ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಪ್ರತಿಭಟಿಸುವುದು ಸಂವಿಧಾನಾತ್ಮಕ ಹಕ್ಕು, ಅದನ್ನು ವಿರೋಧಿಸಿ ಕೀಳುಮಟ್ಟದ ಹೇಳಿಕೆಯನ್ನು ನೀಡಿರುವ ಜವಾಬ್ದಾರಿಯುತ ಸಚಿವರು ತಮ್ಮ ಸ್ಥಾನಕ್ಕೆ ಯೋಗ್ಯರಲ್ಲ, ಈ ಕೂಡಲೇ ಕ್ಷಮೆ ಯಾಚಿಸದೇ ಇದ್ದಲ್ಲಿ ಹಿರಿಯರ ಜತೆಗೆ ಚರ್ಚಿಸಿ ಮುಂದಿನ ಹೋರಾಟದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.
ಸಚಿವ ಖಾದರ್ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ತೊಕ್ಕೊಟ್ಟುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಕೇರಳ ರಾಜ್ಯದಲ್ಲಿ ನೂರಾರು ಹಿಂದು ಸಂಘಟನೆಯ ಕಾರ್ಯಕರ್ತರ ಹತ್ಯೆಗೆ ಕಾರಣರಾಗಿರುವ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿ ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸುವುದಕ್ಕೆ ಜಿಲ್ಲೆಯಲ್ಲಿ ಸಂಘಪರಿವಾರದವರು ಕರೆ ನೀಡಿದ್ದ ಹರತಾಳಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಇದು ಹಿಂದುಗಳ ನೋವನ್ನು ವ್ಯಕ್ತಪಡಿಸಿದೆ. ಅದನ್ನು ಬಿಜೆಪಿ ಕೂಡಾ ಬೆಂಬಲಿಸಿದೆ. ಹೊರಜಿಲ್ಲೆಯ ಕಾಂಗ್ರೆಸ್ ಮುಖಂಡರ ಮಾತಿಗೆ ಹಿಡಿತವಿಲ್ಲ ಆದರೆ ಜಿಲ್ಲೆಯ ಸಚಿವನಾಗಿ , ಉಳ್ಳಾಲ ಭಾಗದ ಶಾಸಕರಾಗಿದ್ದುಕೊಂಡು ಸಂವಿಧಾನವನ್ನು ತಿಳಿಯದೆ ಮಾತನಾಡಿರುವುದು ಕಳವಳಕಾರಿ. ಇದು ಅವರ ಯೋಗ್ಯತೆಯನ್ನು ಪ್ರಶ್ನಿಸುವಂತಾಗಿದೆ. ಈ ಕೂಡಲೇ ಕ್ಷಮೆಯಾಚಿಸದಿದ್ದಲ್ಲಿ ಮುಂದಿನ ಹೋರಾಟದ ತೀರ್ಮಾನವನ್ನು ಹಿರಿಯರ ಜತೆ ಸಮಾಲೋಚಿಸಿ ಕೈಗೊಳ್ಳುವುದಾಗಿ ತಿಳಿಸಿದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಎಲ್ಎಲ್ಬಿ ಪದವೀಧರನಾಗಿ ಸಂವಿಧಾನವನ್ನು ಅರಿಯದ ಸಚಿವರು ಹೇಳಿಕೆ ನೀಡಿರುವುದು ಖಂಡನೀಯ. ಕರಾವಳಿಯ ಶಾಂತಿಯನ್ನು ಕದಡಿಸುವ ಪ್ರಯತ್ನ ಕಾಂಗ್ರೆಸ್ ನಿಂದ ಆಗಿದೆ. ಅದಕ್ಕಾಗಿ ಉಳ್ಳಾಲದಲ್ಲಿ ಶಾಸಕರ ಬದಲಾವಣೆಯೂ ಆಗಬೇಕಿದೆ ಎಂದರು.
ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವೀಂದ್ರ ರೈ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ, ನಮಿತಾ ಶ್ಯಾಂ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸುಷ್ಮಾ ಜನಾರ್ಧನ್, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಧನ್ಯವತಿ ಸೋಮೇಶ್ವರ, ಜಿಲ್ಲಾ ಅಲ್ಪಾ ಸಂಖ್ಯಾತ ಮೋರ್ಛಾದ ಕಾರ್ಯದರ್ಶಿ ಮುನೀರ್ ನೀರ್ ಬಾವ, ಕ್ಷೇತ್ರ ಯುವ ಮೋರ್ಚಾದ ಅಧ್ಯಕ್ಷ ಸುಜೀತ್ ಮಾಡೂರು, ಉಪಾಧ್ಯಕ್ಷ ಪ್ರಕಾಶ್ ಸಿಂಫೋನಿ, ಸುರೇಂದ್ರ ಶೆಟ್ಟಿ ಉಳ್ಳಾಲ್, ಪ್ರಶಾಂತ್ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು


