ಕುಂಪಲ : ಪ್ರಾಣಿ ದಾಳಿಯಿಂದ ಕುಂಪಲ ಮೂರುಕಟ್ಟೆ ನಿವಾಸಿ ದಿ| ರಾಮ ಗಟ್ಟಿ ಎಂಬವರ ಪುತ್ರ ದಯಾನಂದ (60) ಮೃತಪಟ್ಟಿರುವುದಾಗಿ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಫಾರೆನ್ಸಿಕ್ ವೈದ್ಯರು ಇದು ಪ್ರಾಣಿ ದಾಳಿಯಿಂದಾದ ಸಾವೇ ಎಂಬುದನ್ನು ದೃಢಪಡಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ ಕುಂಪಲ ಬೈಪಾಸ್ ಪ್ರದೇಶದ ಮನೆಯೊಂದರ ಅಂಗಳದಲ್ಲಿ ರಕ್ತದ ಮಡುವಿನಲ್ಲಿ ದಯಾನಂದ ಮೃತದೇಹಪತ್ತೆಯಾಗಿತ್ತು. ಸ್ಥಳದಲ್ಲಿ ರಕ್ತದ ಗುರುತುಗಳು ಕಂಡುಬಂದಿದ್ದು, ಸುಮಾರು ಬೆಳಿಗ್ಗೆ 3 ಗಂಟೆಯ ವೇಳೆ ಅವರು ಅಲ್ಲಿ ನಡೆದು ಹೋಗುತ್ತಿರುವುದನ್ನು ಸ್ಥಳೀಯರು ನೋಡಿದ್ದಾಗಿ ತಿಳಿಸಿದ್ದಾರೆ. ಫಾರೆನ್ಸಿಕ್ ತಂಡ ಹತ್ತಿರ ಕಂಡುಬಂದ ಗಾಯಗಳಿಂದ ಪ್ರಾಥಮಿಕವಾಗಿ ಪ್ರಾಣಿ ದಾಳಿ ಶಂಕೆ ವ್ಯಕ್ತವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಫಾರೆನ್ಸಿಕ್ ವೈದ್ಯರು ಇದು ಪ್ರಾಣಿ ದಾಳಿಯಿಂದಾದ ಸಾವೇ ಎಂಬುದನ್ನು ದೃಢಪಡಿಸಿದ್ದಾರೆ. ಇದೇ ವೇಳೆ, ರಕ್ತ ಬಾಯಿಗೆ ತಗುಲಿರುವಂತೆ ಕಾಣುತ್ತಿದ್ದ ನಾಯಿಯೊಂದು ಅಲೆದಾಡಿರುವುದನ್ನು ಕೆಲವರು ಗಮನಿಸಿದ್ದಾಗಿ ತಿಳಿದುಬಂದಿದೆ. ನಾಯಿಯನ್ನು ಪ್ರಾಣಿ ದಯಾ ಸಂಘದ ಮೂಲಕ ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, ಈ ಸಂಬಂಧ ಯು.ಡಿ.ಆರ್. ಕೇಸ್ ದಾಖಲಿಸಲಾಗುವುದು ಹಾಗೂ ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಎಫ್ಎಸ್ಎಲ್ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಅಗತ್ಯವಾದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.



