತ ತುಳು ಒಕ್ಕೂಟದ ಪ್ರ.ಕಾ. ನಿಟ್ಟೆ ಶಶಿಧರ ಶೆಟ್ಟಿ, ತು.ರ.ವೇ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ.ಕೆ.ಎ.ಮುನೀರ್ ಬಾವಾ ಹಾಗೂ ಕೊಣಾಜೆ, ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ತು.ರ.ವೇ ಕೇಂದ್ರೀಯ ಮಂಡಳಿ ಪ್ರ.ಕಾ ಪ್ರಶಾಂತ್ ಭಟ್ ಕಡಬ, ಕ್ಷೇತ್ರ ಮಹಿಳಾ ಘಟಕ ಅಧ್ಯಕ್ಷೆ ವಿದ್ಯಾ.ಯು.ಜೋಗಿ, ಕೋಟೆಕಾರು ಪಟ್ಟಣ ಪಂಚಾಯತ್ ಘಟಕದ ಅಧ್ಯಕ್ಷ ರವಿ ಶೆಟ್ಟಿ ಮಾಡೂರು, ಕ್ಷೇತ್ರ ಉಪಾಧ್ಯಕ್ಷ ರಹೀಂ ಕುತ್ತಾರು, ಉಳ್ಳಾಲ ನಗರಸಭೆ ಘಟಕದ ಅಧ್ಯಕ್ಷ ಇಸ್ಮಾಯಿಲ್ ಶಾಫಿ, ಸಿರಾಜ್ ಅಡ್ಕರೆ ಉಪಸ್ಥಿತರಿದ್ದರು.


