ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಯುವಜನತೆ ಆಧುನಿಕ ಅಬ್ಬರಕ್ಕೆ ಮಾರುಹೋಗಿ ವಿದೇಶಿ ಆಹಾರ ಪದ್ಧತಿಯಿಂದ ಅನೇಕ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ತುಳುನಾಡಿನ ಆಹಾರ ಪದ್ಧತಿ, ಸಂಸ್ಕಾರದ ಬಗ್ಗೆ ವಿವಿಧ ಹಬ್ಬಗಳ ಆಚರಣೆ ಮೂಲಕ ಅರಿವು ಮೂಡಿಸಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಆವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರ, ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿ, ದ.ಕ.ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಯುವ ಸಬಲೀಕರಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವಠಾರದಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವ ಮತ್ತು ಆಟಿಡೊಂಜಿ ಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಆಟಿ ತಿಂಗಳು ಕಷ್ಟಕರ ದಿನವಾಗಿತ್ತು ಆದರೆ ಇಂದು ಆಟಿ ಆಚರಣೆ ಗಮನಿಸಿದಾಗ ಸುಖಕರ ದಿನದಂತೆ ಭಾಸವಾಗುತ್ತಿದೆ. ತುಳುನಾಡಿನ ಜನಪ್ರಿಯ ಕಾರ್ಯಕ್ರಮಗಳನ್ನು ಆಯಾಯ ಕಾಲಕ್ಕೆ ಅನುಗುಣವಾಗಿ ಪರಿಚಯಿಸುವುದರಿಂದ ತುಳುನಾಡಿನ ಸಮಸ್ತ ಜನರನ್ನು ಒಂದೆಡೆ ಸೇರಿಸಲು ಸಹಕಾರಿಯಾಗುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ ಕ್ರೀಡೆಗಳನ್ನು ನಡೆಸಲು ರಾಜ್ಯ ಸರ್ಕಾರ ಅನುದಾನ ನೀಡುತ್ತಿದ್ದು ಜಿಲ್ಲಾ ಪಂಚಾಯಿತಿ ಮೂರು ಹೋಬಳಿಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ದೊರಕಿದೆ. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಜಿಲ್ಲಾ ಪಂಚಾಯಿತಿ ಸದಸ್ಯರಿದ್ದು ಈ ಕ್ಷೇತ್ರದ ಸದಸ್ಯರ ಕಾರ್ಯವೈಖರಿ ಇಲ್ಲಿಗೆ ಪ್ರಥಮ ಆದ್ಯತೆಯಡಿಯಲ್ಲಿ ಗ್ರಾಮೀಣ ಕ್ರೀಡೆಗೆ ಆಯೋಜಿಸಲು ಅವಕಾಶ ನೀಡಲಾಗಿದೆ. ಕುಂಪಲದ ಕಾರ್ಯಕ್ರಮ ಎಲ್ಲಾ ಭಾಗಕ್ಕಿಂತಲೂ ಭಿನ್ನವಾಗಿ ಮೂಡಿ ಬಂದಿದೆ ಎಂದು ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ಕ್ರೀಡಾಧಿಕಾರಿ ಲಿಲ್ಲಿ ಪಾಯಸ್ ಶ್ಲಾಘಿಷಿಸಿದರು.
ಆಟಿ ತಿಂಗಳು ಹಿಂದಿನ ದಿನಗಳನ್ನು ನೆನಪಿಸುವ ಮಾದರಿಯಲ್ಲೇ ಕಾರ್ಯಕ್ರಮ ನಡೆಸಲಾಗುತ್ತಿದೆ, ಗ್ರಾಮೀಣ ಕ್ರೀಡಾಕೂಟ ಮೈದಾನದಲ್ಲಿ ಆಚರಿಸುವ ಬದಲು ಗದ್ದೆಯಲ್ಲಿ ಆಚರಿಸುವಂತೆ ಹಲವರು ಬೇಡಿಕೆ ಇಡುತ್ತಿದ್ದು ಈ ನಿಟ್ಟಿನಲ್ಲಿ ಮುಂದಿನ ವರ್ಷ ಗದ್ದೆಯಲ್ಲೇ ಕಾರ್ಯಕ್ರಮ ನಡೆಸಲಾಗುವುದು ಎಂದು ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ತಿಳೀಸಿದರು.
ಕುಂಪಲ ಶಾಲಾ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.
ಸುಧಾ ಎಸ್.ಶೆಟ್ಟಿ ಅಸೈಗೋಳಿ ಆವರು ಆಹಾರೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ, ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲ ನಾೈಕ್, ಕುಂಪಲ ಕೇಸರಿ ಸೇವಾ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಮಂಗಳೂರು ಆರ್ಯ ಮರಾಠ ಸಂಘದ ಅಧ್ಯಕ್ಷ ದೇವೋಜಿ ರಾವ್, ಕರ್ಣಾಟಕ ಬ್ಯಾಂಕ್ ಕೋಟೆಕಾರ್ ಶಾಖೆ ವ್ಯವಸ್ಥಾಪಕ ತಿರುಮಲೇಶ್, ಮಂದಿರದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಪ್ರಧಾನ ಕಾರ್ಯದರ್ಶಿ ವಿಶ್ವಾಸ್ ಕುಲಾಲ್, ಉತ್ಸವ ಸಮಿತಿ ಗೌರವಾಧ್ಯಕ್ಷ ಲಕ್ಷ್ಮಣ ಕಿರೋಡಿಯನ್, ಪ್ರಧಾನ ಕಾರ್ಯದರ್ಶಿ ಸುಕುಮಾರ್ ಭಟ್, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ಗೋವಿಂದನ್, ಅಧ್ಯಕ್ಷೆ ನಳಿನಿ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಶರ್ಮಿಳಾ ಅಶೋಕ್ ಉಪಸ್ಥಿತರಿದ್ದರು.
ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.
108 ಬಗೆಗಳ ತಿಂಡಿ
ಕಾರ್ಯಕ್ರಮದಲ್ಲಿ ಆಷಾಢ ಮಾಸದಲ್ಲಿ ತಯಾರಿಸುತ್ತಿದ್ದಂತಹ 108 ಬಗೆಗಳ ತಿಂಡಿ ತಿನುಸುಗಳು ಗಮನಸೆಳೆಯಿತು. ಕಡ್ಲೆ ಬಲ್ಯಾರ್, ತೇಟ್ಲ ಪುಲಿಮುಂಚಿ, ಕೋರಿ ರೊಟ್ಟಿ (ಕೋಳಿ ರೊಟ್ಟಿ), ಪದೆಂಗಿ ಗಸಿ( ಹೆಸರು ಖಾದ್ಯ) , ಸಾಂತಣಿ (ಹಲಸಿನ ಬೀಜದ ಖಾದ್ಯ), ಅರಿತ ಉಂಡೆ(ಅಕ್ಕಿ ಉಂಡೆ), ಗೋಧಿದ ಪಾಯಸ( ಗೋಧಿ ಪಾಯಸ) , ಉಪ್ಪಡ್(ಉಪ್ಪಿನಕಾಯಿ), ಕುಕ್ಕು ಚಟ್ನಿ (ಮಾವಿನಕಾಯಿ ಚಟ್ನಿ), ತಿಮರೆ ಚಟ್ನಿ, ಸಂಬಾರಬಳ್ಳಿದ ಇರೆತ ಚಟ್ನಿ(ಸಂಬಾರಬಳ್ಳಿ ಎಲೆಯ ಚಟ್ನಿ) , ತೆಕ್ಕರೆ ಚಟ್ನಿ( ಮುಳ್ಳು ಸೌತೆ), ತೊರಕೆ ಚಟ್ನಿ ( ಸೊರಕೆಮೀನಿನ ಚಟ್ನಿ), ಎಟ್ಟಿ ಪುಡಿ ಚಟ್ನಿ ( ಸಿಗಡಿ ಹುಡಿ ಚಟ್ನಿ), ಕುಡುತ ಚಟ್ನಿ (ಹುರುಳಿ ಚಟ್ನಿ), ಪತ್ರಡ್ಯ (ತೇವು ಎಲೆ ಹಾಗೂ ಅಕ್ಕಿ ಗಟ್ಟಿ) , ಪೆಲಕಾಯಿದ ಗಟ್ಟಿ(ಹಲಸಿನಹಣ್ಣಿನ ಗಟ್ಟಿ), ಸೇಮದ ಅಡ್ಯೆ (ಶ್ಯಾವಿಗೆ), ಕಂಚಲ(ಹಾಗಲ ಕಾಯಿ), ಮೊದಲಾದ ತಿಂಡಿ ತಿನಿಸುಗಳನ್ನು ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿ ಸದಸ್ಯರು ತಯಾರಿಸಿ ಉಣಬಡಿಸಿದರು.
ಗಮನಸೆಳೆದ ಮೆರವಣಿಗೆ
ಆಟಿಡ್ ಒಂಜಿ ಕೂಟ ಕಾರ್ಯಕ್ರಮದ ಪ್ರಯುಕ್ತ ಮೂರುಕಟ್ಟೆ ಪ್ರೌಢ ಶಾಲೆಯ ಮೈದಾನದಿಂದ ಶ್ರೀ ಬಾಲಕೃಷ್ಣ ಮಂದಿರದವರೆಗೆ ಮೆರವಣಿಗೆ ನಡೆಯಿತು. ಆಟಿ ಕಳೆಂಜ, ಚಂಡ-ಮುಂಡ, ಹುಲಿವೇಶ, ಅಗೋಳಿ ಮಂಜಣ್ಣ ವೇಷÀಗಳು ಗಮನ ಸೆಳೆಯಿತು. ಆದರಲ್ಲೂ ಮಹಿಷನ ಆರ್ಭಟ ಜೋರಾಗಿತ್ತು. ಗ್ರಾಮೀಣ ಕ್ರೀಡಾ ವಿಭಾಗದಲ್ಲಿ ಹಗ್ಗ ಜಗ್ಗಾಟ, ಮಡಕೆ ಒಡೆಯುವುದು, ಹಿಮ್ಮುಖ ಓಟ, ಗೋಣಿಚೀಲ ಓಟ, ಉಪ್ಪು ಮುಡಿ, ನೀರು ಹೊರುವ ಸ್ಪರ್ಧೆ ಸಂಗೀತ ಕುರ್ಚಿ, ತೆಂಗಿನ ಗರಿ ಹೆಣೆಯುವುದು, ಮೂಡೆ ಕಟ್ಟುವುದು ಹಾಗೂ ಗ್ರಾಮೀಣ ಆಟೋಟ ಸ್ಪರ್ಧೆಗಳು ನಡೆದವು.

































































































