ಕೊಣಾಜೆ : ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ ಆಶ್ರಯದಲ್ಲಿ ಕೊಣಾಜೆ ಮಂಗಳೂರು ವಿಶ್ವವಿದ್ಯಾಲಯದ ಒಳಾಂಗಣ ಸಭಾಂಗಣದಲ್ಲಿ ಅಕ್ಟೋಬರ್ 19ರಂದು ನಡೆಯಲಿರುವ ಯುವವಾಹಿನಿ ಅಂತರ್ ಘಟಕದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಪ್ರಯುಕ್ತ ಗುರುವಾರ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಶೀರ್ಷಿಕೆ ಗೀತೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ವಿಜೇತ್ ಪಜೀರ್ ಅವರು “ಗ್ರಾಮೀಣ ಭಾಗದ ಪ್ರತಿಭೆಗಳಿಂದಲೇ ಶೀರ್ಷಿಕೆ ಗೀತೆ ರಚನೆಗೊಂಡಿದೆ, ಯುವ ಪ್ರತಿಭೆಗಳು ಸಂಘದಲ್ಲೇ ಇರುವುದು ಇನ್ನಷ್ಟು ಹೆಮ್ಮೆಯ ವಿಚಾರ”, ಈ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳಗಲು ಸರ್ವರ ಪ್ರೋತ್ಸಾಹ ಅಗತ್ಯ ಎಂದರು.
ಚಿತ್ರನಟ ದೀಕ್ಷಿತ್ ಕೆ.ಅಂಡಿಂಜೆ ಶೀರ್ಷಿಕೆ ಗೀತೆ ಬಿಡುಗಡೆಗೊಳಿಸಿ, ಶೀರ್ಷಿಕೆ ಗೀತೆ ಸುಂದರವಾಗಿ ಮೂಡಿಬಂದಿದೆ, ಅದೇ ರೀತಿ ಬ್ಯಾಡ್ಮಿಂಟನ್ ಪಂದ್ಯಾಟವೂ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಶೀರ್ಷಿಕೆ ಗೀತೆ ಹಾಡಿದ ರಕ್ಷಿತ್ ಕೆ.ಅಸೈಗೋಳಿ, ಶ್ರೀರಕ್ಷಾ ಎಸ್.ಎಚ್. ಪೂಜಾರಿ ಕೊಣಾಜೆ ಮತ್ತು ಸಾಂಸ್ಕೃತಿಕ ನಿರ್ದೇಶಕಿ ಪೂರ್ಣಿಮಾ ಪಜೀರ್ ಇವರನ್ನು ಅಭಿನಂದಿಸಲಾಯಿತು.
ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ ಅಧ್ಯಕ್ಷ ಬಾಬು ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ, ಒಂದನೇ ಉಪಾಧ್ಯಕ್ಷ ಮುರಳೀಧರ್ ಕೊಣಾಜೆ, ಕೋಶಾಧಿಕಾರಿ ಅಜಿತ್ ತಾರಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಯುವವಾಹಿನಿ ಕಾರ್ಯದರ್ಶಿ ಮಿಥುನ್ ಪಜೀರ್ ಸ್ವಾಗತಿಸಿದರು. ಕ್ರೀಡಾ ನಿರ್ದೇಶಕಿ ಸುರೇಖಾ ಎಚ್.ಪೂಜಾರಿ ವಂದಿಸಿದರು. ದ್ವಿತೀಯ ಉಪಾಧ್ಯಕ್ಷ ಅಜಿತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

