ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಮೂಲಕ ಆಯೋಜಿಸಲಾದ “ವೇವ್ಸ್ 2025 – ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ” ನವೆಂಬರ್ 25ರಿಂದ 27ರ ವರೆಗೆ ಮಂಗಳಗಂಗೋತ್ರಿಯಲ್ಲಿ ಜರುಗಲಿದೆ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರಾದ ಪ್ರೊ. ಪ್ರಶಾಂತ್ ನಾಯ್ಕ್ ತಿಳಿಸಿದರು.

ಅವರು ಉಳ್ಳಾಲ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ವರ್ಷದ ಉತ್ಸವದ ವಿಷಯ “ಸಾಂಸ್ಕೃತಿಕ ಸಂಯೋಜನೆ 2025: ವಿಕಸಿತ ಭಾರತದತ್ತ” ಆಗಿದ್ದು, ಭಾರತೀಯ ವಿಶ್ವವಿದ್ಯಾಲಯಗಳ ಸಂಘಟನೆಯ (ಎ ಐ ಯು ) ನವದೆಹಲಿ ಆಶ್ರಯದಲ್ಲಿ ನಡೆಯುವ ಎ ಐ ಯು39ನೇ ಅಂತರ-ವಿಶ್ವವಿದ್ಯಾಲಯ ಯುವೋತ್ಸವ (ಯುನಿಫೆಸ್ಟ್) 2025–26ಕ್ಕೆ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆಮಾಡುವುದು ಇದರ ಪ್ರಮುಖ ಉದ್ದೇಶವೆಂದರು.
ನವೆಂಬರ್ 25ರಂದು ಬೆಳಿಗ್ಗೆ 9:30ಕ್ಕೆ ಮಂಗಳಾ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಲಿದ್ದು, ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ರಾಜಕೀಯ ವಿಜ್ಞಾನ ಪ್ರಾಧ್ಯಾಪಕಿ ಡಾ. ಶಾನಿ ಕೆ.ಆರ್. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮೂರು ದಿನ ನಡೆಯುವ ಈ ಉತ್ಸವದಲ್ಲಿ ಸಂಗೀತ, ನೃತ್ಯ, ಸಾಹಿತ್ಯ, ರಂಗಭೂಮಿ ಹಾಗೂ ಲಲಿತಕಲೆ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ಇರಲಿವೆ. ಶಾಸ್ತ್ರೀಯ ಮತ್ತು ಪಾಶ್ಚಾತ್ಯ ವಾದ್ಯ/ಸ್ವರ, ಜನಪದ ನೃತ್ಯ, ಸೃಜನಾತ್ಮಕ ನೃತ್ಯ ನಿರ್ದೇಶನ, ಚರ್ಚೆ, ಭಾಷಣ, ರಸಪ್ರಶ್ನೆ, ಏಕಾಂಕ ಮತ್ತು ಕಿರು ನಾಟಕ, ಮೂಕಾಭಿನಯ, ಹಾಸ್ಯಾನುಕರಣ, ಚಿತ್ರಕಲೆ, ಕೊಲಾಜ್, ಪೋಸ್ಟರ್ ನಿರ್ಮಾಣ, ಮಣ್ಣಿನ ಶಿಲ್ಪ, ವ್ಯಂಗ್ಯಚಿತ್ರ, ರಂಗೋಲಿ ಸೇರಿದಂತೆ ಅನೇಕ ಸ್ಪರ್ಧೆಗಳು ಆಯೋಜಿಸಲ್ಪಡಲಿವೆ.
ಈ ಉತ್ಸವವು ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ಪೋಷಿಸುವುದರ ಜೊತೆಗೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ವೇದಿಕೆಗಳಿಗೆ ಮುನ್ನಡೆಸುವ ಮಹತ್ವದ ಅವಕಾಶ ಒದಗಿಸುತ್ತದೆ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯ ಆರಂಭದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಪರಂಪರೆಯನ್ನು ಮುಂದುವರಿಸಿರುವುದಾಗಿ ಹೇಳಿದರು. ವೇವ್ಸ್ 2025ರಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ, 2026ರ ಫೆಬ್ರವರಿ 9ರಿಂದ 13ರ ವರೆಗೆ ಮೈಸೂರಿನ ಜಿಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ನಲ್ಲಿ ನಡೆಯುವ ಎ ಐ ಯುದಕ್ಷಿಣ-ಪೂರ್ವ ವಲಯ ಅಂತರ-ವಿಶ್ವವಿದ್ಯಾಲಯ ಯುವೋತ್ಸವದಲ್ಲಿ ಭಾಗವಹಿಸುವ ಅವಕಾಶ ದೊರಕಲಿದೆ. ವಲಯ ಮಟ್ಟದಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ 2026ರ ಮಾರ್ಚ್ 10ರಿಂದ 14ರ ವರೆಗೆ ಚೆನ್ನೈಯ ಸಥ್ಯಭಾಮಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ನಡೆಯುವ ಎ ಐ ಯು ರಾಷ್ಟ್ರೀಯ ಯುನಿಫೆಸ್ಟ್ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಅವಕಾಶ ಸಿಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ, ಡಾ. ವಿಶ್ವನಾಥ್, ಮತ್ತು ಪ್ರಚಾರ ಸಮಿತಿಯ ಸದಸ್ಯ, ಪತ್ರಕರ್ತ ಡಾ. ಸತೀಶ್ ಕೊಣಾಜೆ ಉಪಸ್ಥಿತರಿದ್ದರು.



