ಮಂಗಳೂರು;ಕoಬಳ ಕ್ರೀಡೆ ಕೇವಲ ಕರಾವಳಿಯ ಜಾನಪದ ಕ್ರೀಡೆ ಮಾತ್ರವಲ್ಲ. ಇದೊಂದು ಕರಾವಳಿಯ ಘನತೆ, ಪ್ರತಿಷ್ಠೆಯ ಪ್ರತಿಬಿಂಬ. ಅಂತಹ ಕಂಬಳದ ಮೇಲೆ ಈ ಬಾರಿ ಜಿಲ್ಲಾಡಳಿತದ ವಿವಿಧ ಇಲಾಖೆಗಳು ಹದ್ದಿನ ಕಣ್ಣು ಇಟ್ಟಿವೆ. ಪ್ರತೀ ಶನಿವಾರ/ರವಿವಾರ ನಡೆಯುತ್ತಿರುವ ಕಂಬಳದ ಸ್ಥಳಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳೇ ಖುದ್ದು ಹಾಜರಾಗಿ ವರದಿ ರೆಡಿ ಮಾಡುತ್ತಿದ್ದಾರೆ.

“ಕಂಬಳದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ’ ಎಂಬ ಆರೋಪ ಇಟ್ಟುಕೊಂಡು ಈ ಹಿಂದೆ ಪೆಟಾ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೀಗಾಗಿ ಯಾವುದೇ ಹಿಂಸೆ ಆಗದಂತೆ ಎಚ್ಚರ ವಹಿಸುವಂತೆ ನ್ಯಾಯಾಲಯ ಸೂಚಿಸಿದ ಆಧಾರದಲ್ಲಿ ಸದ್ಯ ಕಂಬಳಗಳು ಯಶಸ್ವಿಯಾಗಿ ನಡೆಯುತ್ತಿವೆ. ಈ ಋತುವಿನಲ್ಲಿ 3 ಕಂಬಳಗಳು ನಿಯಮ ಹಾಗೂ ಸಮಯಬದ್ಧವಾಗಿ ನಡೆದಿದೆ.

ಪ್ರಸಕ್ತ ನಡೆಯುತ್ತಿರುವ ಎಲ್ಲ ಕಂಬಳಗಳಿಗೆ ಪೊಲೀನ್, ಪಶುಪಾಲನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ವರದಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಿದ್ದಾರೆ. ಬೆಟ್ಟಿಂಗ್ ಸಹಿತ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತಿದ್ದು, 3 ವರ್ಷದ ಒಳಗಿನ ಕೋಣಗಳ ಓಟ ನಡೆಸದಂತೆ ಹಾಗೂ ಯಾವುದೇ ಕೋಣಗಳಿಗೆ ಹಿಂಸೆ ಆಗದಂತೆ ನೋಡಿಕೊಳ್ಳಲು ಪಶುಪಾಲನ ಇಲಾಖೆ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ. ಸ್ಥಳದಲ್ಲಿ ಇತರ ಯಾವುದೇ ನಿಯಮಾವಳಿ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ತಹಶೀಲ್ದಾರ್ ಅಧೀನದ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸುತ್ತಿದ್ದಾರೆ.
ಕಂಬಳ ಅಸೋಸಿಯೇಶನ್ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ “ಉದಯವಾಣಿ’ ಜತೆಗೆ ಮಾತನಾಡಿ ‘ಕಂಬಳಕ್ಕೆ ಯಾವುದೇ ಕಾರಣಕ್ಕೂ ಮುಂದೆ ಸಮಸ್ಯೆ ಆಗಬಾರದು ಎಂಬ ನೆಲೆಯಲ್ಲಿ ಸರ್ವರೂ ಅತ್ಯಂತ ಎಚ್ಚರಿಕೆಯಿಂದ ಉಸ್ತುವಾರಿ ನೋಡಿಕೊಳ್ಳುತ್ತಿದ್ದೇವೆ. ಯಾವುದೇ ಸಮಸ್ಯೆ ಆದರೂ ಕಂಬಳಕ್ಕೆ ಮತ್ತೆ ನಿಷೇಧದ ತೂಗುಗತ್ತಿ ಎದುರಾಗಲೂ ಬಹುದು. ಅದಕ್ಕೆ ನಾವು ಕಾರಣರಾಗಬಾರದು. ನಿಗದಿತ ಸಮಯಕ್ಕೆ ಕಂಬಳ ಆಯೋಜಿಸಿ ಯಾವುದೇ ಹಿಂಸೆ ಇಲ್ಲದೆ ಕೋಗಾಗಳ ಓಟದ ಗತ್ತು ನೋಡುವ ಭಾಗ್ಯ ಎಲ್ಲರಿಗೂ ದೊರೆಯುವಂತಾಗಬೇಕು” ಎಂದರು.
