ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಮಗುವಿನ ಸಮೃದ್ಧ ಬೆಳವಣಿಗೆಯಲ್ಲಿ ತಾಯಿಯ ಎದೆ ಹಾಲಿನ ಪಾತ್ರ ಪ್ರಾಮುಖ್ಯತೆ ಪಡೆದಿದ್ದು ಸ್ತನ್ಯಪಾನದ ಮಹತ್ವ ಜನಸಾಮಾನ್ಯರಿಗೆ ತಿಳಿಸುವಲ್ಲಿ ಆಸ್ಪತ್ರೆ ಮತ್ತು ಎನ್ಜಿಓಗಳು ಅವಿರತವಾಗಿ ಶ್ರಮಿಸುತ್ತಿದೆ ಎಂದು ಮಕ್ಕಳ ತಜ್ಞ ಡಾ.ಬಿ.ಸುಮಂತ್ ಶೆಟ್ಟಿ ಹೇಳಿದರು.
ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕೆ.ಎಸ್.ಹೆಗ್ಡೆ ಆಸ್ಪತ್ರೆ ವತಿಯಿಂದ ಆಗಸ್ಟ್ 1ರಿಂದ 7ರತನಕ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ತಮಿಳ್ನಾಡಿನಲ್ಲಿ 352 ಬಸ್ ತಂಗುದಾಣದಲ್ಲಿ ಹಾಲುಣಿಸುವ ತಾಯಂದಿರಿಗಾಗಿಯೇ ಖಾಸಗಿ ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 7 ಕಡೆ ಹಾಲು ಶೀತಲೀಕರಣ ಘಟಕ ಆರಂಭಿಸಿರುವ ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಅವರ ಯೋಜನೆ ಶ್ಲಾಘನೀಯ ಎಂದರು.
ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಹರೀಶ್ ಶೆಟ್ಟಿ ಸ್ತನ್ಯಪಾನ ಸಪ್ತಾಹ ಆಚರಣೆ ಮಹತ್ವದ ಬಗ್ಗೆ ಮಾತನಾಡಿದರು. ಡಾ.ಸ್ವಾತಿ `ಸ್ತನ್ಯಪಾನ ಕೆಲಸಕ್ಕೆ ಹೋಗುವ ಹೆಂಗಸರು’ ಎಂಬ ವಿಚಾರದಲ್ಲಿ ಮಾತನಾಡಿದರು.
ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ವಿಜಯಾ ಶೆಣೈ, ಡಾ.ವಸಂತಿ ಶೆಟ್ಟಿ ಡಾ.ಪುನೀತ್ ಮುಂತಾದವರು ಉಪಸ್ಥಿತರಿದ್ದರು.






