ಮಂಗಳೂರು : ಬಸ್ ಸಿಬ್ಬಂದಿಗೆ ಒಗ್ಗಟ್ಟನ್ನು ಬೆಳೆಸುವ ನಿಟ್ಟಿನಲ್ಲಿ “ರಾಜಲಕ್ಷ್ಮೀ ಚಾಂಪಿಯನ್ಸ್ ಟ್ರೋಫಿ” ಎಂಬ ಕ್ರೀಡಾ ಕೂಟವನ್ನು ಎರಡು ದಿನಗಳ ಕಾಲ ಭವ್ಯವಾಗಿ ಆಯೋಜಿಸಿರುವ ರಾಜಲಕ್ಷ್ಮೀ ಟ್ರಾವೆಲ್ಸ್ ಬಸ್ ಮಾಲೀಕರ ವಿಭಿನ್ನ ಪ್ರಯತ್ನಕ್ಕೆ ಬಸ್ ಸಿಬ್ಬಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನವನ್ನು ಸಾಗಿಸುವಲ್ಲಿ ಖಾಸಗಿ ಬಸ್ಸುಗಳ ಪಾತ್ರ ಅಪಾರ. ಪ್ರತಿಯೊಂದು ಹಳ್ಳಿಗೂ, ಪಟ್ಟಣಕ್ಕೂ, ಮಂಗಳೂರು ನಗರಕ್ಕೂ ಬಸ್ಗಳು ಜೀವನಾಡಿಯಂತಿವೆ. ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ, ದಿನನಿತ್ಯದ ಸಂಚಾರ – ಎಲ್ಲವೂ ಬಹುಮಟ್ಟಿಗೆ ಈ ಬಸ್ಗಳ ಮೇಲೆ ಅವಲಂಬಿತವಾಗಿದೆ. ಬಸ್ಸಿನ ಚಕ್ರ ತಿರುಗದಿದ್ದರೆ ಅನೇಕರ ಬದುಕೇ ಅಸ್ತವ್ಯಸ್ತವಾಗುತ್ತದೆ ಎಂದು ಹೇಳುವುದು ಅತಿರಂಜಿತವಲ್ಲ.
ಇಂತಹ ಬಸ್ ಸೇವೆಯ ಹಿಂದೆ ಸಾವಿರಾರು ಕುಟುಂಬಗಳ ಬೆವರಿನ ಕಷ್ಟ, ಶ್ರಮ ಮತ್ತು ತ್ಯಾಗ ಅಡಗಿದೆ. ನಿರಂತರ ಒತ್ತಡದ ಕೆಲಸ, ಬೆಳಗ್ಗೆಯಿಂದ ರಾತ್ರಿ ವರೆಗೆ ಹೊರೆ ತುಂಬಿದ ಸೇವೆ, ವಾಹನ ಸಂಚಾರದ ಜಟಿಲತೆ, ಪ್ರಯಾಣಿಕರ ನಿರೀಕ್ಷೆ – ಇವೆಲ್ಲದರ ನಡುವೆ ಬಸ್ ಚಾಲಕರು ಮತ್ತು ನಿರ್ವಾಹಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಳಿವಯಸ್ಸಿನಲ್ಲಿ ಬಿ.ಪಿ., ಶುಗರ್ ಮುಂತಾದ ಅನಾರೋಗ್ಯಗಳನ್ನು ಮೈಗೂಡಿಸಿಕೊಂಡವರ ಸಂಖ್ಯೆಯೂ ಕಡಿಮೆ ಇಲ್ಲ. ಈ ಎಲ್ಲಾ ಒತ್ತಡಗಳ ನಡುವೆಯೂ ಅವರು ತಮ್ಮ ಹೊಟ್ಟೆಪಾಡಿಗಾಗಿ ಪ್ರತಿದಿನ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.
ಆದರೆ, ಕೆಲವೊಮ್ಮೆ ಬಸ್ ಟೈಮಿಂಗ್ ವಿಚಾರಗಳಲ್ಲಿ, ದೈನಂದಿನ ಕಾರ್ಯಪದ್ಧತಿಗಳಲ್ಲಿ ಸಣ್ಣಪುಟ್ಟ ವೈಮನಸ್ಸುಗಳು ಮೂಡಿ ಬರುತ್ತವೆ. ಇಂತಹ ಸಂದರ್ಭಗಳಲ್ಲಿ ಒಗ್ಗಟ್ಟು, ಪರಸ್ಪರ ಗೌರವ ಮತ್ತು ಸಹಕಾರವನ್ನು ಬೆಳೆಸುವುದು ಅತ್ಯವಶ್ಯಕ. “ನಾವು ಎಲ್ಲರೂ ಜಾತಿ-ಧರ್ಮದ ಬೇಧವಿಲ್ಲದೆ, ಬದುಕು ಸಾಗಿಸಲು ದುಡಿಯುವ ಸಹೋದರರು” ಎಂಬ ಭಾವನೆಗೆ ಬಲ ತುಂಬುವ ನಿಟ್ಟಿನಲ್ಲಿ, ಮಂಗಳೂರು ನಗರಕ್ಕೆ ಬರುವ ಅನೇಕ ಬಸ್ಸುಗಳ ಒಡೆಯರಾಗಿರುವ ಹೃದಯವಂತ ರಾಜಲಕ್ಷ್ಮೀ ಬಸ್ಸು ಮಾಲೀಕ ನರೇಶ್ ಪೂಜಾರಿ ಮತ್ತು ಅವರ ಪುತ್ರ ಪ್ರತೀಕ್ ವಿಭಿನ್ನ ಚಿಂತನೆ ತಂದುಕೊಟ್ಟಿದ್ದಾರೆ.
