
ವಕೀಲೆ, ಸಾಹಿತಿ ರಾಜಶ್ರೀ ಜಯರಾಜ್ ಪೂಜಾರಿ ನಿಧನ
ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ರಾಜಶ್ರೀ ಜಯರಾಜ್ ಪೂಜಾರಿ (ವ.25)ಯವರು ಇಂದು ಕೊನೆಯುಸಿರೆಳೆದಿದ್ದಾರೆ.
ಇವರು ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಇಂದು ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲೇ ಪ್ರಾಣಬಿಟ್ಟಿದ್ದಾರೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು, ನಗುಮೊಗದಿಂದ ಎಲ್ಲರಿಗೂ ಚಿರಪರಿಚಿತರಾಗಿರುವ, ಹವ್ಯಾಸದಲ್ಲಿ ಕವಯಿತ್ರಿ, ಬರಹಗಾರ್ತಿ, ಲೇಖಕಿ, ಯುವಸಾಹಿತಿ, ವಾಗ್ಮಿ, ನಿರೂಪಕಿ, ಕಥಾವಾಚಕಿ, ಹಿನ್ನೆಲೆ ಧ್ವನಿ ಕಲಾವಿದೆ, ಯೋಗಪಟು, ರಂಗಭೂಮಿ ಕಲಾವಿದೆ, ಹವ್ಯಾಸಿ ಪ್ರವಾಸಿ, ಪುಸ್ತಕ ಪ್ರೇಮಿಯಾಗಿ ಹೀಗೆ ಹತ್ತು ಹಲವು ವಿಭಿನ್ನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವೃತ್ತಿಯಲ್ಲಿ ವಕೀಲೆಯಾಗಿರುವ ಸಾಹಿತ್ಯ ಮತ್ತು ಇತರೆ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದಾಕೆ.
ಸರೋಜಿನಿ ಮತ್ತು ಶ ಜಯರಾಜ್ ದಂಪತಿಗಳಿಗೆ ಜನವರಿ 16, 2000 ದಲ್ಲಿ ಬಂಟ್ವಾಳದಲ್ಲಿ ಜನಿಸಿ, ಅಲ್ಲಿಯೇ ತನ್ನ ಪ್ರಾಥಮಿಕ 4 ನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದು, ಮುಂದೆ ಮಂಗಳೂರಿನ ಎಕ್ಕಾರಿನ ಸಮೀಪದ ಪೆರ್ಮುದೆಯಲ್ಲಿ ವಾಸವಿರುವ ಇವರು ನಂತರ ಪ್ರೌಢಶಾಲಾ ಶಿಕ್ಷಣದವರೆಗೆ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಪಡೆದುಕೊಂಡು, ಪದವಿಪೂರ್ವ ಶಿಕ್ಷಣವನ್ನು 2017 ರಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜು, ಕಟೀಲು ಇಲ್ಲಿ ಪಡೆದುಕೊಂಡು, ನಂತರ ತಮ್ಮ ಐದು ವರ್ಷದ ( 2017 -2022 ) ಕಾನೂನು ಶಿಕ್ಷಣವನ್ನು ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ಇದೀಗ ಎರಡು ವರ್ಷದಿಂದ ಮಂಗಳೂರಿನಲ್ಲಿ ವಕೀಲೆಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಇವರ ಕಿರಿಯ ಸಹೋದರ ಮನೋಜ್ ರವರು ಬೆಂಗಳೂರಿನಲ್ಲಿ ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿ ಕ್ಲಿನಿಕಲ್ ಮನೋವಿಜ್ಞಾನದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ.
ಬಾಲ್ಯದಿಂದಲೂ ಇವರು ಓದಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ದಿನಪತ್ರಿಕೆ, ಮಾಸಪತ್ರಿಕೆ, ತುಂತುರು, ಬಾಲಮಂಗಳ, ಗಿಳಿವಿಂಡು, ಮಂಗಳ, ತುಷಾರ, ಸುಧಾ ಮತ್ತು ಕಥೆ, ಕಾದಂಬರಿ ಪುಸ್ತಕ ಇತ್ಯಾದಿ ಪುಸ್ತಕಗಳನ್ನು ಓದುವ ವಿಪರೀತ ಅಭ್ಯಾಸ ಇವರದಾಗಿತ್ತು. ಅದೇ ಅಭ್ಯಾಸ ಇವರನ್ನು ಇಂದು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದರೆ ತಪ್ಪಾಗಲಾರದು. ಕತೆ, ಪ್ರಬಂಧ, ಭಾಷಣ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಹುಮಾನ ಪಡೆಯುವುದರಲ್ಲಿ ಶಾಲಾ ದಿನಗಳಿಂದಲೇ ಇವರು ಮುಂಚೂಣಿಯಲ್ಲಿದ್ದ ವಿದ್ಯಾರ್ಥಿನಿ.