`ಮೈಕ್ ಬಹುತೇಕ ಬಂದ್..!’
ರಾತ್ರಿ ಹಗಲು ಕಂಬಳ ಆಯೋಜನೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ರಾತ್ರಿ 10.30 ಗಂಟೆಯ ಬಳಿಕ ಮುಂಜಾನೆದರೆಗೆ ದೊಡ್ಡ ಮಟ್ಟದಲ್ಲಿ ಧ್ವನಿವರ್ಧಕ ಬಳಕೆಯಾಗುತ್ತಿಲ್ಲ ಕಂಬಳ ಆಯೋಜನೆ ಆಗುವ ಪರಿಸರದ ನಿವಾಸಿಗಳಿಗೆ ಯಾವುದೇ ಸಮಸ್ಯೆ/ಆಕ್ಷೇಪ ಆಗದಂತೆ ಎಚ್ಚರ ವಹಿಸುತ್ತ ರಾತ್ರಿ 10:30ರ ಬಳಿಕ ಕೇವಲ ಕಂಬಳ ಕರೆಯಲ್ಲಿ ಮಾತ್ರ ಸಣ್ಣ ಸ್ವರದೊಂದಿಗೆ ಮೈಕ್ ಬಳಕೆ ಸದ್ಯ ನಡೆಯುತ್ತಿದೆ. ಉಳಿದಂತೆ ವೇದಿಕೆ ಸಹಿತ ಇತರ ಭಾಗದಲ್ಲಿ ಬಳಕೆಯಾಗುವ ಧ್ವನಿವರ್ಧಕ ಸಂಪೂರ್ಣ ಬಂದ್ ಮಾಡಲಾಗುತ್ತಿದೆ ಎಂದು ಕಂಬಳ ಸಂಘಟಕರು ತಿಳಿಸಿದ್ದಾರೆ.
`ಪ್ರತೀ ಕಂಬಳದಲ್ಲಿಯೂ ಪರಿಶೀಲನೆ’
ಕಂಬಳದಲ್ಲಿ ಕೋಣಗಳಿಗೆ ಯಾವುದೇ ಕಾರಣಕ್ಕೂ ಹಿಂಸೆ ಮಾಡಬಾರದು. ಜತೆಗೆ 3 ವರ್ಷದ ಒಳಗಿನ ಕೋಣಗಳ ಓಟಕ್ಕೆ ಅವಕಾಶ ಇಲ್ಲ. ಇದೆಲ್ಲ ಅಂಶಗಳ ಬಗ್ಗೆ ಇಲಾಖೆಯ ಸಿಬಂದಿ ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಾರೆ. ಜತೆಗೆ ಇಲಾಖೆಯ ವೈದ್ಯಾಧಿಕಾರಿಗಳು ಸ್ಥಳದಲ್ಲಿದ್ದು ತುರ್ತು ಚಿಕಿತ್ಸೆಗೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ ಎಂದು ದ.ಕ. ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ| ಅರುಣ್ ಕುಮಾರ್ ಹೇಳಿದರು.
ಕಂಬಳವನ್ನು ನಿಯಮ ಹಾಗೂ ಕಾನೂನುಬದ್ದವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಕಂಬಳ ಆಯೋಜಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಿಗದಿತ ಸಮಯದಲ್ಲಿ ಕಂಬಳ ಪೂರ್ಣಗೊಳಿಸುವುದು, ಸಬ್ ಜೂನಿಯರ್ಕೋಣಗಳ ಸ್ಪರ್ಧೆ ಸ್ಥಗಿತ ಹಾಗೂ ಕೋಣಗಳಿಗೆ ಯಾವುದೇ ಕಾರಣಕ್ಕೂ ಹಿಂದೆ ಆಗದಂತೆ ಅತ್ಯಂತ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಸರಕಾರದ ಇಲಾಖೆಗಳು ಕೂಡ ಇದರ ಬಗ್ಗೆ ನಿಗಾ ವಹಿಸಿದೆ ಎಂದು ಕಂಬಳ ಅಸೋಸಿಯೇಶನ್ ಅಧ್ಯಕ್ಷರಾದ ಐಕಳ ಬಾವ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು.




