ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಗಲಾಟೆ , ಗಲಭೆಗಳಿಗೆ ಹೆಸರು ಕೆಡಿಸುತ್ತಿದ್ದ ಉಳ್ಳಾಲದಲ್ಲಿ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಮಂಗಳವಾರ ನಡೆದ ಪ್ರತಿಭಟನೆ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಿ ಇತಿಹಾಸವನ್ನು ಮರುಕಳಿಸಿತು. ನೇತ್ರಾವತಿ ಸೇತುವೆ ಇದಕ್ಕೆ ಸಾಕ್ಷಿಯಾಯಿತು.
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ದೊರೆತ ಹಲವು ವರ್ಷಗಳವರೆಗೂ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಜತೆಯಾಗಿಯೇ ವಾಸಿಸುತ್ತಿದ್ದ ಉಳ್ಳಾಲ ಪ್ರದೇಶ ಕ್ರಮೇಣ ರಾಜಕೀಯ ಪಕ್ಷಗಳು ಬಲವಾಗುತ್ತಿದ್ದಂತೆ ಸಾಮರಸ್ಯದ ವಾತಾವರಣವನ್ನು ಕೆಡಿಸಿತು. ಇದೀಗ ನೇತ್ರವಾತಿ ನದಿ ಹೆಸರಿನಲ್ಲಿ ನಡೆಯುತ್ತಿರುವ ಕ್ರಾಂತಿ ಜಾತಿ ವೈಷಮ್ಯದ ಕ್ರಾಂತಿಗೆ ಅಂತ್ಯದ ಸಂದೇಶ ಹಾಕುವುದರ ಮೂಲಕ ಇತಿಹಾಸವನ್ನು ಮರುಕಳಿಸಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯಗಳಿಂದ ಕೇಳಿಬಂದಿದೆ.
ಉಳ್ಳಾಲ ವಲಯ ನೇತ್ರಾವತಿ ಸಂರಕ್ಷಣಾ ಸಮಿತಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಎತ್ತಿನಹೊಳೆ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಹಮ್ಮಿಕೊಂಡ `ನೇತ್ರಾವತಿ ಸಂರಕ್ಷಣೆಗಾಗಿ ಸರ್ವಧರ್ಮ ಪ್ರಾರ್ಥನ ಕಾರ್ಯಕ್ರಮ’ದಲ್ಲಿ ಸಾವಿರಕ್ಕೂ ಮಿಕ್ಕಿ ಎಲ್ಲಾ ಜಾತಿಯ ಜನರು ಪಾಲ್ಗೊಳ್ಳುವ ಮೂಲಕ ಸಾಮರಸ್ಯದ ಬೀಜವನ್ನು ಬಿತ್ತಿದರು.
ತೊಕ್ಕೊಟ್ಟು ನೂತನ ಬಸ್ಸು ತಂಗುದಾಣದಿಂದ ಕಾಲ್ನಡಿಗೆ ಜಾಥಾ ಆರಂಭಗೊಂಡು ನೇತ್ರಾವತಿ ನದಿಯ ಸೇತುವೆಯವರೆಗೂ ಸಾಗಿ ಅಲ್ಲಿ ಪ್ರಾರ್ಥನಾ ಕಾರ್ಯಕ್ರಮ ಜರಗಿತು.
