ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು : ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ನೂತನ ಸೇತುವೆಯಲ್ಲಿ ಡಾಮರೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.
ನೂತನ ಸೇತುವೆಯಲ್ಲಿ ಸೇತುವೆಯ ಸುರಕ್ಷತೆಗಾಗಿ ಸೋಮವಾರ ಡಾಮರೀಕರಣ ಕಾರ್ಯ ನಡೆಯುತ್ತಿದ್ದು, ಅದೂ ವಾರದ ಮೊದಲ ದಿನವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರವಿದ್ದುದರಿಂದ ಪಂಪುವೆಲ್ನಿಂದ ಕೊಲ್ಯ ತನಕ ವಾಹನಗಳ ಸರತಿ ಸಾಲು ಕಂಡುಬಂತು. ಇನ್ನೊಂದು ಭಾಗದಲ್ಲಿ ಮಂಗಳೂರಿನಿಂದ ತೊಕ್ಕೊಟ್ಟು ಜಂಕ್ಷನ್ ದಾಟಿ ವಿವಿ ಕಡೆಗೆ ಸಂಚರಿಸುವ ವಾಹನಗಳಿಗೆ ವಿಳಂಬವಾಯಿತಾದರೂ ತೊಕ್ಕೊಟ್ಟು ಜಂಕ್ಷನ್ ದಾಟಿದ ಬಳಿಕ ವಾಹನಗಳ ಸಂಚಾರ ಸುಸೂತ್ರವಾಗಿತ್ತು.
ಹಾಗಿದ್ದರೂ ವಿವಿ ರಸ್ತೆಯ ಮೂಲಕ ಮಂಗಳೂರಿಗೆ ಸಂಚರಿಸುವ ವಾಹನಗಳಿಗೆ ಈ ಸಂಕಷ್ಟ ತಪ್ಪಲಿಲ್ಲ. ಉಳ್ಳಾಲ ತಲಪಾಡಿ ಕಡೆಗೆ ಸಂಚರಿಸುವ ವಾಹನಗಳ ತೊಂದರೆ ಹೆಳತೀರದು.
ನೇತ್ರಾವತಿ ಸೇತುವೆಯಲ್ಲಿ ಏಕಮುಖ ಸಂಚಾರವಿದ್ದುದರಿಂದ ವಾಹನ ಸಂಚಾರದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಪ್ರಯಾಣಿಕರು ಪರದಾಡುವಂತಾಯಿತು.ಪೊಲೀಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಬಹಳಷ್ಟು ಶ್ರಮಿಸಿದರು. 20 ನಿಮಿಷದಲ್ಲಿ ಕ್ರಮಿಸುವ ರಸ್ತೆಯನ್ನ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕ್ರಮಿಸುವಂತಾಯಿತು.



