ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ದೈವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ದರ್ಶನ ಪಾತ್ರಿ ಹೇಳಿದಂತೆ, ಸ್ಥಳೀಯರು ನಡೆಸಿದ ಪ್ರಾರ್ಥನೆಯ ಬೆನ್ನಿಗೆ ಮತ್ತೆ ಅದೇ ಸ್ಥಳಕ್ಕೆ ಕಳವು ನಡೆಸಲು ಬಂದ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಜೀರಿನಲ್ಲಿ ನಡೆದಿದೆ.
ಪಶ್ಚಿಮ ಬಂಗಾಲದ ಮೀರ್ಖಾಸಿಂ ಲಸ್ಕರ್ ಬಂಧಿತ. ಪಜೀರಿನಲ್ಲಿರುವ ಶ್ರೀ ಅರಸು ಮುಂಡಿತ್ತಾಯ ವೈದ್ಯನಾಥ ದೈವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳವು ನಡೆದ ಘಟನೆಗೆ ಸಂಬಂಧಿಸಿ ದೈವಸ್ಥಾನದ ದರ್ಶನ ಪಾತ್ರಿ ಎರಡು ವಾರಗಳೊಳಗೆ ಆರೋಪಿ ಸಿಕ್ಕಿಬೀಳುವುದಾಗಿ, ಅದಕ್ಕಾಗಿ ಸ್ಥಳೀಯರು ಪ್ರಾರ್ಥನೆ ನೆರವೇರಿಸಿದ್ದರು.
ಅದರಂತೆ ಬುಧವಾರ ಮಧ್ಯಾಹ್ನ ವೇಳೆ ಪೊರಕೆ ಮಾರುವ ಮೀರ್ ಖಾಸಿಂ ಲಸ್ಕರ್ ದೈವಸ್ಥಾನದ ಬೀಗವನ್ನು ಒಡೆದು ಒಳನುಗ್ಗಲು ಯತ್ನಿಸುತ್ತಿರುವುದನ್ನು ಕಂಡ ಸ್ಥಳೀಯ ಮಹಿಳೆಯರು ಆತನನ್ನು ಬೆನ್ನಟ್ಟಿ ಹಿಡಿಯುವಲ್ಲಿ ವಿಫಲಗೊಂಡರು. ಈ ಬಗ್ಗೆ ಊರಿನ ಮಂದಿ ಸುದ್ಧಿ ತಿಳಿದು ಮತ್ತೆ ಕಳ್ಳನಿಗಾಗಿ ಹುಡುಕಾಟ ನಡೆಸಿ ದೈವಸ್ಥಾನದಿಂದ 2 ಕಿ.ಮೀ ದೂರದ ಪಾನೇಲ ಎಂಬಲ್ಲಿ ಹಿಡಿದು ಥಳಿಸಿದ್ದಾರೆ. ಬಳಿಕ ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.