ಜಾಥಾದಲ್ಲಿ ಪಾಲ್ಗೊಂಡ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಚಿಕ್ಕಬಳ್ಳಾಪುರ, ಕೋಲಾರದಲ್ಲಿ ನೀರಿಲ್ಲದೆ ಪೌಷ್ಠಿಕಾಂಶದ ಕೊರತೆಯಿಂದ ಮಕ್ಕಳು ಸಾವನ್ನಪ್ಪುತ್ತಿದ್ದಾರೆ.ಅದೇ ದುಸ್ಥಿತಿಯನ್ನು ಜಿಲ್ಲೆಯ ಜನರು ಮುಂದಿನ ದಿನಗಳಲ್ಲಿ ಎದುರಿಸಬೇಕಾದೀತು. ಅವೈಜ್ಞಾನಿಕವಾದ ಎತ್ತಿನಹೊಳೆ ಯೋಜನೆ ಮೂಲಕ ಜಿಲ್ಲೆಯ ಅಂತರ್ಜಲವನ್ನೇ ಕಸಿಯಲು ಮುಂದಾಗಿರುವ ಜನಪ್ರತಿನಿಧಿಗಳು ಜೇಬು ತುಂಬಿಸುವ ಕೆಲಸದ ಮೂಲಕ ಘಟ್ಟದ ಮೇಲಿನ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ನ.1 ರಂದು ಕದ್ರಿ ದೇವಸ್ಥಾನದಲ್ಲಿ ಜನರಿಗೆ ಬೆಲ್ಲ ನೀರು ಕೊಡುವ ಮೂಲಕ ಹೋರಾಟ ಜೀವಂತವಾಗಿರುವಂತೆ ಹೆಚ್ಚು ಹೋರಾಟಗಾರರನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ತೊಕ್ಕೊಟ್ಟು ಅಲ್ ಫುರ್ಕಾನ್ ಅರೆಬಿಕ್ ಇನ್ ಸ್ಟಿ ಟ್ಯೂಟ್ ಇದರ ಪ್ರಾಂಶುಪಾಲ ಮೌಲಾನಾ ಯಹ್ಯಾ ತಂಙಳ್ ಮದನಿ ಮಾತನಾಡಿ ಭಯಾನಕ ವಾತಾವರಣದಲ್ಲಿ ಎಲ್ಲಾ ಧರ್ಮದವರು ಸೇರಿ ಒಗ್ಗಟ್ಟಾಗಿರುವುದು ಹೋರಾಟ ಯಶಸ್ವಿಯಾಗಲು ನಾಣ್ಣುಡಿ ಹಾಕಿದೆ. ಧರ್ಮಗ್ರಂಥಗಳಲ್ಲಿ ನೈಸರ್ಗಿಕ ಸೊತ್ತುಗಳನ್ನು ಹಾಳುಮಾಡುವುದು ತಪ್ಪು ಎಂಬ ಉಲ್ಲೇಖ ಇದೆ. ಜನಪ್ರತಿನಿಧಿಗಳು ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನ ತಾವು ಅವಲಂಬಿಸಿರುವ ಗ್ರಂಥದಲ್ಲಿ ಏನು ಹೇಳಿಕೆ ಇದೆ ಅನ್ನುವುದನ್ನು ತಿಳಿದುಕೊಳ್ಳಬೇಕಿದೆ . ಇದು ಬಡವರ ಹಕ್ಕು ಜನಪ್ರತಿನಿಧಿಗಳು ಹಿಂತಿರುಗಿ ನೋಡುವ ಮೂಲಕ ಯೋಜನೆಯನ್ನು ಹಿಂಪಡೆಯಬೇಕಿದೆ ಎಂದರು.
ಮಂಗಳೂರು ಧರ್ಮಪ್ರಾಂತ ದಕ್ಷಿಣ ವಲಯ ಡೀನ್ ಜಾನ್ ಬ್ಯಾಪ್ಟಿಸ್ ಡಿಸೋಜಾ ಮಾತನಾಡಿ ಪರಿಸರದ ಸಮಾನತೆ ಉಳಿಸಲು ಸಮಾನತೆಯ ಹೋರಾಟ ನಡೆದಿದೆ. ಸರಕಾರ ಯೋಜನೆಯನ್ನು ಕೈಬಿಡುವವರೆಗೂ ಹೋರಾಟ ಜೀವಂತವಾಗಿರಬೇಕಿದೆ. ಎಲ್ಲಾ ಉಪನದಿಗಳು ಸೇರಿ ಒಂದಾಗಿ ಹರಿಯುವ ನದಿ ನೀರಿನ ಒಗ್ಗಟ್ಟನ್ನು ಮುರಿಯಲು ಬಿಡಬಾರದು. ಎಲ್ಲರಲ್ಲೂ ಬಾಂಧವ್ಯ ಇದ್ದಲ್ಲಿ ನದಿ ಸಿಗುತ್ತದೆ. ಹೋರಾಟ ನಿರಂತರವಾಗಲಿ ಎಂದರು.
