UN networks
ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ಕೆ.ಸಿ ರೋಡ್ ಅಜ್ಜಿನಡ್ಕ ಎಂಬಲ್ಲಿ ಮೀನಿನ ವ್ಯಾಪಾರಿ ರೌಡಿಶೀಟರ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಖತರ್ ನಾಕ್ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಫೈಸಲ್ ನಗರ ನಿವಾಸಿ ತಲ್ಲತ್ ಯಾನೆ ಫೈಸಲ್ ನಗರ ತಲ್ಲಾತ್ (35) ಬಂಧಿತ. ಈ ಹಿಂದೆ ಆಚಿ ,ನೌಫಾಲ್,ಅಶ್ಫಾಕ್,ನಿಸಾಕ್,ರಿಫತ್ ಆಲಿ,ರಹೀಮ್ ಎಂಬವರನ್ನು ಬಂಧಿಸಲಾಗಿತ್ತು.
ಪ್ರಕರಣ: ಮೇ.26 ರಂದು ಮೂಲತ: ಕುದ್ರೋಳಿ ನಿವಾಸಿ ಸದ್ಯ ಕೆ.ಸಿ ರೋಡ್ ಅಜ್ಜಿನಡ್ಕ ಬಳಿ ನೆಲೆಸಿದ್ದ ಆರೀಫ್ ಎಂಬಾತನನ್ನು , ಮಂಗಳೂರು ಮೀನಿನ ಧಕ್ಕೆಗೆ ಕೆಲಸಕ್ಕೆಂದು ತೆರಳುವ ಸಂದರ್ಭ ಬಂಧಿತ ತಲ್ಲಾತ್ ನೇತೃತ್ವದ ಏಳು ಮಂದಿಯ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿತ್ತು. ತಲವಾರು ದಾಳಿಗೊಳಗಾದ ಆರೀಫ್ ವಿರುದ್ಧ ಮಂಗಳೂರಿನ ಕಂಕನಾಡಿ, ಬಂದರು ಪೊಲೀಸ್ ಠಾಣೆಗಳಲ್ಲಿ 11 ಪ್ರಕರಣಗಳಿದ್ದು, ರೌಡಿಶೀಟರ್ ಆಗಿದ್ದಾನೆ. ಆದರೆ ಅಂದು ನಡೆದ ದಾಳಿ ಮೀನಿನ ವ್ಯಾಪಾರ ಸಂಬಂಧಿಸಿದ ಹಣದ ವಿಚಾರಕ್ಕಾಗಿತ್ತು ಅನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು.
ನಟೋರಿಯಸ್ ರೌಡಿ ತಲ್ಲಾತ್ ಫರಂಗಿಪೇಟೆ ಡಬಲ್ ಮರ್ಡರ್ ಕೇಸಿನ ಪ್ರಮುಖ ಆರೋಪಿಯಾಗಿದ್ದ. ಈತನ ಸಹಚರ ನೌಫಾಲ್ ಯಾನೆ ಟೊಪ್ಪಿ ನೌಫಾಲ್ ಕೂಡಾ ಫರಂಗಿಪೇಟೆ ಡಬಲ್ ಮರ್ಡರ್ ಆರೋಪಿ. ನೌಫಾಲ್ ಚಿಕ್ಕಪ್ಪನಿಗೆ ತಲವಾರು ದಾಳಿಗೊಳಗಾದ ಆರೀಫ್ , ರೂ.68,000 ಮೀನಿನ ಏಲಂ ವ್ಯವಹಾರದ ಹಣ ಆಗಬೇಕಿತ್ತು. ಆದರೆ ದೂರವಾಣಿ ಮೂಲಕ ನೌಫಾಲ್ ಹಣ ಕೇಳಿದ್ದಾಗ, ಇಬ್ಬರ ನಡುವೆ ಚರ್ಚೆಯುಂಟಾಗಿತ್ತು. ಇದೇ ವೈಷಮ್ಯಕ್ಕೆ ಸಂಬಂಧಿಸಿ ತಲ್ಲಾತ್, ನೌಫಾಲ್ ಸಹಿತ ಏಳುಮಂದಿಯ ತಂಡ ಸೇರಿಕೊಂಡು ಕೊಲೆಗೆ ಯತ್ನಿಸಿದ್ದಾರೆ. ತಲ್ಲಾತ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸಹಿತ ಹಲವು ಪ್ರಕರಣಗಳಿವೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಟೋರಿಯಸ್ ರೌಡಿಯಾಗಿದ್ದಾನೆ.


