ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೆ.ಸಿರೋಡು: ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸಹಾಯ ಮಾಡುವಂತಹ ಮನೋಭಾವ ಹುಟ್ಟಿಕೊಂಡಾಗ ಜೀವನ ಅರ್ಥಪೂರ್ಣವಾಗುತ್ತದೆ. ತೀಯ ಸಮಾಜದಿಂದ ನಡೆದಿರುವ ಕಾರ್ಯಕ್ರಮ ಸಮಾಜಕ್ಕೆ ಮಾರ್ಗದರ್ಶನ ನೀಡಿದಂತಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ತೀಯ ಸಮಾಜ ಉಳ್ಳಾಲ ವಲಯದ ಪದಾಧಿಕಾರಿಗಳು ಹಾಗೂ ದಾನಿಗಳ ನೆರವಿನಿಂದ ರೂ.ನಾಲ್ಕು ಲಕ್ಷ ವೆಚ್ಚದಲ್ಲಿ ತಲಪಾಡಿ ಕೆ.ಸಿರೋಡು ಸಮೀಪದ ಕಾಟುಂಗರೆಗುಡ್ಡೆಯಲ್ಲಿ ಆರ್ಥಿಕವಾಗಿ ಹಿಂದುಳಿದ ದೇವಕಿ ಬೆಳ್ಚಾಡ್ತಿ ಅವರಿಗೆ ನಿರ್ಮಿಸಿದ ಮನೆಯ ಗೃಹಪ್ರವೇಶ ಮತ್ತು ಕೀಲಿ ಕೈ ಹಸ್ತಾಂತರ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.
ಒಬ್ಬರು ಇನ್ನೊಬ್ಬರ ಕಷ್ಟದಲ್ಲಿ ಫಾಲ್ಗೊಳ್ಳುವುದು ಸಮಾಜಕ್ಕೆ ಪೂರಕ ಹಾಗೂ ಮಾರ್ಗದರ್ಶನ ನೀಡುವ ಕಾರ್ಯಕ್ರಮವಾಗಿದೆ. ಈ ನಿಟ್ಟಿನಲ್ಲಿ ಉಳ್ಳಾಲ ವಲಯದ ತೀಯ ಸಮಾಜದ ಕಾರ್ಯ ಶ್ಲಾಘನೀಯವಾದುದು ಎಂದರು.
ಭಾರತೀಯ ತೀಯ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ದಾಮೋದರ್ ಉಳ್ಳಾಲ್ , ರಾಘವ ಗುರಿಕಾರ, ಚಂದ್ರಕಾಂತ್, ಅಬೂಬಕರ್ ಹಾಜಿ, ರವೀಂದ್ರ ಉಳ್ಳಾಲ್, ಸತೀಶ್ ಕುಂಪಲ, ಸುರೇಶ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು.