ಮಹಿಳಾ ಸಾರಥಿಯ ಚಾಲನೆಯಲ್ಲಿ ಸ್ತಬ್ಧಚಿತ್ರ: ನದಿ ತಿರುವು ಯೋಜನೆ ವಿರೋಧಿಸಿ ಹಮ್ಮಿಕೊಂಡ ಪ್ರಾರ್ಥನೆಯಲ್ಲಿ ಹೆಚ್ಚು ಮಹಿಳೆಯರೇ ಉಪಸ್ಥಿತರಿದ್ದರು. ಸರ್ವಧರ್ಮದ ಮಹಿಳೆಯರು, ಕ್ರೈಸ್ತ ಭಗಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನೇತ್ರಾವತಿಯನ್ನು ಆರಾಧಿಸುವ ಸ್ತಬ್ಧಚಿತ್ರದ ವಾಹನದ ಸಾರಥಿ ಮಹಿಳೆಯೇ ಆಗಿರುವುದು ಎಲ್ಲರನ್ನು ಆಕರ್ಷಿಸಿತ್ತು. ವಾಹನ ತರಬೇತಿ ಕೇಂದ್ರದ ಶಿಕ್ಷಕಿಯಾಗಿರುವ ತೊಕ್ಕೊಟ್ಟು ಒಳಪೇಟೆಯ ರೇಣುಕಾ ಅವರ ಟ್ರಕ್ ಚಾಲನೆ ಮಹಿಳೆಯರ ಹೊರಾಟಕ್ಕೆ ಹೆಚ್ಚಿನ ಬಲ ನೀಡಿತು. ಸ್ತಬ್ಧಚಿತ್ರವನ್ನು ಕಲಾವಿದ ಜೆ.ಪಿ ರಚಿಸಿದರೆ, ವಾಹನದ ವ್ಯವಸ್ಥೆಯನ್ನು ರೇಣುಕಾ ಅವರ ಪತಿ ಏಕನಾಥ ಮಾಡಿದ್ದರು.
ದೋಣಿ ಮೂಲಕ ಹೋರಾಟ: ನೇತ್ರಾವತಿ ನದಿ ನೀರಿನಲ್ಲಿಯೂ ದೋಣಿಯ ಮೂಲಕ ಕ್ರೈಸ್ತ ಸಮುದಾಯದವರು ಪ್ರತಿಭಟನೆಗೆ ಬೆಂಬಲ ನೀಡಿರುವುದು ಎಲ್ಲರ ಗಮನ ಸೆಳೆಯಿತು. ಆಡಂಕುದ್ರುವಿನಿಂದ ಎರಡು ನಾಡದೋಣಿಗಳಲ್ಲಿ 30 ಕ್ಕೂ ಅಧಿಕ ಮಂದಿ ಹೋರಾಟದ ಬ್ಯಾನರ್ ಗಳನ್ನು ಹಿಡಿದು ಸೇತುವೆಯಡಿ ನದಿ ನೀರಲ್ಲೇ ನಿಂತು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಶ್ರೀಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡು, ಶ್ರೀ ಭಗವತಿ ಕ್ಷೇತ್ರ ಉಳ್ಳಾಲ, ನಾಗಕನ್ನಿಕಾ ರಕ್ತೇಶ್ವರಿ ಕ್ಷೇತ್ರ ತೊಕ್ಕೊಟ್ಟು, ವಿಠೋಭ ರುಕ್ಮಯಿ ಮಂದಿರ ತೊಕ್ಕೊಟ್ಟು, ಗೌರಿಗಣೇಶ ಮಹಿಳಾ ಮಂಡಳಿ ತೊಕ್ಕೊಟ್ಟು, ಸಾರ್ವಜನಿಕ ಗಣೇಶೊತ್ಸವ ಸಮಿತಿ ಓವರ್ ಬ್ರಿಡ್ಜ್ ತೊಕ್ಕೊಟ್ಟು, ವಾಸುಕೀ ಸೇವಾ ಸಂಘ ತೊಕ್ಕೊಟ್ಟು, ವಿಶ್ವ ಹಿಂದೂ ಪರಿಷತ್ ಉಳ್ಳಾಲ ಪ್ರಖಂಡ, ಬಜರಂಗದಳ ಹಿಂದು ಪ್ರಖಂಡ, ಸೌತ್ ಕೆನರಾ ಟೈ¯ರ್ಸ್ ಅಸೋಸಿಯೇಷನ್, ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ತೊಕ್ಕೊಟ್ಟು, ವಾಹನ ಚಾಲಕ ಮತ್ತು ಮಾಲಕರ ಸಂಘ ತೊಕ್ಕೊಟ್ಟು, ವ್ಯಾಪಾರಸ್ಥರ ಸಂಘ ತೊಕ್ಕೊಟ್ಟು, ಎಬಿಸಿ ತೊಕ್ಕೊಟ್ಟು, ಕೇಸರಿ ಮಿತ್ರ ಮಂಳಿ ಕುಂಪಲ, ಸಂತ ಸೆಬೆಸತಿಯನ್ ದೇವಾಲಯ ಪೆರ್ಮನ್ನೂರು, ವಿದ್ಯಾ ಸಹಾಯಮಾತೆ ದೇವಾಲಯ ವಿದ್ಯಾಧರನಗರ, ವಿಶ್ವಮಾತೆ ದೇವಾಲಯ ರಾಣಿಪುರ, ದಯಾಮಾತೆ ದೇವಾಲಯ ಪಾನೀರು, ಸಂತ ಲಾರೆನ್ಸರ ದೇವಾಲಯ ತೌಡುಗೋಳಿ, ದಯಾಮಾತೆ ಫಜೀರು, ಸಂತ ಥೋಮಸರ ದೇವಾಲಯ ಸಜಿಪ, ಸಂತ ಲಾರೆನ್ಸರ ದೇವಾಲಯ, ಕೆಥೋಲಿಕ್ ಯುವಸಂಚಲನ , ಎಸ್ ಕೆಸ್ ಎಸ್ ಎಫ್, ಜಮಾಅತೆ ಇಸ್ಲಾಮಿ ಎಜ್ಯುಕೇಷನ್, ವಿಸ್ಡಂ ವೆಲ್ಫೇರ್ ಅಸೋಸಿಯೇಷನ್ ಮುಡಿಪು , ರೋಟರಿ ಮತ್ತು ಲಯನ್ಸ್ ಕ್ಲಬ್ ಉಳ್ಳಾಲ , ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ಮೊದಲಾದ ಸಂಘ ಸಂಸ್ಥೆಗಳು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿತ್ತು.
ಈ ಸಂದರ್ಭ ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ, ದಕ್ಷಿಣ ವಲಯ ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಫಾ.ಡೇನಿಸ್ ಮೋರಸ್ ಪ್ರಭು , ನೇತ್ರಾವತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಉಪಾಧ್ಯಕ್ಷ ಪೆಲಿಕ್ಸ್ ಮೊಂತೇರೊ, ಯು.ಅಬ್ದುಲ್ ಕರೀಂ, ಪ್ಲೇವಿ ಡಿಸೋಜ, ರಾಜೀವಿ ಕೆಂಪುಮಣ್ಣು, ರುಕ್ಸಾನಾ ಉಮರ್ , ಅಜಿತ್ ಕುಮಾರ್ ಉಳ್ಳಾಲ್, ಮಾಜಿ ಶಾಸಕ ಜಯರಾಮ ಶೆಟ್ಟಿ, ಜಿ.ಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ , ಅಣ್ಣಯ್ಯ ಕುಲಾಲ್, ಯೋಗೀಶ್ ಶೆಟ್ಟಿ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು.