ಅವರು ಬಸ್ ಸಿಬ್ಬಂದಿಗೆ ಒಗ್ಗಟ್ಟನ್ನು ಬೆಳೆಸುವ ನಿಟ್ಟಿನಲ್ಲಿ “ರಾಜಲಕ್ಷ್ಮೀ ಚಾಂಪಿಯನ್ಸ್ ಟ್ರೋಫಿ” ಎಂಬ ಕ್ರೀಡಾ ಕೂಟವನ್ನು ಎರಡು ದಿನಗಳ ಕಾಲ ಭವ್ಯವಾಗಿ ಆಯೋಜಿಸಿದರು. ಈ ಸಂದರ್ಭದಲ್ಲಿ ಬಸ್ ನೌಕರರು ತಮ್ಮ ಕರ್ತವ್ಯ ಒತ್ತಡವನ್ನು ಮರೆತು ಮೈದಾನದಲ್ಲಿ ಬೆವರಿಳಿಸಿದರು, ಕ್ರೀಡೆಯ ಮೂಲಕ ಸ್ನೇಹ, ಬಾಂಧವ್ಯವನ್ನು ಕಟ್ಟಿಕೊಂಡರು.
ಇದಲ್ಲದೆ, ನರೇಶ್ ಪೂಜಾರಿ ಅವರ ಸ್ವಭಾವವೇ ಅಸಾಧಾರಣ. ಅವರು ಕೇವಲ ಬಸ್ ಮಾಲೀಕರಾಗಿಯೇ ನಿಲ್ಲದೇ, ನೌಕರರೊಂದಿಗೆ ತಂಡದ ಜೆರ್ಸಿ ಧರಿಸಿ ಮೈದಾನಕ್ಕಿಳಿದು ಆಟವಾಡಿದರು. “ನಾನು ಕೂಡಾ ನಿಮ್ಮಂತೆಯೇ ಸಾಮಾನ್ಯನೊಬ್ಬ” ಎಂಬ ಸಂದೇಶವನ್ನು ತಮ್ಮ ನಡೆನುಡಿಗಳ ಮೂಲಕ ಹಂಚಿಕೊಂಡರು. ನೌಕರರೊಂದಿಗೆ ಬೆರೆತು ಅವರ ನೋವು–ಸಂತೋಷಗಳಲ್ಲಿ ಪಾಲ್ಗೊಂಡ ಈ ರೀತಿಯ ನಡವಳಿಕೆ ನಿಜಕ್ಕೂ ಪ್ರೇರಣಾದಾಯಕವಾಗಿದೆ.
ರಾಜಲಕ್ಷ್ಮೀ ಬಸ್ಸು ಕುಟುಂಬದ ಈ ಉಪಕ್ರಮವು ಬಸ್ ಸಿಬ್ಬಂದಿಯ ಜೀವನದಲ್ಲಿ ಹೊಸ ಉತ್ಸಾಹ ತುಂಬಿದ್ದು, ಪರಸ್ಪರ ಒಗ್ಗಟ್ಟು ಹಾಗೂ ಸ್ನೇಹಾಭಾವವನ್ನು ಗಾಢಗೊಳಿಸಿದೆ. ಮಂಗಳೂರು ಖಾಸಗಿ ಬಸ್ ಜಗತ್ತಿನಲ್ಲಿ ಇದು ಮಾದರಿಯ ಉದಾಹರಣೆಯಾಗಿದೆ.

