ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ರಾಜಕೀಯ ನಾಯಕರು ಕೋಟ್ಯಂತರ ಹಣವನ್ನು ಕೊಳ್ಳೆ ಹೊಡೆಯುವ ಸಲುವಾಗಿಯೇ ಎತ್ತಿನಹೊಳೆ ಯೋಜನೆಯನ್ನು ರೂಪಿಸಿದ್ದು, ಇದರಿಂದ ಕರಾವಳಿ ಜನರೊಂದಿಗೆ ಕೋಲಾರದ ಜನೆತಯೂ ವಂಚನೆಗೊಳಗಾಗಲಿದ್ದಾರೆ ಎಂದು ಸಂಘಟನೆ ಸಲಹೆಗಾರ ರಹೀಂ ಉಚ್ಚಿಲ್ ಹೇಳಿದ್ದಾರೆ.
ಅವರು ಉಳ್ಳಾಲ ಸೈಯ್ಯದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ ಇದರ ವತಿಯಿಂದ ಎತ್ತಿನಹೊಳೆ ಯೋಜನೆಯನ್ನು ಕೈಬಿಡಲು ಆಗ್ರಹಿಸಿ ಶುಕ್ರವಾರ ಉಳ್ಳಾಲದ ಮಾಸ್ತಿಕಟ್ಟೆಯಿಂದ- ತೊಕ್ಕೊಟ್ಟು ಬಸ್ ನಿಲ್ದಾಣದವರೆಗೆ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಸೀದಿಯೊಳಗೆ ಕುಳಿತು ಧಾರ್ಮಿಕ ನಿಷ್ಠೆಯನ್ನು ಮಾತ್ರ ಪ್ರದರ್ಶಿಸದ ಸೆಂಟ್ರಲ್ ಕಮಿಟಿಯವರು ಸಾಮಾಜಿಕವಾಗಿ ಜನರ ಪರ ಹೋರಾಟಕ್ಕೆ ಮುಂದಾಗಿರುವುದು ಶ್ಲಾಘನೀಯ. ಪ್ರಕೃತಿ ಸೃಷ್ಟಿಯನ್ನು ಬದಲಿಸುವುದು ಇಸ್ಲಾಂ ವಿರೋಧಿ ನೀತಿ. ಸೃಷ್ಟಿ ವಿರೋಧದ ಯೋಜನೆಯನ್ನು ಮುಂದುವರಿಸದೆ ಎರಡು ಭಾಗದ ಜನರ ಹಿತಕ್ಕೆ ಸ್ಪಂಧಿಸುವ ಯೋಚನೆಯನ್ನು ಸರಕಾರ ಮಾಡಬೇಕಿದೆ. ಇಲ್ಲದಿದ್ದಲ್ಲಿ ಮುಂದೆ ತೀವ್ರ ಹೋರಾಟವನ್ನು ಎದುರಿಸಬೇಕಾದೀತು ಎಂದರು.
ಇನ್ನೋರ್ವ ಸಲಹೆಗಾರ ಹೈದರ್ ಪರ್ತಿಪ್ಪಾಡಿಯವರು ಮಾತನಾಡಿ ಜಿಲ್ಲೆಯ ಜನರ ಜೀವನದಿ ನೇತ್ರಾವತಿಗೆ ಉಗಮವಾಗುವ ಸ್ಥಳಕ್ಕೆ ಅಡ್ಡಕಟ್ಟುವುದು ಅನಾಹುತಗಳಿಗೆ ಕಾರಣವಾಗಿದೆ. ಇದರಿಂದ ಜನರು ಸಂಕಷ್ಟಕ್ಕೀಡಾಗುವುದರಲ್ಲಿ ಸಂಶಯವಿಲ್ಲ. ಅವೈಜ್ಞಾನಿಕವಾಗಿ ಸೃಷ್ಟಿಯನ್ನು ಬದಲಿಸಲು ಯೋಜನೆ ಮೂಲಕ ಸರಕಾರದ ಪ್ರತಿನಿಧಿಗಳು ಮುಂದಾಗಿರುವುದು ತರವಲ್ಲ. ದೇವರ ಸೃಷ್ಟಿಯನ್ನು ಬದಲಾಯಿಸಿ ಮಾನವನ ಜೀವನವನ್ನು ಹಾಳು ಮಾಡಲು ಹೊರಟಿರುವ ಜನಪ್ರತಿನಿಧಿಗಳು ತಮ್ಮ ರಾಜಕೀಯ ಭವಿಷ್ಯವನ್ನು ಯೋಚಿಸಬೇಕಿದೆ ಎಂದರು.
ಸೈಯ್ಯಿದ್ ಮದನಿ ಅರೆಬಿಕ್ ಕಾಲೇಜಿನ ಪ್ರೊಫೆಸರ್ ಅಹಮ್ಮದ್ ಬಾವಾ ಮುಸ್ಲಿಯಾರ್ ಕಾಲ್ನಡಿಗೆ ಜಾಥಾವನ್ನು ಉದ್ಘಾಟಿಸಿದರು.
ಈ ಸಂದರ್ಭ ಸಂಘದ ಸ¯ಹೆಗಾರ ಹೈದರ್ ಪರ್ತಿಪ್ಪಾಡಿ, ಅಧ್ಯಕ್ಷ ಯು.ಎ.ಹುಸೈನ್, ಅಬ್ದುಲ್ ರೆಹಮಾನ್, ರೆಹಮತ್ತುಲ್ಲಾ, ಉಪಾಧ್ಯಕ್ಷ ಮುಸ್ತಾಫ, ಅಬ್ದುಲ್ ಸತ್ತಾರ್, ಅಬ್ದುಲ್ ಲತೀಫ್ ಅಕ್ಕರೆಕೆರೆ ಉಪಸ್ಥಿತರಿದ್ದರು.

























