ಕೋಟೆಕಾರು: ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ ಬೀರಿ ಇದರ 53ನೇ ವರ್ಷದ ಸಾರ್ವಜನಿಕ ಬೀರಿ ಗಣೇಶೋತ್ಸವವು ಸ.7ರಿಂದ 9ರ ತನಕ ಶ್ರೀ ಗಣೇಶ ಭಜನಾ ಮಂದಿರ ಆವರಣದಲ್ಲಿ ವಿವಿಧ ವೈದಿಕ , ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸ.7ರಂದು ಬೆಳಿಗ್ಗೆ 6.30ಕ್ಕೆ ಗಣೇಶ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ರೀತಿಯ ಭಕ್ತಿ ಗೀತೆ ಸ್ಪರ್ಧೆ, ಭಾಷಣ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಏಕಾಪಾತ್ರಾಭಿನಯ ಸ್ಪರ್ಧೆ, ಚೀಟಿ ಎತ್ತಿ ಅಭಿನಯ ಸ್ಪರ್ಧೆ ನಡೆಯಲಿದೆ.
ಸಂಜೆ 6ರಿಂದ ನಡೆಯಲಿರು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದ.ಕ ಮಾಜಿ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದು ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಬಾಲಂಭಟ್ ಮನೆತನದ ಡಾ. ಸತ್ಯಕೃಷ್ಣ ಭಟ್ ನಡೆಸಲಿದ್ದಾರೆ.
ಸ.8ರಂದು ಮಧ್ಯಾಹ್ನ 2.30ರಿಂದ ದಿ.ಜಲಂಧರ್ ರೈ ಸ್ಮರಣಾರ್ಥ ಶ್ರೀ ಕೃಷ್ಣ ಸಂಧಾನ ಪ್ರಸಂಗದ ಯಕ್ಷಗಾನ ತಾಳ ಮದ್ದಳೆ ನಡೆಯಲಿದೆ. ಸಂಜೆ 6ರಿಂದ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಮ್ಮ ಕುಡ್ಲ ಚಾನೆಲ್ ನಿರ್ದೇಶಕ ಲೀಲಾಕ್ಷ ಕರ್ಕೆರ ದೀಪ ಪ್ರಜ್ವಲನೆ ನಡೆಸಲಿದ್ದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್ .ಕೆ.ಪುರುಷೋತ್ತಮ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಅಂಬಾವನ ಧರ್ಮ ಶಿಕ್ಷಣ ಕೇಂದ್ರ ತೊಕ್ಕೊಟ್ಟು ಪ್ರಧಾನ ಸಂಚಾಲಕ ಡಾ.ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಸಂದರ್ಭದಲ್ಲಿ ಸನ್ಮಾನ ನಡೆಯಲಿದೆ. ರಾತ್ರಿ 8 ರಿಂದ ಕಿಶೋರ್ ಡಿ ಶೆಟ್ಟಿ ನಿರ್ಮಾಣ ಹಾಗೂ ನಿರ್ದೇಶನದ ಗರುಡ ಪಂಚಮೆ ಎಂಬ ತುಳು ನಾಟಕ ನಡೆಯಲಿದೆ.
ಸ.9ರಂದು ಸಂಜೆ 4.30ರಿಂದ ಪ್ರಸಿದ್ಧ ಗಾಯಕರಿಂದ ಸ್ವರಭಾವ ಲಹರಿ ನಡೆಯಲಿದೆ.
ಸಂಜೆ 4ಗಂಟೆಗೆ ಶ್ರೀ ಮಹಾಗಣಪತಿ ಶೋಭಾ ಯಾತ್ರೆಯು ಉತ್ಸವದ ಸ್ಥಳದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ತಲಪಾಡಿ ಗೆ ಹೋಗಿ ಅಲ್ಲಿಂದ ತಿರುಗಿ ಕೋಟೆಕಾರಿಗೆ ಬಂದು ಸೋಮೇಶ್ವರ ಮಾರ್ಗವಾಗಿ ಶ್ರೀ ಸೋಮನಾಥ ದೇವಸ್ಥಾನ ದ ಬಳಿ ಕಡಲ ಕಿನಾರೆಗೆ ಬಂದು ವಿಗ್ರಹ ಜಲವಿಸರ್ಜನೆಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.