ಪಂದ್ಯಾಟ ಕುರಿತು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ ಮಂಗಳೂರು ಇದರ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ಅಭಿಪ್ರಾಯ ವ್ಯಕ್ತಪಡಿಸಿ, ರಾಜಲಕ್ಷ್ಮಿ ಮಂಗಳಾದೇವಿ ತಂಡದವರ ವತಿಯಿಂದ ಏರ್ಪಡಿಸಿದ ಈ ಎರಡು ದಿನಗಳ ಕ್ರಿಕೆಟ್ ಪಂದ್ಯಕೂಟದಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದು, ಎಲ್ಲಾ ಪಂದ್ಯಗಳು ಅತ್ಯಂತ ಸ್ಫೂರ್ತಿದಾಯಕವಾಗಿ ನಡೆದವು. ಮೊದಲ ದಿನ ನಮ್ಮ ದೇರಳಕಟ್ಟೆ ಅಟ್ಯಾಕರ್ಸ್ ತಂಡವೂ ಕಣಕ್ಕಿಳಿದು ಉತ್ಸಾಹ ತುಂಬಿತು. ಎರಡನೇ ದಿನ ನಮ್ಮ ಪಂದ್ಯವಿಲ್ಲದಿದ್ದರೂ ನಾನು ಹಾಜರಾಗಿ ಎಲ್ಲಾ ತಂಡಗಳ ಜೊತೆಗೆ ಕೂಡಿ ಆನಂದಿಸಿದೆ. ಈ ಕೂಟದಲ್ಲಿ ನನಗೆ ಹೆಚ್ಚು ಮನಸಿಗೆ ಹತ್ತಿದ ಅಂಶ ಎಂದರೆ ರಾಜಲಕ್ಷ್ಮಿ ಬಸ್ಸಿನ ಮಾಲಕರಾದ ನರೇಶ್ ಪೂಜಾರಿ ಅವರ ನಡವಳಿಕೆ. ಬಸ್ ನೌಕರರ ಜೊತೆಗೇ ತಮ್ಮ ತಂಡದ ಜೆರ್ಸಿ ಧರಿಸಿ ಮೈದಾನದಲ್ಲಿ ಓಡಾಡಿ ಬೆರೆತು ಹೋದ ರೀತಿಯು ನಿಜಕ್ಕೂ ಪ್ರೇರಣಾದಾಯಕ. “ನಾನು ಕೂಡಾ ನಿಮ್ಮಂತೆಯೇ ಸಾಮಾನ್ಯನೊಬ್ಬ” ಎನ್ನುವ ಸಂದೇಶವನ್ನು ತಮ್ಮ ನಡೆ-ನುಡಿಗಳ ಮೂಲಕ ಅವರು ಸಾರಿದರು. ಅದರ ಜೊತೆಗೆ ನನ್ನನ್ನು ವೇದಿಕೆಗೆ ಆಹ್ವಾನಿಸಿ, ಬಸ್ ನೌಕರರ ಪರವಾಗಿ ಗೌರವ ಸಲ್ಲಿಸಿದ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದ ಅನುಭವವಾಯಿತು. ಮಾಲಕರಾದ ನರೇಶ್ ಪೂಜಾರಿ, ಅವರ ಪುತ್ರ ಪ್ರತೀಕ್, ಹಾಗೂ ಕುಟುಂಬದ ಇತರೆ ಸದಸ್ಯರು ಇಬ್ಬರು ದಿನಗಳ ಕಾಲ ತಮ್ಮ ಸಮಯ, ಶ್ರಮ, ಮತ್ತು ಹೃದಯವನ್ನೇ ಮುಡಿಪಾಗಿಟ್ಟು ಬಸ್ ನೌಕರರ ಕ್ರೀಡಾ ಕೂಟವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದರು. ನಿಜಕ್ಕೂ ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ. ಬಸ್ ನೌಕರರ ನಡುವಿನ ಸೌಹಾರ್ದ, ಒಗ್ಗಟ್ಟು ಮತ್ತು ಸ್ನೇಹವನ್ನು ಬೆಳೆಸುವಂತಹ ಈ ಕ್ರೀಡಾ ಕೂಟಕ್ಕೆ ರಾಜಲಕ್ಷ್ಮಿ ತಂಡ ನೀಡಿದ ಕೊಡುಗೆ ಅಪಾರ. ಇದು ಕೇವಲ ಕ್ರಿಕೆಟ್ ಪಂದ್ಯವಲ್ಲ; ನೌಕರರ ನಡುವೆ ಕುಟುಂಬದಂತೆ ಬಂಧವನ್ನು ಗಟ್ಟಿಗೊಳಿಸಿದ ಮಹತ್ವದ ಕೂಟ. ಇದೇ ಸಂದರ್ಭದಲ್ಲಿ ಬಸ್ ನೌಕರರೂ, ರಾಜಲಕ್ಷ್ಮಿ ತಂಡದ ನಾಯಕರೂ ಆದ ಶ್ರಜನ್, ಬಶೀರ್ ಹಾಗೂ ಎಲ್ಲಾ ತಂಡದ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು. ಅದೇ ರೀತಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲಾ ತಂಡದ ಆಟಗಾರರನ್ನು ಅಭಿನಂದಿಸುತ್ತೇನೆ. ಇಂತಹ ಹೃದಯಂಗಮ ಕಾರ್ಯಕ್ರಮವನ್ನು ಏರ್ಪಡಿಸಿದ ರಾಜಲಕ್ಷ್ಮಿ ಬಸ್ಸಿನ ಮಾಲಕರಾದ ನರೇಶ್ ಪೂಜಾರಿ, ಅವರ ಪುತ್ರ ಪ್ರತೀಕ್ ಮತ್ತು ಕುಟುಂಬದವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

